ಕೊರೊನಾ ತಡೆಯಲು ಸ್ವಯಂ ದಿಗ್ಬಂಧನ ಹೇರಿಕೊಂಡ ನಮ್ಮ ಹಳ್ಳಿಗಳು
ಕೋಲಾರ, ಮಾರ್ಚ್ 24: ಕೊರೊನಾ ಸೋಂಕು ವಿಶ್ವವ್ಯಾಪಿ ಹರಡಿ ಇಡೀ ಜಗತ್ತಿನಲ್ಲೇ ಭೀತಿ ಹುಟ್ಟಿಸಿದೆ. ಕೊರೊನಾ ಹರಡದಂತೆ ತಡೆಯಲು ಭಾರತದಲ್ಲೂ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇಡೀ ಕರ್ನಾಟಕವೂ ಲಾಕ್ ಡೌನ್ ಆಗಿದೆ.
ಈ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳಲು ಸೂಚಿಸಲಾಗಿದೆ. ಆದರೆ ಇನ್ನೂ ಕೆಲವು ಕಡೆ ಜನರು ಯಾವುದೇ ಆತಂಕವಿಲ್ಲದೆ ಓಡಾಡುತ್ತಿರುವುದು ಕಂಡುಬಂದಿದೆ. ಕೋಲಾರ ಹಾಗೂ ಚಿತ್ರದುರ್ಗದ ಈ ಗ್ರಾಮಗಳು ಮಾದರಿಯಾಗಿ ಕೊರೊನಾ ಪರಿಪಾಲನೆಗೆ ಮುಂದಾಗಿವೆ. ಕೊರೊನಾದಿಂದ ಮುಕ್ತಿಗೆ ಸ್ವಯಂ ದಿಗ್ಬಂಧನ ಹೇರಿಕೊಂಡಿವೆ.
ಎರಡು ತಿಂಗಳು ಕಾಲ ಗ್ರಾಮಕ್ಕೆ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಎಂ.ಗೊಳ್ಳಹಳ್ಳಿ ಗ್ರಾಮದ ಜನರು. ಕೊರೊನಾ ನಿಯಂತ್ರಣಕ್ಕೆ ಸ್ವಯಂ ಪರಿಪಾಲನೆಯಷ್ಟೆ ಮುಖ್ಯ ಎಂದು ತೀರ್ಮಾನಿಸಿರುವ ಜನರು ಎರಡು ತಿಂಗಳು ಗ್ರಾಮಕ್ಕೆ ಯಾರೂ ಬರುವಂತಿಲ್ಲ, ಯಾರೂ ಗ್ರಾಮದಿಂದ ಹೊರ ಹೋಗುವಂತಿಲ್ಲ ಎಂದು ನಿರ್ಬಂಧ ಹೇರಿಕೊಂಡಿದ್ದಾರೆ.

ಒಂದು ದಿನದಲ್ಲಿ ಗ್ರಾಮಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಗ್ರಾಮದ ಹಿರಿಯರೆಲ್ಲರೂ ಸೇರಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಂಗಪಟ್ಟಣ ಹಳ್ಳಿಯಲ್ಲೂ ಯುವಕರು ಕೊರೊನಾ ಮಹಾಮಾರಿ ಹರಡದಂತೆ ತಡೆಯಲು ಮತ್ತು ಹಳ್ಳಿಗಳ ಸ್ವಾಸ್ಥ ಕಾಪಾಡಲು ಮುಂದಾಗಿದ್ದಾರೆ. ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ತರಲು ಕರಪತ್ರಗಳನ್ನು ಹಂಚಿ, ಸರ್ಕಾರದ ಆದೇಶ ಪಾಲಿಸಲು ಮನವಿ ಮಾಡಿದ್ದಾರೆ.

ತಮ್ಮ ಹಳ್ಳಿಗೆ ಹೊರ ಹಳ್ಳಿಯ ಸಂಪರ್ಕವನ್ನು ಇಂದಿನಿಂದಲೇ ಕಡಿತಗೊಳಿಸಿಕೊಳ್ಳಲು, ಹಾಗೆಯೇ ಹೊರ ಹಳ್ಳಿ ಜನರ ಸಂಪರ್ಕವನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಯುವಕರು ಘೋಷಣೆ ಕೂಗಿದ್ದಾರೆ.












Click it and Unblock the Notifications