Congress Manifesto: ತಾಂಬೂಲದ ಮೇಲೆ ಪ್ರಣಾಳಿಕೆ, ಅರಸಿನ ಕುಂಕುಮ ಬೀರಿ ಬಿಡುಗಡೆ ಮಾಡಿದ ಖರ್ಗೆ, ಸಿದ್ದು, ಡಿಕೆಶಿ
ಬೆಂಗಳೂರು, ಮೇ 2: ನಗರದ ಶಾಂಗ್ರಿಲಾ ಪಂಚತಾರಾ ಹೊಟೇಲಿನಲ್ಲಿ ಕಾಂಗ್ರೆಸ್ ತನ್ನ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಂಪ್ರದಾಯಿಕ ಟಚ್ ಅನ್ನು ನೀಡಿದ್ದಾರೆ.
ಪ್ರಣಾಳಿಕೆ (Congress Manifesto) ಬಿಡುಗಡೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಸ್ತುವಾರಿ ರಣದೀಪ ಸುರ್ಜೇವಾಲ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕೈಪಕ್ಷದ ಮುಖಂಡರು ಹಾಜರಿದ್ದರು.

ಪ್ರಾಸ್ತಾವಿಕ ಭಾಷಣವನ್ನು ಡಾ.ಪರಮೇಶ್ವರ್ ಮಾಡಿದ ನಂತರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ತಾಂಬೂಲವಿರುವ ತಟ್ಟೆ/ಬುಟ್ಟಿಯಲ್ಲಿ shidಪ್ರಣಾಳಿಕೆಯ ಪುಸ್ತಕವನ್ನು ಇಡಲಾಗಿತ್ತು. ಅದನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯನವರಿಗೆ ನೀಡುವ ಮುನ್ನ ಅರಸಿನ ಕುಂಕುಮ ಇರುವ ಡಬ್ಬವನ್ನು ಇಬ್ಬರಿಗೂ ಡಿಕೆಶಿ ನೀಡಿ ಪ್ರಣಾಳಿಕೆಯ ಮೇಲೆ ಹಾಕುವಂತೆ ಹೇಳಿದರು.
ಮೊದಲು ಖರ್ಗೆಯವರು ಡಿಕೆಶಿ ಮುಖ ನೋಡಿ ನಂತರ ಪ್ರಣಾಳಿಕೆಯ ಮೇಲೆ ಅರಸಿನ, ಕುಂಕುಮ ಬೀರಿದರು. ಇದಾದ ನಂತರ ಸಿದ್ದರಾಮಯ್ಯನವರಿಗೂ ಹೀಗೆ ಮಾಡುವಂತೆ ಮನವಿ ಮಾಡಿಕೊಂಡರು. ಸಿದ್ದರಾಮಯ್ಯನವರು ಡಿಕೆಶಿ ಸೂಚಿಸಿದ್ದನ್ನು ಖುಷಿಯಿಂದ ಮಾಡಿದರೂ, ಖರ್ಗೆಯವರ ಮುಖದಲ್ಲಿ ಗೆಲುವು ಇರಲಿಲ್ಲ.
ಇದಾದ ನಂತರ ಪ್ರಣಾಳಿಕೆಯನ್ನು ಕಣ್ಣಿಗೆ ಒತ್ತಿಕೊಂಡು ಡಿ.ಕೆ.ಶಿವಕುಮಾರ್ ಎಲ್ಲರ ಕೈಗೂ ನೀಡಿದರು. ನಮ್ಮಿಂದ ಏನು ಸಾಧ್ಯವೋ ಅದನ್ನು ಮಾತ್ರ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ ಎಂದು ಹೇಳಲು ಡಿಕೆಶಿ ಮರೆಯಲಿಲ್ಲ.
ಮಹಾನ್ ದೈವಭಕ್ತರಾಗಿರುವ ಡಿ.ಕೆ.ಶಿವಕುಮಾರ್ ಅವರು ಕಳೆದ ವಾರ ಧರ್ಮಸ್ಥಳ, ಶೃಂಗೇರಿ, ಕೊಲ್ಲೂರಿನಲ್ಲಿ ಧಾರ್ಮಿಕ ಪ್ರವಾಸದಲ್ಲಿದ್ದರು. ಶೃಂಗೇರಿ ಮತ್ತು ಕೊಲ್ಲೂರಿನಲ್ಲಿ ಚಂಡಿಕಾಹೋಮ ಕೂಡಾ ನೆರವೇರಿಸಿದ್ದರು. ಆ ವೇಳೆ, ಮುಖ್ಯಮಂತ್ರಿ ಆಗಬೇಕು ಎನ್ನುವ ಖುತ್ವಿಜರ ಪ್ರಾರ್ಥನೆ ಸಾಕಷ್ಟು ವೈರಲ್ ಆಗಿತ್ತು.
ಖರ್ಗೆ ಮತ್ತು ಸಿದ್ದರಾಮಯ್ಯನವರು ದೇವಾಲಯಕ್ಕೆ ಭೇಟಿ ನೀಡಿದರೂ, ಡಿಕೆಶಿ ರೀತಿಯಲ್ಲಿ ಹೋಮ ಹವನದಲ್ಲಿ ಪಾಲ್ಗೊಂಡ ಉದಾಹರಣೆಗಳು ಕಮ್ಮಿ. ಹಾಗಾಗಿ, ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಹಿಂದೂ ಸಾಂಪ್ರದಾಯಿಕ ಟಚ್ ಡಿಕೆಶಿ ನೀಡಿದ್ದು ವಿಶೇಷವಾಗಿತ್ತು.












Click it and Unblock the Notifications