Nandini Milk Price : ಕರ್ನಾಟಕದಲ್ಲಿ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆ
ಬೆಂಗಳೂರು, ಸೆಪ್ಟೆಂಬರ್ 12: ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಸುವುದಕ್ಕೆ ಕೆಎಂಎಫ್ ನಿರ್ಧರಿಸಿದೆ. ಈ ಹಿಂದೆ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಲು ಒಕ್ಕೂಟವು ಸಲ್ಲಿಸಿದ ಪ್ರಸ್ತಾವನೆಗೆ ರಾಜ್ಯ ಸರ್ಕಾರವು ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ತಿಳಿಸಿದೆ.
ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಮೇಲೆ 3 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
Nandini Milk Price Hike : ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕಾಯುತ್ತಿರುವ ಕೆಎಂಎಫ್: ಒಪ್ಪಿಗೆ ಕೊಡುವುದೇ ಸರ್ಕಾರ?
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ. ಕರ್ನಾಟಕ ಹಾಲು ಒಕ್ಕೂಟದ ಎಲ್ಲಾ 14 ಹಾಲು ಒಕ್ಕೂಟಗಳು ಹಾಲಿನ ದರವನ್ನು ಹೆಚ್ಚಿಸುವುದಕ್ಕೆ ಒಲವು ತೋರಿವೆ ಎಂಬುದು ಗೊತ್ತಾಗಿದೆ. ನಂದಿನಿ ಹಾಲಿನ ದರದ ಬಗ್ಗೆ ಉಲ್ಲೇಖಿಸಿರುವ ಕೆಎಂಎಫ್, ಬೇರೆ ಬ್ರ್ಯಾಂಡ್ ಹಾಲಿನ ದರದ ಬಗ್ಗೆಯೂ ಉಲ್ಲೇಖಿಸಿದೆ.
ಹಾಲು ಒಕ್ಕೂಟದಿಂದ ಕೆಎಂಎಫ್ ಮೇಲೆ ಒತ್ತಡ
ರಾಜ್ಯದಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕಳೆದ ಎಂಟು ತಿಂಗಳಿನಿಂದಲೂ ಕೆಎಂಎಫ್ ಮೇಲೆ ಒತ್ತಡ ಹೇರಲಾಗುತ್ತಿದೆ. ಜಿಲ್ಲಾ ಒಕ್ಕೂಟಗಳ ಒತ್ತಡದ ಮೇರೆಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರಾಜ್ಯ ಸರ್ಕಾರದ ಬಳಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಸರ್ಕಾರದಿಂದ ಯಾವುದೇ ರೀತಿ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿನ್ನೆಲೆ ಸ್ವತಃ ಕೆಎಂಫ್ ದರ ಏರಿಕೆಯ ನಿರ್ಣಯಕ್ಕೆ ಮುಂದಾಗಿದೆ.
ಖಾಸಗಿ ಬ್ರ್ಯಾಂಡ್ ಕಂಪನಿಗಳಿಂದ ದರ ಪರಿಷ್ಕರಣೆ
ಕರ್ನಾಟಕದಲ್ಲಿ ಖಾಸಗಿ ಹಾಲಿನ ಬ್ರ್ಯಾಂಡ್ ಕಂಪನಿಗಳು ದರ ಪರಿಷ್ಕರಣೆ ಮಾಡಿಕೊಂಡಿವೆ. ಅದಾಗ್ಯೂ, ಎಂಟು ತಿಂಗಳಿನಿಂದ ಹಾಲಿನ ದರದಲ್ಲಿ ಯಾವುದೇ ರೀತಿಯ ಪರಿಷ್ಕರಣೆ ಮಾಡಿರಲಿಲ್ಲ. ಇದರಿಂದ ನಂದಿನಿ ಹಾಲು ಮತ್ತು ಇತರೆ ಬ್ರ್ಯಾಂಡಿನ ಹಾಲಿನ ದರದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಬೇರೆ ಕಂಪನಿಗಳ ಹಾಲಿನ ಪ್ಯಾಕೇಟ್ ಹಾಗೂ ನಂದಿನಿ ಹಾಲಿನ ಪ್ಯಾಕೇಟ್ ಮಧ್ಯೆ 8 ರಿಂದ 10 ರೂಪಾಯಿ ವ್ಯತ್ಯಾಸವಾಗುತ್ತಿದೆ ಎಂದು ಕರ್ನಾಟಕ ಹಾಲು ಒಕ್ಕೂಟ ಮಾಹಿತಿ ನೀಡಿದೆ.
ರೈತರಿಗೆ ಸಿಗಲಿದೆ ಈ ಏರಿಕೆಯ 3 ರೂಪಾಯಿ ದರ
ಕರ್ನಾಟಕ ಹಾಲು ಒಕ್ಕೂಟವು ಏರಿಕೆ ಮಾಡುವುದಕ್ಕೆ ನಿರ್ಧರಿಸಿದ 3 ರೂಪಾಯಿ ಹಾಲಿನ ದರವನ್ನು ರೈತರಿಗೆ ನೀಡುವುದಕ್ಕೆ ನಿರ್ಧರಿಸಿದೆ. ಬೇರೆ ಬ್ರ್ಯಾಂಡಿನ ಒಂದು ಲೀಟರ್ ಹಾಲಿನ ಬೆಲೆಯು 40ಕ್ಕಿಂತ ಹೆಚ್ಚಾಗಿದೆ. ಆದರೆ ನಂದಿನಿ ಹಾಲಿನ ದರವು 37 ರೂಪಾಯಿ ಆಗಿದೆ. ಈ ಹಿನ್ನೆಲೆ ಖಾಸಗಿ ಮತ್ತು ನಂದಿನಿ ಹಾಲಿನದ ದರದ ಮಧ್ಯೆ 8 ರಿಂದ 10 ರೂಪಾಯಿ ವ್ಯತ್ಯಾಸವಾಗುತ್ತದೆ. ಇದನ್ನು ಸರಿದೂಗಿಸಲು ಹಾಗೂ ರೈತರಿಗೆ ಆರ್ಥಿಕ ಬಲವನ್ನು ಒದಗಿಸುವುದಕ್ಕೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಆ ಏರಿಕೆಯ 3 ರೂಪಾಯಿ ಅನ್ನು ರೈತರಿಗೆ ನೀಡುವುದಾಗಿ ಕೆಎಂಎಫ್ ತಿಳಿಸಿದೆ.
ರೈತರಿಗೆ ವರದಾನವಾಗಲಿರುವ ಹೈನುಹಾರಿಕೆ
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಮಳೆಯ ಹೊಡೆತಕ್ಕೆ ರೈತರು ಬೆಳೆದ ಬೆಳೆಗಳು ಹಾನಿಯಾಗಿವೆ. ಇಂಥ ಸಂದರ್ಭದಲ್ಲಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ರೈತ ಕುಟುಂಬಗಳಿಗೆ ವರದಾನವಾಗಲಿದೆ. ಈ ಹಿನ್ನೆಲೆ ರೈತರನ್ನು ಉತ್ತೇಜಿಸುವುದರ ಜೊತೆಗೆ ಹೈನುಗಾರಿಕೆಯ ಮೇಲೆ ಅವಲಂಬಿತರಾದವರಿಗೆ ಪ್ರೋತ್ಸಾಹ ನೀಡಲು ಹಾಲಿನ ದರದಲ್ಲಿ ಏರಿಕೆ ಮಾಡುವುದು ಅನಿವರ್ಯವಾಗಿದೆ.