ಎನ್. ಮಹೇಶ್ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದೇಕೆ?
ಬೆಂಗಳೂರು, ಜನವರಿ 17; ಸಂಕ್ರಾತಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಒಂದಷ್ಟು ಬದಲಾವಣೆಯಾಗಲಿದೆ ಎಂಬ ವದಂತಿಗಳು ಹರಡಿವೆ. ಕೆಲವು ಶಾಸಕರು ಸಚಿವ ಸ್ಥಾನಕ್ಕಾಗಿ ಹಲವು ಮಾರ್ಗಗಳನ್ನು ಅನುಸರಿಸುತ್ತಿರುವುದಲ್ಲದೆ, ಬಹಿರಂಗವಾಗಿಯೇ ತಾವು ಆಕಾಂಕ್ಷಿಗಳು ಎಂಬುದನ್ನು ಹೊರಗೆಡವುತ್ತಿದ್ದಾರೆ. ಅವರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಕೂಡ ಒಬ್ಬರಾಗಿದ್ದಾರೆ.
ಇಷ್ಟಕ್ಕೂ ಎನ್. ಮಹೇಶ್ಗೆ ಸಚಿವ ಸ್ಥಾನ ನೀಡಿದರೆ ಮೂಲ ಬಿಜೆಪಿಗರು ಸುಮ್ಮನಿರುತ್ತಾರಾ? ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಹಳೇ ಮೈಸೂರು ವ್ಯಾಪ್ತಿಯಲ್ಲಿ ಅದರಲ್ಲೂ ಚಾಮರಾಜನಗರದಲ್ಲಿ ಎನ್. ಮಹೇಶ್ ಸೇರಿದಂತೆ ಎರಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಚಾಮರಾಜನಗರದಲ್ಲಿ ಶಕ್ತಿ ಪ್ರದರ್ಶಿಸಿದ ಎನ್. ಮಹೇಶ್!
ಇಷ್ಟೇ ಅಲ್ಲದೆ ಸಂಸದರಾದ ವಿ. ಶ್ರೀನಿವಾಸ ಪ್ರಸಾದ್ ಕೂಡ ಬಿಜೆಪಿಯವರೇ ಆಗಿದ್ದಾರೆ. ಈ ವ್ಯಾಪ್ತಿಯಲ್ಲಿ ಕಾಂಗ್ರೆಸ್ಗೆ ಸೆಡ್ಡು ಹೊಡೆದು ಬಿಜೆಪಿಯನ್ನು ಸಂಘಟಿಸಬೇಕಾದರೆ ಎನ್. ಮಹೇಶ್ ಅಗತ್ಯತೆ ಹೆಚ್ಚಿದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿ ಪಕ್ಷದ ಸಂಘಟನೆಗೆ ಬಳಸಿಕೊಂಡರೂ ಅಚ್ಚರಿಪಡಬೇಕಾಗಿಲ್ಲ.
ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆ
ಅಂಬೇಡ್ಕರ್ ಅನುಯಾಯಿಯಾಗಿ ತಮ್ಮದೇ ಆದ ಧೋರಣೆಯನ್ನು ಬಿಎಸ್ಪಿ ಪಕ್ಷದ ಮೂಲಕ ಅನುಸರಿಸುತ್ತಾ ಬಂದಿದ್ದ ಎನ್. ಮಹೇಶ್ ಬಿಜೆಪಿಯತ್ತ ಒಲವು ತೋರಿದ್ದು ನಂಬಲು ಕಷ್ಟವಾಗುವ ವಿಚಾರವೇ. ಕೆಲವು ತಿಂಗಳ ಹಿಂದೆಯಷ್ಟೆ ಬಿಜೆಪಿಗೆ ಸೇರ್ಪಡೆಗೊಂಡ ಮಹೇಶ್ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸುತ್ತಿರುವುದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ. ಏಕೆಂದರೆ ಅವರು ಸಚಿವ ಸ್ಥಾನವನ್ನು ನಿಭಾಯಿಸುವ, ಪಕ್ಷ ಸಂಘಟಿಸುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.
ಎನ್. ಮಹೇಶ್ಗೆ ಎಲ್ಲಿಯೂ ನೆಲೆ ಇಲ್ಲ, ಅದಕ್ಕೆ ಬಿಜೆಪಿಗೆ ಸೇರ್ಪಡೆ
ಮೊದಲ ಬಾರಿಗೆ ಶಾಸಕ, ಸಚಿವರಾದವರು
ಹಾಗೆ ನೋಡಿದರೆ ಎನ್. ಮಹೇಶ್ ಬಿಎಸ್ಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುವಲ್ಲಿ ಒಂದೆಡರಡು ದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿದವರು. ಸರ್ಕಾರಿ ಹುದ್ದೆಯಲ್ಲಿದ್ದ ಅವರು ವಿದ್ಯಾವಂತರೂ ಹೌದು. ಬಿಎಸ್ಪಿ ಪಕ್ಷವನ್ನು ಕಟ್ಟಿ ಬೆಳೆಸಬೇಕೆಂದು ಕನಸು ಕಂಡವರು. ತಮ್ಮ ಕ್ಷೇತ್ರದಲ್ಲಿ ಹಿಂದುವಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ನಾಯಕರೂ ಹೌದು. 2018ಕ್ಕೂ ಮೊದಲು ಸತತ ಪರಿಶ್ರಮದ ಮೂಲಕ ಜನರಿಗೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಡುತ್ತಾ ಜನರ ಒಡನಾಟದಲ್ಲಿದ್ದರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್ ಪಿ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಚುನಾವಣೆ ನಡೆದು ಫಲಿತಾಂಶ ಬಂದಾಗ ರಾಜ್ಯದಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್. ಮಹೇಶ್ ಗೆಲುವು ಸಾಧಿಸಿದ್ದರು.
ಹತ್ತಾರು ವರ್ಷಗಳ ಹೋರಾಟಕ್ಕೆ ಸಂದ ಫಲ
ಬಹುಮತವಿಲ್ಲದ ಕಾರಣದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಜಾರಿಗೆ ಬಂದಿತ್ತು. ಈ ವೇಳೆ ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದರು. ಇದೆಲ್ಲವೂ ನಿರೀಕ್ಷೆ ಮಾಡದೆ ಅವರ ಬದುಕಲ್ಲಿ ನಡೆದು ಹೋಗಿತ್ತು. ಹತ್ತಾರು ವರ್ಷಗಳ ಅವರ ಸಾಮಾಜಿಕ ಚಟುವಟಿಕೆಗಳಿಗೆ ಕೊನೆಗೂ ಫಲ ಸಿಕ್ಕಂತಾಗಿತ್ತು. ನಂತರ ನಡೆದಿದ್ದೇ ಬೇರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ ಅವರಿಗೂ ಸಚಿವ ಸ್ಥಾನ ನೀಡಿ ಉಸ್ತುವಾರಿ ವಹಿಸಲಾಗಿತ್ತು. ಆದರೆ ಪುಟ್ಟರಂಗಶೆಟ್ಟಿ ಮತ್ತು ಎನ್. ಮಹೇಶ್ ನಡುವೆ ಹಗ್ಗ ಜಗ್ಗಾಟಗಳು ಆರಂಭವಾದವು.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು
ಅಷ್ಟರಲ್ಲೇ ಎನ್. ಮಹೇಶ್ ಅವರಿಗೆ ಬಹುಜನಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರಿಂದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬುಲಾವ್ ಬಂತು. ಹೀಗಾಗಿ ಅಧಿಕಾರ ಪಡೆದ ಕೆಲವೇ ಸಮಯದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಎಸ್ಪಿ ಪಕ್ಷದಿಂದಲೇ ದೂರವಾಗಿ ಬಿಟ್ಟರು. ಕೆಲವು ತಿಂಗಳ ಕಾಲ ತಟಸ್ಥರಾಗಿದ್ದ ಅವರು ತಮ್ಮ ಅಭಿಮಾನಿಗಳು, ಕಾರ್ಯಕರ್ತರು ಎಲ್ಲರ ಅಭಿಪ್ರಾಯ ಪಡೆದು ಬಿಜೆಪಿಗೆ ಸೇರ್ಪಡೆಯಾದರು. ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಮಂತಾಂತರ ನಿಷೇಧ ಕುರಿತ ಚರ್ಚೆಗಳು ನಡೆದಾಗ ಕಾಂಗ್ರೆಸ್ಗೆ ಟಕ್ಕರ್ ನೀಡಿ ಆಡಳಿತ ಪಕ್ಷಕ್ಕೆ ತಡೆಗೋಡೆಯಂತೆ ನಿಂತಿದ್ದರು.
ಸಚಿವ ಸ್ಥಾನ ನೀಡಿದರೆ ಕ್ಷೇತ್ರದ ಅಭಿವೃದ್ಧಿ
ಸದ್ಯ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ನಡೆಯುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಈ ಬಾರಿ ಸಚಿವ ಸಂಪುಟದಲ್ಲಿ ಬದಲಾವಣೆಗಳು ನಡೆದರೆ, ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡೇ ನಡೆಸಲಾಗುತ್ತದೆ ಜತೆಗೆ ಪಕ್ಷವನ್ನು ಗೆಲ್ಲಿಸಿಕೊಂಡು ಬರುವವರಿಗೆ ಮಣೆ ಹಾಕಿದರೂ ಹಾಕಬಹುದು. ಇಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮವಾಗಬಹುದು.
ಇನ್ನು ಸಚಿವ ಸಂಪುಟದಲ್ಲಿನ ಬದಲಾವಣೆಗಳ ಕುರಿತಂತೆ ಚರ್ಚೆ ನಡೆಯುತ್ತಿರುವಾಗಲೇ ಅತ್ತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪ್ರವಾಸಿ ಮಂದಿರದಲ್ಲಿ ಮಾಧಮದವರೊಂದಿಗೆ ಮಾತನಾಡಿರುವ ಶಾಸಕ ಎನ್. ಮಹೇಶ್, "ಸಚಿವ ಸ್ಥಾನ ನೀಡಿದರೆ ಸಂತೋಷವಾಗುತ್ತದೆ. ಇದರಿಂದ ಕ್ಷೇತ್ರದಲ್ಲಿ ನೆನಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಚುನಾವಣೆ ವೇಳೆ ಜನರ ಬಳಿ ಮುಖ ತೋರಿಸಬೇಕಾಗಿದೆ ಹಾಗಾಗಿ ಮುಖ್ಯಮಂತ್ರಿಗಳು ತಮ್ಮ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದರೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video