ನಿಧಿ ಹುಡುಕಿಕೊಂಡು ಹೋದ ವ್ಯಕ್ತಿ ಶವವಾಗಿ ಪತ್ತೆ!
ಕೊಡಗು, ಮೇ 27 : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಡಿಯಂಡಮೋಳ್ ಬೆಟ್ಟಕ್ಕೆ ನಿಧಿ ಶೋಧಕ್ಕಾಗಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶವ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಿಧಿಗಾಗಿ ಬಲಿ ಕೊಟ್ಟಿರಬಹುದೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಪಶ್ಚಿಮ ಘಟ್ಟ ಶ್ರೇಣಿಯ ತಡಿಯಂಡಮೋಳ್ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ನಿಧಿ ಶೋಧಕ್ಕೆ ತೆರಳಿದ್ದ ತಂಡದಲ್ಲಿ ಇಬ್ಬರು ನಾಪತ್ತೆಯಾಗಿದ್ದರು. ಅವರಲ್ಲಿ ಓರ್ವನ ಶವ ಬೆಟ್ಟದ ಕೆಳಭಾಗದಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. [ನಿಧಿ ಆಸೆಗಾಗಿ ಮಗಳ ಬಲಿಕೊಟ್ಟ ತಂದೆ]

ಬೆಟ್ಟದ ತಪ್ಪಲಿನಲ್ಲಿರುವ ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡಂಗ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಿಧಿಯ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಕಡಂಗದ ಮುನೀರ್ ಹಾಗೂ ಸಲಾಂ ನಿಧಿ ಇದೆ ಎಂದು ಕೇರಳದ ಮಾಂತ್ರಿಕನೊಬ್ಬನನ್ನು ಆಹ್ವಾನಿಸಿ, ಆತನೊಂದಿಗೆ ತಡಿಯಂಡಮೋಳ್ ಬೆಟ್ಟಕ್ಕೆ ನಿಧಿ ಶೋಧನೆ ಮಾಡಲು ತೆರಳಿದ್ದರು. [ತಡಿಯದೇ ಕಾಡುವ ತಡಿಯಂಡಮೋಲ್]
ಮಂಗಳವಾರ ತಂಡ ವಾಪಸ್ ಆಗಿದ್ದು, ತಂಡದಲ್ಲಿದ್ದ ಮುನೀರ್ ನಾಪತ್ತೆಯಾಗಿದ್ದ. ತಂಡದಲ್ಲಿ ತೆರಳಿದ್ದ ಸಲಾಂ ಮನೀರ್ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ತಕ್ಷಣ ಕುಟುಂಬವರು ಹಾಗೂ ಗ್ರಾಮಸ್ಥರು ಬೆಟ್ಟಕ್ಕೆ ತೆರಳಿ ಹುಡುಕಾಟ ನಡೆಸಿದರೂ ಮನೀರ್ ಪತ್ತೆಯಾಗಿರಲಿಲ್ಲ. [ಕೇರಳ ಪದ್ಮನಾಭನ ಅನಂತ ಆಸ್ತಿಗೆ ಏನಾಯಿತು?]
ಕೊನೆಗೆ ಕಾಣೆಯಾದ 3ನೇ ದಿನ ಬೆಳಗ್ಗೆ ತಡಿಯಂಡಮೋಳ್ ಬೆಟ್ಟದ ತಪ್ಪಲಿನಲ್ಲಿರುವ ಚೋಮಕುಂದು ಬೆಟ್ಟದಲ್ಲಿ ರಕ್ತದ ಕಲೆ ಕಂಡಿದೆ. ಇದನ್ನರಿಸಿ ಹುಡುಕಾಟ ನಡೆಸಿದಾಗ ಬೆಟ್ಟದ ಕೆಳಭಾಗದಲ್ಲಿ ಮುನೀರ್ ಶವ ಪತ್ತೆಯಾಗಿದೆ. ಬೆಟ್ಟದ ಮೇಲೆ ಕತ್ತು ಕತ್ತರಿಸಿ ಸಾವಿರ ಅಡಿ ಆಳದ ಪ್ರಪಾತಕ್ಕೆ ಮೃತದೇಹ ಎಸೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. [ಚಾರಣಿಗರ ಕೈಬೀಸಿ ಕರೆಯುವ ಕೊಡಗಿನ ಭತ್ತದರಾಶಿ ಬೆಟ್ಟ]
ಹರಸಾಹಸ ಪಟ್ಟು ಗ್ರಾಮಸ್ಥರು ಮುನೀರ್ ಶವವನ್ನು ಮೇಲೆ ತಂದಿದ್ದಾರೆ. ಮುನೀರ್ ಕಡಂಗದಲ್ಲಿ ಕಾಫಿ ವ್ಯಾಪಾರ ನಡೆಸುತ್ತಿದ್ದ. ಅವನ ಬಾವ ಸಲಾಂ ಜೀಪ್ ಡ್ರೈವರ್ ಆಗಿದ್ದ. ಕಳೆದ 10 ದಿನಗಳ ಹಿಂದೆ ಸಲಾಂ ಪ್ರವಾಸಿಗರನ್ನು ಬೆಟ್ಟಕ್ಕೆ ಕರೆತಂದಿದ್ದಾಗ ಅವನು ನಿಧಿ ನೋಡಿದ್ದ. [ಮಡಿಕೇರಿಯ ನಿಶಾನೆಮೊಟ್ಟೆ ಏರೋಕೆ ಗುಂಡಿಗೆ ಬೇಕು]
ಬಳಿಕ ತನ್ನ ಬಾವ ಮುನೀರ್ಗೆ ನಿಧಿಯ ವಿಚಾರ ತಿಳಿಸಿ ಕೇರಳದಿಂದ ಮಾಂತ್ರಿಕರನ್ನು ಕರೆಸಿ ಮಂಗಳವಾರ ಬೆಳಗ್ಗೆ ನಿಧಿ ಶೋಧಕ್ಕೆ ತೆರಳಿದ್ದರು. ಹೋಗುವಾಗ 2 ಬೈಕ್ನಲ್ಲಿ ನಾಲ್ವರು ತೆರಳಿದ್ದರು. ವಾಪಾಸ್ಸು ಬರುವಾಗ ಸಲಾಂ ಹಾಗೂ ಮಾಂತ್ರಿಕರು ಸೇರಿ ಮೂವರು ವಾಪಾಸ್ಸು ಬಂದಿದ್ದು, ಮುನೀರ್ ವಾಪಾಸ್ಸಾಗಿರಲಿಲ್ಲ.
ಬೆಟ್ಟದಲ್ಲಿ ನಿಧಿ ಇರುವ ವಿಚಾರ ಸುಳ್ಳು ಎನ್ನುತ್ತಾರೆ ಗ್ರಾಮಸ್ಥರು. ಆದರೆ, ಕೊಲೆ ನಡೆದ ಸ್ಥಳದಲ್ಲಿ ಗಂಧದ ಕಡ್ಡಿ, ತೆಂಗಿನಕಾಯಿ ಚೂರು ಸಿಕ್ಕಿದೆ. ಉದ್ದದ ಲಾಂಗ್ ಪತ್ತೆಯಾಗಿದೆ. ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications