ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ: ಶ್ಲೋಕ ಹಾಡಿ ಬಿಜೆಪಿಯನ್ನು ಕಿಚಾಯಿಸಿದ ಡಿಕೆಶಿ
ಬೆಂಗಳೂರು, ಮಾರ್ಚ್ 22: ಹಿಜಾಬ್, ಕಾಶ್ಮೀರ್ ಫೈಲ್ಸ್ ವಿಚಾರದ ನಂತರ ಶಾಲಾಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ತರುವ ವಿಚಾರ ಕಾವೇರುತ್ತಿದೆ. ಭಾವನಾತ್ಮಕ ವಿಚಾರವಾಗಿರುವುದರಿಂದ ಕಾಂಗ್ರೆಸ್ ನಾಯಕರು ಅಳೆದುತೂಗಿ ಹೇಳಿಕೆಯನ್ನು ನೀಡುತ್ತಿದ್ದಾರೆ.
"ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಸಚಿವರು ಪ್ರಸ್ತಾಪ ಇಟ್ಟಿದ್ದಾರೆ" ಎಂದು ಈಗಾಗಲೇ ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಠ್ಯ ಪುಸ್ತಕದಲ್ಲಿ ಇದನ್ನು ಸೇರಿಸುವ ಸುಳಿವನ್ನು ನೀಡಿದ್ದಾರೆ.
ನಾಲ್ಕು ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ
ಭಗವದ್ಗೀತೆಯ ವಿಚಾರದಲ್ಲಿ ಪರವಿರೋಧ ಧ್ವನಿಗಳು ಜೋರಾಗಿ ಏಳುತ್ತಿದ್ದು, "ಭಗವದ್ಗೀತೆಯನ್ನು ನಮ್ಮ ಕುಟುಂಬದಲ್ಲೇ ನಮ್ಮ ತಂದೆ-ತಾಯಿ, ಹಿರಿಯರು ಹೇಳಿಕೊಟ್ಟಿರುತ್ತಾರೆ. ಸರಕಾರದ ಕೆಲಸ ಏನಿದ್ದರೂ ಉತ್ತಮ ಶಿಕ್ಷಣ ನೀಡಿ ಮಕ್ಕಳ ಬದುಕನ್ನು ಕಟ್ಟಿಕೊಡುವುದು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಂಥ ವಿಚಾರಗಳು, ಪಠ್ಯಗಳು ಶಾಲೆಗಳಲ್ಲಿ ಇರಬೇಕು" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರವನ್ನು ಟೀಕಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಭಗವದ್ಗೀತೆ ಶ್ಲೋಕವನ್ನು ಉಚ್ಚರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, "ಜನರು ಬುದ್ದಿವಂತರಿದ್ದಾರೆ, ಇಂತಹ ನಡೆಗಳಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ"ಎಂದು ಹೇಳಿದರು.
ಭಗವದ್ಗೀತೆ ಓದಿದವರು ಭಯೋತ್ಪಾದಕರು ಆಗಲ್ಲ; ಸಿಟಿ ರವಿ
ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ
"ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್. ಈ ರೀತಿ ಭಗವದ್ಗೀತೆಯ 23 ಶ್ಲೋಕಗಳನ್ನು ನಾನು ಹೇಳಬಲ್ಲೆ. ನಾವು ಕೂಡಾ ಹಿಂದೂಗಳು, ಗೀತೆಯ ಹಲವು ವಿಚಾರಗಳು ಈಗಾಗಲೇ ಶಾಲಾಪಠ್ಯ ಪುಸ್ತಕದಲ್ಲಿದೆ, ಬಿಜೆಪಿಯವರು ಏನು ಹೊಸದಾಗಿ ತರುವುದು. ಈ ಕೆಲಸವನ್ನು ನಮ್ಮ ಹಿಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರು ಆಗಲೇ ಮಾಡಿದ್ದರು" ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಸರಕಾರದ ಒಡೆತನದ ದೂರದರ್ಶನದಲ್ಲಿ ರಾಮಾಯಣ, ಮಹಾಭಾರತ
"ಕಾಂಗ್ರೆಸ್ಸಿಗೆ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ, ಸರಕಾರದ ಒಡೆತನದ ದೂರದರ್ಶನದಲ್ಲಿ ರಾಮಾಯಣ, ಮಹಾಭಾರತವನ್ನು ಆ ಕಾಲದಲ್ಲೇ ತೋರಿಸಿದವರು. ಆ ಕಾರ್ಯಕ್ರಮ ದೂರದರ್ಶನದಲ್ಲಿ ಬರುತ್ತಿರಬೇಕಾದರೆ, ರಸ್ತೆಯೆಲ್ಲಾ ಬಿಕೋ ಎನ್ನುತ್ತಿದ್ದವು. ಆ ಧಾರವಾಹಿಗಳ ಮೂಲಕ ರಾಜೀವ್ ಗಾಂಧಿಯವರು ಬರೀ ಮಕ್ಕಳಿಗೆ ಮಾತ್ರವಲ್ಲಾ ಎಲ್ಲಾ ವರ್ಗದವರಿಗೂ ಫೌಂಡೇಶನ್ ಹಾಕಿಕೊಟ್ಟಿದ್ದಾರೆ"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸರಕಾರ ಭ್ರಷ್ಟಾಚಾರದ ಪರಮಾವಧಿಯಲ್ಲಿ ತೊಡಗಿಕೊಂಡಿದೆ, ಡಿಕೆಶಿ
"ಧರ್ಮವನ್ನು ಒಡೆದು, ಸಮಾಜದಲ್ಲಿ ಅಶಾಂತಿಯನ್ನು ತಂದು, ಭಾವನಾತ್ಮಕ ವಿಚಾರವನ್ನು ಮುನ್ನಲೆಗೆ ತರುವುದು ಬಿಜೆಪಿಯವರ ಗುಣ. ನಮ್ಮ ಜನರು ದಡ್ಡರಲ್ಲ, ಇವರ ಎಲ್ಲಾ ಡ್ರಾಮಾಗಳನ್ನು ಜನರು ಅರಿತಿದಿದ್ದಾರೆ. ಸರಕಾರ ಭ್ರಷ್ಟಾಚಾರದ ಪರಮಾವಧಿಯಲ್ಲಿ ತೊಡಗಿಕೊಂಡಿದೆ. ಬೋರ್ ವೆಲ್ ಕೊರೆಯುವ ವಿಚಾರದಲ್ಲಿ ಕರಪ್ಸನ್ ತಾಂಡವಾಡುತ್ತಿದೆ, ಒನ್ ಟು ಡಬಲ್ ಜಾಸ್ತಿ ತೋರಿಸಲಾಗುತ್ತಿದೆ"ಎಂದು ಡಿ.ಕೆ.ಶಿವಕುಮಾರ್ ಸರಕಾರದ ವಿರುದ್ದ ಆಪಾದಿಸಿದ್ದಾರೆ.
ನಾನು ಹುಟ್ಟಿರುವುದೂ ಹಿಂದೂ ಕುಟುಂಬದಲ್ಲೇ, ಎಚ್.ಡಿ.ಕುಮಾರಸ್ವಾಮಿ
"ನಾನು ಹಿಂದೂ ಬಂಧುಗಳಲ್ಲಿ ಮನವಿ ಮಾಡುತ್ತೇನೆ, ನಾನು ಹುಟ್ಟಿರುವುದೂ ಹಿಂದೂ ಕುಟುಂಬದಲ್ಲೇ. ನಮ್ಮ ಕುಟುಂಬವು ದೈವದಲ್ಲಿ ಬಹಳ ನಂಬಿಕೆ ಇಟ್ಟು ಶ್ರದ್ಧೆಯಿಂದ ನಡೆದುಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ಯದಲ್ಲಿ ಕೇವಲ ಮತಬ್ಯಾಂಕ್ಗಾಗಿ ಇಂತಹ ಸೂಕ್ಷ್ಮ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಒಂದು ಕಾಲದಲ್ಲಿ ವಿದ್ಯೆ ಎನ್ನುವುದು ಒಂದು ವರ್ಗಕ್ಕೆ ಮಾತ್ರ ಸೇರಿದ್ದು ಎನ್ನುವ ವಾತಾವರಣ ಇತ್ತು. ಇವತ್ತು ಅದೇ ವರ್ಗದ ಜನರೇ ಈ ರೀತಿಯ ವಾತಾವರಣ ಎಲ್ಲರ ಮೇಲೂ ಹೇರಲು ಹೊರಟಿದ್ದಾರೆ" ಎಂದು ಕುಮಾರಸ್ವಾಮಿ ಅವರು ಸರಕಾರವನ್ನು ಕಟುವಾಗಿ ಟೀಕಿಸಿದ್ದರು.