ಏಕಚಕ್ರಾಧಿಪತಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಪ್ರಶ್ನೆ!
Recommended Video
ಬೆಂಗಳೂರು, ಆಗಸ್ಟ್ 09 : ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಸಂಬಂಧಿಕರನ್ನು ಬಿ. ಎಸ್. ಯಡಿಯೂರಪ್ಪ ನೇಮಕ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ "ಏಕಚಕ್ರಾಧಿಪತಿ ಯಡಿಯೂರಪ್ಪನವರೇ?" ಎಂದು ಟ್ವೀಟ್ ಮಾಡಿದ್ದಾರೆ. "ಸಂಪುಟ ಸದಸ್ಯರ ಅನುಮೋದನೆಗೆ ಸಮಯವಿಲ್ಲದ ನಿಮ್ಮ ಹೈಕಮಾಂಡ್, ಕೆಎಂಎಫ್ಗೆ ಸದಸ್ಯರ ನೇಮಕಕ್ಕೆ ಆದ್ಯತೆ ನೀಡಲು ಹೇಳಿತ್ತೇ?" ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಎಸ್. ಸಿ. ಅಶೋಕ್ರನ್ನು ಅಧಿಕಾರೇತರ ಸದಸ್ಯರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿತ್ತು. ಎಸ್. ಸಿ. ಅಶೋಕ್ ಮುಖ್ಯಮಂತ್ರಿ ಯಡಿಯೂರಪ್ಪ ಸಂಬಂಧಿಕರು.
ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಯಡಿಯೂರಪ್ಪ ಇದುವರೆಗೂ ಸಂಪುಟ ವಿಸ್ತರಣೆ ಮಾಡಿಲ್ಲ. ಸಂಬಂಧಿಕರನ್ನು ನೇಮಕ ಮಾಡುವಾಗ ಇರುವ ಆತುರ, ಸಂಪುಟ ವಿಸ್ತರಣೆ ವಿಚಾರದಲ್ಲಿ ಏಕಿಲ್ಲ? ಎಂಬುದು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಶ್ನೆ.

ಸಿದ್ದರಾಮಯ್ಯ ಮಾಡಿರುವ ಟ್ವೀಟ್
"ಕೆಎಂಎಫ್ಗೆ ಸಂಬಂಧಿಕರನ್ನು ನೇಮಿಸುವ ಬದಲು ಸಚಿವ ಸಂಪುಟ ರಚನೆ ಮಾಡಿದ್ದರೆ ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದಿತ್ತಲ್ಲವೇ ಏಕಚಕ್ರಾಧಿಪತಿ ಯಡಿಯೂರಪ್ಪನವರೇ?. ಸಂಪುಟ ಸದಸ್ಯರ ಅನುಮೋದನೆಗೆ ಸಮಯವಿಲ್ಲದ ನಿಮ್ಮ ಹೈಕಮಾಂಡ್, ಕೆಎಂಎಫ್ಗೆ ಸದಸ್ಯರ ನೇಮಕಕ್ಕೆ ಆದ್ಯತೆ ನೀಡಲು ಹೇಳಿತ್ತೇ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಜೆಡಿಎಸ್ ಸಹ ಪ್ರಶ್ನೆ ಮಾಡಿದೆ
ಜೆಡಿಎಸ್ ಸಹ ಯಡಿಯೂರಪ್ಪ ನಡೆ ಪ್ರಶ್ನಿಸಿ ಟ್ವೀಟ್ ಮಾಡಿದೆ. "ಅಜ್ಜಿಗೆ ಅರಿವೆ ಚಿಂತೆ ಆದ್ರೆ ಮೊಮ್ಮಗಳಿಗೆ ಮದುವೆ ಚಿಂತೆಯಂತೆ ಹಾಗೆಯೇ ಉತ್ತರ ಕರ್ನಾಟಕದ ಜನ ಪ್ರವಾಹದಿಂದ ತತ್ತರಿಸುತ್ತಿದ್ದಾರೆ ಇತ್ತ ಯಡಿಯೂರಪ್ಪ ನವರು ತಂಗಿ ಮಗನಿಗೆ ಹಾಲು ಉತ್ಪಾದಕರ ಒಕ್ಕೂಟಕ್ಕೆ ನೇಮಕಾತಿ ಮಾಡೋದ್ರಲ್ಲಿ ನಿರತರಾಗಿದ್ದಾರೆ" ಎಂದು ಆರೋಪಿಸಿದೆ.

ಮಂತ್ರಿ ಮಂಡಲೇ ಇಲ್ಲ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದು, "ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಒಬ್ಬರೇ ಇದ್ಜಾರೆ. ಮಂತ್ರಿ ಮಂಡಲ ಇಲ್ಲ. ಸಿಎಂ ಒಬ್ಬರೆ ತಿರುಗಾಡುತ್ತಿದ್ದಾರೆ. ತುರ್ತಾಗಿ ಆಗಬೇಕಾದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಕೇಂದ್ರ ಸರ್ಕಾರವೂ ಇಲ್ಲಿಯವರೆಗೆ ಏನನ್ನು ಮಾತನಾಡಿಲ್ಲ" ಎಂದು ದೂರಿದ್ದಾರೆ.

ಸರ್ಕಾರದ ವಿರುದ್ದ ಜೆಡಿಎಸ್ ಅಕ್ರೋಶ
ಪ್ರತಿಪಕ್ಷ ಜೆಡಿಎಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. "ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ!. ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ" ಎಂದು ಟ್ವೀಟ್ ಮಾಡಿದೆ.












Click it and Unblock the Notifications