ಕೊಡಗಿನ ಮಂಜೇಶ್ ಮಂದಣ್ಣನಂಥ ಗುರಿಕಾರ ಮತ್ತೊಬ್ಬನಿಲ್ಲ
ಮೈಸೂರು, ಜನವರಿ,07: ಕೊಡಗಿನ ಜನರಿಗೂ, ಕೋವಿಗೂ ಅವಿನಾಭಾವ ಸಂಬಂಧ. ಪರಂಪರಾಗತ ನಂಟು, 'ಆಡು ಮುಟ್ಟದ ಸೊಪ್ಪಿಲ್ಲ, ಇಲ್ಲಿ ಕೋವಿ ಹಿಡಿಯದ ಕೈಗಳೇ ಕೊಡಗಿನಲ್ಲಿ ಇಲ್ಲ' ಎಂದರೆ ತಪ್ಪಾಗಲಾರದು. ವೀರತೆಯ ಪ್ರದರ್ಶನದಲ್ಲಿ ಅಗ್ರಪಂಕ್ತಿಯಲ್ಲಿ ಇರುವವರೇ ಕೊಡಗಿನವರು.
ಈ ವಿವರ ಯಾಕೆ ಅಂತಾ ನೋಡ್ತಿದ್ದೀರಾ? ವಿರಾಜಪೇಟೆ ಬಳಿಯ ಬೆಳ್ಳುಮಾಡು ಗ್ರಾಮದ ಎನ್.ಪಿ.ಮಂಜೇಶ್ ಮಂದಣ್ಣ ಅವರು 59ನೇ ರಾಷ್ಟ್ರೀಯ ರೈಫಲ್ ಶೂಟಿಂಗ್ ನಲ್ಲಿ 598.3 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಲು ಅನುಕೂಲ ಮಾಡಿಕೊಟ್ಟಿರುವುದೇ ಅವರ ಮನೆಯಿಂದ ಬಳುವಳಿಯಾಗಿ ಬಂದ ಕೋವಿ ಅಭ್ಯಾಸ.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]
ದೆಹಲಿಯಲ್ಲಿ ಇತ್ತೀಚಿಗೆ ಜರುಗಿದ ರಾಷ್ಟ್ರೀಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಜೇಶ್ ಮಂದಣ್ಣ, ಅತ್ಯುತ್ತಮ ಗುರಿಯೊಂದಿಗೆ ಮುಂದಿನ 3 ವರ್ಷ 9 ತಿಂಗಳವರೆಗೂ ರಾಷ್ಟ್ರೀಯ ರೈಫಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. ಕೋವಿ ಅಭ್ಯಾಸವೇ ಇವರ ಕೈ ಹಿಡಿದ ನಡೆಸಿದೆ.[ಅಗಲಿದ ನೆನಪು ಮರೆಸಿ ಶಾಶ್ವತ ಸಂತಸ ಬೆಸೆಯುವ 3ಡಿ ಕಾಸ್ಟಿಂಗ್]
'ರಿನೋವಡ್ ಶಾಟ್' ಎಂಬ ಗೌರವಕ್ಕೆ ಪಾತ್ರವಾಗಿರುವ ಮಂದಣ್ಣನವರಿಗೆ ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ 8 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕ ಗಳಿಸಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ನವೀನಾ ವಿಟ್ಲ ದಂಪತಿ ಪುತ್ರನಾಗಿರುವ ಮಂಜೇಶ್ ಮಂದಣ್ಣ, ಪ್ರಸ್ತುತ ಮೈಸೂರಿನ ಜೆಸಿಇ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.[ಕಿತ್ತಳೆ ನಾಡು ಕೊಡಗಿನಲ್ಲಿ ಹಳೆ ಸುಂದರಿಯರದ್ದೇ ದರ್ಬಾರ್]
ವಿದ್ಯಾಭ್ಯಾಸದ ಜೊತೆಗೆ ರೈಫಲ್ ಶೂಟಿಂಗ್ ನಲ್ಲೂ ಸಾಧನೆ ಮಾಡಲು ಹೊರಟಿರುವ ಮಂದಣ್ಣನದು ಇನ್ನೂ ಹೆಚ್ಚು ಹೆಚ್ಚು ಪದಕಗಳನ್ನು ಪಡೆದು, ಗಣ್ಯರ ಶ್ಲಾಘನೆಗೆ ಒಳಗಾಗುವ ತವಕ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಿನುಗುತಾರೆ ಆಗುವ ಹೆಬ್ಬಯಕೆ.