ದೆಹಲಿಯಲ್ಲಿ ಕೂತು ಸಿದ್ದರಾಮಯ್ಯ ಹೂಡಿದ ದಾಳಕ್ಕೆ ಗಿರ್ರನೇ ತಿರುಗಿದ ರಾಜ್ಯ ಕಾಂಗ್ರೆಸ್ಸಿಗರು
Recommended Video
ಲೋಕಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ರಾಜ್ಯ ಕಾಂಗ್ರೆಸ್ ಮುಖಂಡರಿಗೆ, ಬುಧವಾರ (ಜೂ 19) ಮಧ್ಯಾಹ್ನ ಎಐಸಿಸಿ ತೆಗೆದುಕೊಂಡ ಡೈನಾಮಿಕ್ ನಿರ್ಧಾರ ಶಾಕ್ ಮೇಲೆ ಶಾಕ್ ತಂದಿದೆ.
ದೆಹಲಿಯಲ್ಲಿ ಮೂರು ದಿನದಿಂದ ಠಿಕಾಣಿ ಹೂಡಿದ್ದ ಮಾಜಿ ಸಿಎಂ, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ತನ್ನ ಖದರ್ ಏನು ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ಮಟ್ಟದಲ್ಲಿ ಎಐಸಿಸಿ ತೆಗೆದುಕೊಂಡ ಮಹತ್ವದ ಎರಡು ನಿರ್ಧಾರಗಳಲ್ಲಿ ತನ್ನ ಪವರ್ ಏನು ಎನ್ನುವುದು ಸಿದ್ದು ಮತ್ತೊಮ್ಮೆ ರುಜುವಾತು ಪಡಿಸಿದ್ದಾರೆ.
ಜೆಡಿಎಸ್ ವರಿಷ್ಠ ದೇವೇಗೌಡ್ರು, ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ತನ್ನ ವಿರುದ್ದ ದೂರು ನೀಡಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ, ಸಿದ್ದರಾಮಯ್ಯ ಎ ಕೆ ಆಂಟನಿ ಸೇರಿದಂತೆ ಎಐಸಿಸಿ ಪ್ರಮುಖರನ್ನು ಭೇಟಿಯಾಗಿ ಉರುಳಿಸಿದ ದಾಳಕ್ಕೆ ರಾಜ್ಯದ ಹಿರಿಯ ಕಾಂಗ್ರೆಸ್ಸಿಗರು ತಬ್ಬಿಬ್ಬಾಗಿದ್ದಾರೆ.
ನಾಮಕೇವಾಸ್ತೆ ಕೆಪಿಸಿಸಿಯಲ್ಲಿ ತುಂಬಿಕೊಂಡಿದ್ದವರನ್ನೆಲ್ಲಾ ಏಕಾಏಕಿ ಮನೆಗೆ ಕಳುಹಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. 10 ಉಪಾಧ್ಯಕ್ಷರು, 90 ಪ್ರಧಾನ ಕಾರ್ಯದರ್ಶಿಗಳು, 180 ಕಾರ್ಯದರ್ಶಿಗಳು ಮತ್ತು ಒಬ್ಬರು ಖಜಾಂಜಿ ಸ್ಥಾನ ಕಳೆದುಕೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ
ಗಮನಿಸಬೇಕಾದ ಅಂಶವೇನಂದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೊರತು ಪಡಿಸಿ, ಕೆಪಿಸಿಸಿ ಕಚೇರಿ ಸಂಪೂರ್ಣ ಖಾಲಿಯಾಗಿದೆ. ಇದರಲ್ಲಿ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಆಪ್ತವಲಯದಲ್ಲಿರುವವರು ಎಂದು ಮತ್ತೆ ಹೇಳಬೇಕಾಗಿಲ್ಲ.

ರೋಶನ್ ಬೇಗ್ ಅವರನ್ನು ಅಮಾನತು ಮಾಡುವಲ್ಲೂ ಆಡಿದ್ದು ಸಿದ್ದು ಕೈ
ತನ್ನ ವಿರುದ್ದ ಬಹಿರಂಗವಾಗಿ ಹೇಳಿಕೆ ನೀಡಿದ್ದ ಹಿರಿಯ ಮುಖಂಡ ರೋಶನ್ ಬೇಗ್ ಅವರನ್ನು ಅಮಾನತು ಮಾಡುವಲ್ಲೂ ಆಡಿದ್ದು ಸಿದ್ದರಾಮಯ್ಯನವರದ್ದೇ ಕೈ ಎನ್ನುವುದು ಗೊತ್ತಿರುವ ವಿಚಾರ. ಸಿದ್ದರಾಮಯ್ಯ ವಿರುದ್ದ ರಾಜ್ಯ ಹಿರಿಯ ಕಾಂಗ್ರೆಸ್ ಮುಖಂಡರ ಅಸಮಾಧಾನ ಇಂದು ನಿನ್ನೆಯದಲ್ಲ. ಆದರೆ, ಪ್ರತೀ ಹಂತದಲ್ಲೂ ಮೇಲುಗೈ ಸಾಧಿಸಿಕೊಂಡು ಬರುತ್ತಿದ್ದ ಸಿದ್ದರಾಮಯ್ಯ ಈಬಾರಿಯೂ ತನ್ನ ಕೈಮೇಲಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳೆಲ್ಲಾ ಬರ್ಖಾಸ್ತು
ಕೆಪಿಸಿಸಿ ಪದಾಧಿಕಾರಿಗಳನ್ನು ಬರ್ಖಾಸ್ತು ಮಾಡುವ ಮೊದಲು, ಯಾವ ಕಾರಣಕ್ಕಾಗಿ ಇವರಿಗೆಲ್ಲಾ ಗೇಟ್ ಪಾಸ್ ನೀಡಬೇಕು ಎನ್ನುವುದನ್ನು ಕೂಲಂಕುಷವಾಗಿ ಹೈಕಮಾಂಡಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಸಿದ್ದರಾಯಮ್ಮ ದೆಹಲಿಯಲ್ಲಿ ಕೂತೇ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಕೆಳಗಿಳಿಸಬೇಕು
ರಾಜ್ಯ ಕಾಂಗ್ರೆಸ್ ಇನ್ನಷ್ಟು ಬಲಗೊಳ್ಳಬೇಕಾದರೆ, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಕೆಳಗಿಳಿಸಬೇಕು ಎನ್ನುವ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಭರ್ಜರಿ ತಿರುಗೇಟು ನೀಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಇಬ್ಬರೂ ಸೇಫ್.

ಹೊಸ ಪದಾಧಿಕಾರಿಗಳನ್ನು ನೇಮಿಸುವಲ್ಲೂ ಸಿದ್ದು ಪ್ರಭಾವ
ಕೆಪಿಸಿಸಿಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಿಸುವಲ್ಲಿ ಯಶಸ್ವಿಯಾದ ಸಿದ್ದರಾಮಯ್ಯ, ಹೊಸ ಪದಾಧಿಕಾರಿಗಳನ್ನು ನೇಮಿಸುವಲ್ಲೂ ತಮ್ಮ ಪ್ರಭಾವವನ್ನು ಮುಂದುವರಿಸುವುದು ಸ್ಪಷ್ಟ. ಹಾಗಾಗಿ, ಮುಂದಿನ ದಿನಗಳಲ್ಲಿ, ಕೆಪಿಸಿಸಿಯಲ್ಲೂ ಹಿಡಿತ ತಪ್ಪಲಿದೆಯೇ ಎನ್ನುವ ಭಯ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರಿಗೆ ಕಾಡದೇ ಇರದು.












Click it and Unblock the Notifications