ಮೂವರು ನಾಯಕರ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ: ಡಿಕೆಶಿ
ಬೆಂಗಳೂರು, ಜ 7: ಮೇಕೆದಾಟು ಪಾದಯಾತ್ರೆಯ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದು ಕಡೆಯಾದರೆ, ಕಾಂಗ್ರೆಸ್ ಇನ್ನೊಂದು ಕಡೆ. ಸರಕಾರ ಏನೇ ನಿಯಮವನ್ನು ರೂಪಿಸಿದರೂ ನಮ್ಮ ಪಾದಯಾತ್ರೆ ನಿಗದಿಯಾದಂತೆ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡರು ಪಣ ತೊಟ್ಟಿದ್ದಾರೆ.
ಸೆಕ್ಷನ್ 144 ಹಾಕಿದರೆ ನಾವು ನಾಲ್ವರು ಮಾತ್ರ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮಾತಿಗೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಮತ್ತು ಸಿದ್ದರಾಮಯ್ಯ ಮಾತ್ರ ಭಾಗವಹಿಸಲಿದ್ದೇವೆ ಎಂದು ಹೇಳಿದ್ದಾರೆ.
"ಡಿ.ಕೆ.ಶಿವಕುಮಾರ್ ಬಿಡಿ, ಕೆಪಿಸಿಸಿ ಅಧ್ಯಕ್ಷರು ನನ್ನ ಸ್ನೇಹಿತರು, ಸಿದ್ದರಾಮಣ್ಣನಿಗೆ ಏನಾಗಿದೆ, ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಯಾಗಿದ್ದವರು, ಈ ನಾಡಿನ ಕಾನೂನಿನ ಬಗ್ಗೆ ಅರಿವಿಲ್ಲವೇ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಪಿಸಿಸಿಯ ಮೇಕೆದಾಟು ಪಾದಯಾತ್ರೆಗೆ ಪ್ರತಿಕ್ರಿಯೆ ನೀಡಿದ್ದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಡಿ.ಕೆ.ಶಿವಕುಮಾರ್, "ನನಗೆ ಮೂವರು ನಾಯಕರ ಬಗ್ಗೆ ಮಾತನಾಡುವಷ್ಟು ಶಕ್ತಿಯಿಲ್ಲ, ಅವರೇ ದೊಡ್ಡವರು ಬಿಡಿ"ಎಂದು ವ್ಯಂಗ್ಯವಾಡುತ್ತಾ, ಬರೆದಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೂ ಈ ಮಾತನ್ನು ಪುನರುಚ್ಚಿಸಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಎಲ್ಲಾ ಪೂರ್ವ ತಯಾರಿ ನಡೆದಿದೆ
"ಮೇಕೆದಾಟು ಪಾದಯಾತ್ರೆಗೆ ಎಲ್ಲಾ ಪೂರ್ವ ತಯಾರಿ ನಡೆದಿದೆ. ಸೆಕ್ಷನ್ 144 ಹಾಕಿರುವ ವಿಚಾರ ನಮಗೆ ತಿಳಿದಿದೆ. ನಾವು ಕಾನೂನು ಮೀರಿ ಯಾತ್ರೆಯನ್ನು ಮಾಡುವುದಿಲ್ಲ. ಎಲ್ಲರಿಗೂ ಮಾಸ್ಕ್, ಸ್ಯಾನಿಟೈಷರ್ ವಿತರಿಸುತ್ತೇವೆ, ಕೋವಿಡ್ ನಿಯಮವನ್ನು ಪಾಲಿಸುತ್ತೇವೆ. ಕೊರೊನಾ ಮಾರ್ಗಸೂಚಿಯ ಪ್ರಕಾರವೇ ನಡೆಯುತ್ತೇವೆ. ಅದಕ್ಕೂ ಸರಕಾರ ತಡೆಯೊಡ್ಡಿದ್ದರೆ, ನಾನು ಮತ್ತು ಸಿದ್ದರಾಮಯ್ಯನವರು ಮಾತ್ರ ಪಾದಯಾತ್ರೆ ಮಾಡುತ್ತೇವೆ. ನಮಗೇನಾದರೂ ಆದರೆ, ಎತ್ತಿಕೊಂಡು ಹೋಗಲು ನೀವಿದ್ದೀರಲ್ಲವೇ" ಎಂದು ಮಾಧ್ಯಮದವರಿಗೆ ಡಿಕೆಶಿ ಹೇಳಿದರು.

ಕುಮಾರಸ್ವಾಮಿಯವರು ಪಾಪ ದೊಡ್ದವರಿದ್ದಾರೆ
ಕಾಂಗ್ರೆಸ್ ಸರಕಾರದಲ್ಲಿ ಡಿಪಿಆರ್ (ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಆಗಿರಲಿಲ್ಲ, ಅವರು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ ಎನ್ನುವ ಎಚ್.ಡಿ.ಕುಮಾರಸ್ವಾಮಿಯವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, "ಪಾಪ ಅವರೆಲ್ಲಾ ದೊಡ್ದವರಿದ್ದಾರೆ, ಅವರ ಮಾತಿಗೆ ಉತ್ತರಿಸುವಷ್ಟು ಶಕ್ತಿ ನನಗಿಲ್ಲ. ಅವರೆಲ್ಲಾ ಹಿರಿಯರು, ನಮ್ಮದೇನೂ ಇಲ್ಲ. ಕುಮಾರಸ್ವಾಮಿ, ಗೋವಿಂದ ಕಾರಜೋಳ, ಅಶೋಕಣ್ಣ ಆ ನಾಯಕರ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ"ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.

ನಾವು ಕಾಂಗ್ರೆಸ್ಸಿನವರು ರಾಜ್ಯಕ್ಕೆ ಏನನ್ನೂ ಮಾಡಿಲ್ಲ,
"ನಾವು ಕಾಂಗ್ರೆಸ್ಸಿನವರು ರಾಜ್ಯಕ್ಕೆ ಏನನ್ನೂ ಮಾಡಿಲ್ಲ, ಎಲ್ಲಾ ಅವರೇ ಮಾಡಿರುವುದು. ಅಶೋಕ್ ಅಣ್ಣ ಹೇಳಿದಂತೆ ಮೇಕೆದಾಟಿಗೆ ಹೋಗಿ, ಮೇಕೆ ನೋಡಿಕೊಂಡು ಬರುತ್ತೇವೆ. ಮುಖ್ಯಮಂತ್ರಿಗಳಿಗೆ ನಾವು ಮನವಿಯನ್ನು ಮಾಡುತ್ತೇವೆ, ಏನು ಜಿಲ್ಲಾಧಿಕಾರಿಗಳಿಂದ ಆರ್ಡರ್ ಮಾಡಿಸಿದ್ದೀರಲ್ವಾ ಇದು ನಿಮಗೆ ಶೋಭೆ ತರುವುದಿಲ್ಲ. ಕೆಲವು ಅಧಿಕಾರಿಗಳ ಜೊತೆ ನಾನು ರಿಯಾಲಿಟಿ ಚೆಕ್ ಅನ್ನು ಮಾಡಿಸಿದ್ದೇನೆ. ಕೊರೊನಾ ಎಲ್ಲಿದೆ, ಒಬ್ಬರು ಕೂಡಾ ಐಸಿಯುನಲ್ಲಿ ಇಲ್ಲ"ಎಂದು ಡಿ.ಕೆ.ಶಿವಕುಮಾರ್ ಸರಕಾರದ ವಿರುದ್ದ ಕಿಡಿಕಾರಿದರು.

ಕೊರೊನಾ ವಿಚಾರದ ಬಗ್ಗೆ ನಮ್ಮದೇ ಮೂಲಗಳಿಂದ ಮಾಹಿತಿ
"ಕೊರೊನಾ ವಿಚಾರದ ಬಗ್ಗೆ ನಮ್ಮದೇ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದೇವೆ, ಮಾಧ್ಯಮಗಳ ಮುಂದೆ ಎಲ್ಲವನ್ನೂ ಬಿಚ್ಚಿಡುತ್ತೇವೆ. ಎಲ್ಲಾ ಶಾಸಕರು ನಾಳೆ (ಜ 8) ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಕನಕಪುರ ಸೇರಲಿದ್ದಾರೆ. ಬುಕ್ ಮಾಡಿರುವ ಲಾಡ್ಜ್ ಗಳನ್ನು ಪೊಲೀಸರಿಂದ ಬೆದರಿಕೆ ಹಾಕಿಸಿ ಕ್ಯಾನ್ಸಲ್ ಮಾಡಿಸಲಾಗುತ್ತಿದೆ. ನಮ್ಮನ್ನೆಲ್ಲಾ ಜೈಲಿಗೆ ಕಳುಹಿಸಬೇಕೆಂದು ಇದ್ದರೆ, ಜೈಲಿಗೆ ಹೋಗಲು ನಾವು ಸಿದ್ದ. ರಾಜ್ಯದ ಹಿತಕ್ಕೆ ನಾವೆಲ್ಲರೂ ಅದನ್ನು ಎದುರಿಸಲು ಸಿದ್ದರಿದ್ದೇವೆ"ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆಯನ್ನು ನೀಡಿದರು.












Click it and Unblock the Notifications