ಕೆಎಂಎಫ್ ಅಧ್ಯಕ್ಷಗಿರಿ: ಒಂದು ಕಡೆ ಜೆಡಿಎಸ್ ಕಣ್ಣು, ಇನ್ನೊಂದೆಡೆ ಕಾಂಗ್ರೆಸ್
ಬೆಂಗಳೂರು, ಜೂನ್ 25: ದೇಶದ ಎರಡನೇ ಅತಿದೊಡ್ಡ ಹಾಲು ಒಕ್ಕೂಟ ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಶನ್) ಅಧ್ಯಕ್ಷ ಹುದ್ದೆಯ ಮೇಲೆ, ಜೆಡಿಎಸ್ ಜೊತೆ ಕಾಂಗ್ರೆಸ್ ಕೂಡಾ ಟವೆಲ್ ಹಾಕಿರುವುದು, ಸಮ್ಮಿಶ್ರ ಸರಕಾರದಲ್ಲಿ ಇನ್ನೊಂದು ಹಂತದ ಮೇಲಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಲೋಕೋಪಯೋಗಿ ಸಚಿವ ಮತ್ತು ಈ ಹಿಂದೆ ಕೂಡಾ ಕೆಎಂಎಫ್ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ್ದ ಎಚ್ ಡಿ ರೇವಣ್ಣ, ಅಧ್ಯಕ್ಷ ಹುದ್ದೆಗೇರುವುದು ಬಹುತೇಕ ಖಚಿತ ಎನ್ನುವಷ್ಟರಲ್ಲಿ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ ಆ ಹುದ್ದೆಯನ್ನು ಬಯಸಿದ್ದಾರೆ.
ಅಸಲಿಗೆ, ಭೀಮಾ ನಾಯ್ಕಗೆ ಕೆಎಂಎಫ್ ಅಧ್ಯಕ್ಷಗಿರಿಯ ಆಸೆ ತೋರಿಸಿದ್ದೇ ಕಾಂಗ್ರೆಸ್. ಇವರು ಬಿಜೆಪಿ ಸೇರಬಹುದು ಎನ್ನುವ ಸುದ್ದಿ ಹರಿದಾಡುತ್ತಿದ್ದಾಗ, ಅವರಿಗೆ ಕಾಂಗ್ರೆಸ್ ಆ ಹುದ್ದೆಯ ಆಮಿಷವೊಡ್ಡಿತ್ತು ಎನ್ನುವ ಸುದ್ದಿಯಿದೆ.

ಈಗಾಗಲೇ, ಅಧ್ಯಕ್ಷ ಹುದ್ದೆ ಬಯಸಿ ಭೀಮಾ ನಾಯ್ಕ , ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ಆದರೆ, ಮುಖ್ಯಮಂತ್ರಿಗಳಿಂದ ಯಾವುದೇ ಖಚಿತ ಭರವಸೆ ಸಿಗಲಿಲ್ಲ ಎನ್ನಲಾಗುತ್ತಿದೆ.
ರೇವಣ್ಣ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಆ ಹುದ್ದೆಯನ್ನು ಅವರು ಬಯಸಿದ್ದರು. ಒಂಬತ್ತು ನಿರ್ದೇಶಕರು ಇರುವ ಕೆಎಂಎಫ್ ನಲ್ಲಿ ಜೆಡಿಎಸ್ ಬೆಂಬಲಿತರ ಸಂಖ್ಯೆ ಮೂರು.
ನಿರ್ದೇಶಕ ಮಂಡಳಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿರುವುದರಿಂದ, ಆ ಹುದ್ದೆ ನಮಗೇ ಬೇಕೆನ್ನುವುದು ಕಾಂಗ್ರೆಸ್ ವಾದ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಸಂಖ್ಯೆ ಹೆಚ್ಚಿದ್ದರೂ, ಅವರನ್ನು ನಿಯಂತ್ರಿಸುತ್ತಿರುವುದು ರೇವಣ್ಣ.
ಲಾಭದಾಯಕ ಹುದ್ದೆಗಳಲ್ಲಿ ಒಂದಾಗಿರುವ ಕೆಎಂಎಫ್ ಅಧ್ಯಕ್ಷಗಿರಿಯ ವಿಚಾರ, ಮೈತ್ರಿ ಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆಯಾ, ಅಥವಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications