ನನ್ನ ರಾಜೀನಾಮೆ ಹಿಂದೆ ಯಾರಿದ್ದಾರೆ ಎಂದು ಗೊತ್ತು: ಅಸಲಿ ಸತ್ಯ ಬಿಚ್ಚಿಟ್ಟ ಕೆ.ಎನ್.ರಾಜಣ್ಣ
ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಭಾವಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ದಿಢೀರ್ ರಾಜೀನಾಮೆ ನೀಡಿರುವ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ನಲ್ಲಿ ಸೆಪ್ಟೆಂಬರ್ ಕ್ರಾಂತಿ ಎಂದು ಬಾಂಬ್ ಸಿಡಿಸಿದ್ದ ರಾಜಣ್ಣ ಆಗಸ್ಟ್ನಲ್ಲೇ ರಾಜೀನಾಮೆ ಮೂಲಕ ಶಾಕ್ ಕೊಟ್ಟಿದ್ದಾರೆ. ಈ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ರಾಜೀನಾಮೆ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ. 'ನನ್ನನ್ನ ಸಂಪುಟದಿಂದ ವಜಾ ಮಾಡಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ. ಯಾರೆಲ್ಲ ಏನೆಲ್ಲ ಮಾಡಿದ್ದಾರೆ ಅಂತಾ ಕಾಲ ಬಂದಾಗ ಎಲ್ಲವನ್ನೂ ನಾನೇ ಹೇಳುತ್ತೇನೆ' ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
'ಈಗ ಮಾಜಿ ಸಚಿವ ಅಂತಾ ಕರೆಸಿಕೊಳ್ಳಲು ಖುಷಿಯಾಗುತ್ತಿದೆ. ನನಗೆ ಅವಕಾಶ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ, ಎಲ್ಲ ಸಚಿವರಿಗೆ ಧನ್ಯವಾದ ಹೇಳಿದ್ದೀನಿ. ನನಗೆ ಎಲ್ಲ ಸಚಿವರು ಹಾಗೂ ಶಾಸಕರು ಸಹಾಯ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿಗಳು ಯಾವುದೇ ಹೇಳಿಕೆ ನೀಡಿಲ್ಲ. ಹಾಗೆಂದು ನಾನು ಏನನ್ನೂ ಹೇಳದೇ ಇರೋದಿಲ್ಲ. ರಾಜ್ಯಪಾಲರ ಕಚೇರಿಯಿಂದ ಬಂದಿರುವ ಪತ್ರದ ಬಗ್ಗೆಯೂ ಗೊತ್ತಿದೆ' ಎಂದು ರಾಜಣ್ಣ ಹೇಳಿದ್ದಾರೆ.

'ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದು ಹೈಕಮಾಂಡ್ನ ನಿರ್ಧಾರ. ಇದು ಪಕ್ಷದ ತೀರ್ಮಾನ ಆಗಿರುವುದರಿಂದ ನಾನು ಯಾವುದೇ ಪ್ರಶ್ನೆ ಮಾಡೋದಿಲ್ಲ. ನನ್ನ ವಿಚಾರದಲ್ಲಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಅವರಿಗೆ ತಪ್ಪು ಗ್ರಹಿಕೆಯಾಗಿದೆ. ಅದನ್ನು ಸರಿಪಡಿಸುತ್ತೇನೆ. ರಾಹುಲ್ ಗಾಂಧಿ ಅವರು ಎಲ್ಲಿ ಏನೇ ಮಾತನಾಡಿದರೂ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇವೆ' ಎಂದಿದ್ದಾರೆ.
'ದೆಹಲಿಗೆ ಹೋಗ್ತೀನಿ'
'ಇದು ನಮ್ಮ ಪಕ್ಷದ ತೀರ್ಮಾನ ಆಗಿರುವುದರಿಂದ ನಾನು ಪ್ರಶ್ನಿಸುವಂತಿಲ್ಲ. ಹೈಕಮಾಂಡ್ಗೆ ತಪ್ಪು ತಿಳುವಳಿಕೆ ಆಗಿರುವ ಮಾಹಿತಿ ಇದೆ. ಹೀಗಾಗಿ ಹಿರಿಯ ಸಚಿವರು ಹಾಗೂ ಶಾಸಕರೊಂದಿಗೆ ದೆಹಲಿಗೆ ಹೋಗುತ್ತೇನೆ. ಪಕ್ಷದ ವರಿಷ್ಠರಿಗೆ ಆಗಿರುವ ತಪ್ಪು ಗ್ರಹಿಕೆ ಬಗ್ಗೆ ಮನವರಿಕೆ ಮಾಡಿಸುತ್ತೇನೆ. ಹೈಕಮಾಂಡ್ ಮಾರ್ಗದರ್ಶನದಂತೆಯೇ ನಾನು ಮುಂದುವರಿಯುತ್ತೇನೆ' ಎಂದೂ ಸ್ಪಷ್ಟನೆ ನೀಡಿದ್ದಾರೆ.
ರಾಜೀನಾಮೆಗೆ ಕಾರಣವೇನು?
ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಮಾತನಾಡಿದ್ದ ರಾಜಣ್ಣ, ವೋಟರ್ ಲಿಸ್ಟ್ ನಮ್ಮದೇ ಸರ್ಕಾರ ಇರುವಾಗ ಮಾಡಿದ್ದು, ಆವಾಗ ಕಣ್ಮುಚ್ಚಿ ಕುಳಿತು, ಈಗ ಹೇಳಿದರೆ ಏನು ಪ್ರಯೋಜನ? ಎಂದಿದ್ದರು. ಈ ಮೂಲಕ ತಮ್ಮದೇ ಪಕ್ಷದ ವಿರುದ್ಧ ಮಾತನಾಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಶಾಸಕ ಕೆ.ಎನ್.ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದರು. ರಾಜಣ್ಣನ ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಅಂಗೀಕರಿಸಿ, ರಾಜ್ಯಪಾಲರಿಗೆ ಕಳಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಅಂಗೀಕರಿಸಿದರು. ಇದರಿಂದ ಕಾಂಗ್ರೆಸ್ ಸರ್ಕಾರದ ವಿಕೆಟ್ ಪತನವಾಗಿದೆ.












Click it and Unblock the Notifications