ನಾನು ಸಂಗೀತದ ವಿದ್ಯಾರ್ಥಿ, ಮೂಕಾಂಬಿಕೆ ನನ್ನ ಗುರು: ಯೇಸು ದಾಸ್
ಕುಂದಾಪುರ, ಜ.11: ಕಾಟ್ಟಶೇರಿ ಜೋಸೆಫ್ ಯೇಸುದಾಸ್ ಎಂದೇ ಖ್ಯಾತರಾಗಿರುವ ಕೆಜೆ ಯೇಸುದಾಸ್ ಅವರು ಶನಿವಾರ ಕೊಲ್ಲೂರು ಮುಕಾಂಬಿಕಾ ಸನ್ನಿಧಿಗೆ ಭೇಟಿ ನೀಡಿ, ತಾಯಿಯ ಆಶೀರ್ವಾದ ಪಡೆದುಕೊಂಡರು.
ಕರ್ನಾಟಕ ಸಂಗೀತದ ಪ್ರಮುಖ ಗಾಯಕರಾಗಿರುವ ಯೇಸುದಾಸ್ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಇಡೀ ದಿನ ಆಯೋಜಿಸಲಾಗಿತ್ತು.
ಪದ್ಮಶ್ರೀ ಪುರಸ್ಕೃತ ಕೇರಳದ ಕೊಚ್ಚಿ ಮೂಲದ ಯೇಸುದಾಸ್ ಅವರು ಕೊಲ್ಲೂರಿನ ದೇಗುಲ ಭೇಟಿ ಬಗ್ಗೆ ಮಾತನಾಡುತ್ತಾ, ನಾನು ಹಲವಾರು ವರ್ಷಗಳಿಂದ ಅಮ್ಮನ ಸನ್ನಿಧಿಗೆ ಬರುತ್ತಿದ್ದೇನೆ. ನಾನು ಸಂಗೀತದ ಮಾಸ್ಟರ್ ಅಲ್ಲ ನಾನೊಬ್ಬ ವಿದ್ಯಾರ್ಥಿ ಮೂಕಾಂಬಿಕೆಯೇ ನನ್ನ ಗುರು ದೈವ, ಸಂಗೀತ ಲೋಕದಲ್ಲಿ ಕಲಿಯುವುದು ಇನ್ನೂ ಬಹಳಷ್ಟಿದೆ ಎಂದರು.

ವಿಶೇಷ ಪೂಜೆ : ಶನಿವಾರ ಮುಂಜಾನೆ ಕೊಲ್ಲೂರು ಮುಕಾಂಬಿಕಾ ದೇಗುಲದ ಅಂಗಳದಲ್ಲಿ ಚಂಡಿಕಾ ಹೋಮ, ಜಪ, ಸಂಗೀತ ಸೇವೆ ಮುಂತಾ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಪತ್ನಿ ಪ್ರಭಾ, ಪುತ್ರರಾದ ವಿನೋದ್ ಹಾಗೂ ವಿಜಯ್ ಅವರು ಯೇಸುದಾಸ್ ಅವರ ಜೊತೆ ಪೂಜೆಯಲ್ಲಿ ಪಾಲ್ಗೊಂಡರು.
ಕೆ ರಾಮಚಂದ್ರನ್ ಹಾಗೂ ತಂಡದಿಂದ ವಿಶೇಷ ಸಂಗೀತ ಸೇವೆ ಸಲ್ಲಿಸಿದರು. ಇದಕ್ಕೂ ಮುನ್ನ ಕೆಜೆ ಯೇಸುದಾಸ್ ಅವರಿಗೆ ಶ್ರೀಮುಕಾಂಬಿಕಾ ಸಂಗೀತಾರಾಧಾನ ಸಮಿತಿಯಿಂದ ನೀಡುವ ಸೌಪರ್ಣಿಕಾಮೃತ ಸಂಗೀತ ಪುರಸ್ಕಾರವನ್ನು ಕೇರಳದ ಸಂಗೀತಗಾರ ಕುಮಾರ ಕೇರಳವರ್ಮ ಅವರಿಗೆ ಯೇಸ್ ದಾಸ್ ಅವರು ಪ್ರದಾನ ಮಾಡಿದರು.
ಚೆಂಬೈ ವೈದ್ಯನಾಥ ಭಾಗವತರ್ ಅವರಿಂದ ಶಾಸ್ತ್ರೀಯ ಸಂಗೀತದ ಪಾಠ ಕಲಿತ ಯೇಸುದಾಸ್ ಅವರು ಚಲನಚಿತ್ರರಂಗದಲ್ಲಿ ಸಾವಿರಾರು ಮನೋಜ್ಞ ಹಾಡುಗಳಿಗೆ ದನಿ ನೀಡಿದ್ದಾರೆ.
ಮಲೆಯಾಳಂ, ಕನ್ನಡ,ತಮಿಳು,ತೆಲುಗು ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಡಿರುವ ಯೇಸುದಾಸ್ ಅವರಿಗೆ ಏಳು ಬಾರಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಮಾತೃಭಾಷೆಯಾದ ಮಲೆಯಾಳಂ, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗು ಬಂಗಾಳಿ ಗುಜರಾತಿ, ಒಡಿಶಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು ಮತ್ತು ವಿದೇಶಿ ಭಾಷೆಗಳಾದ ರಷ್ಯನ್, ಅರೇಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಗೀತಮಾಧುರ್ಯ ಹರಿಸಿರುವ ಕಂಚಿನ ಕಂಠದ ಯೇಸುದಾಸ್ ಅವರಿಗೆ ಒನ್ ಇಂಡಿಯಾ ತಂಡದಿಂದಲೂ ಶುಭ ಹಾರೈಕೆಗಳು.
ಕೆಜೆ ಯೇಸುದಾಸ್ ಅವರ ಕಂಠದಲ್ಲಿ ತ್ಯಾಗರಾಜರ ಕೀರ್ತನೆ ಕೇಳಿ












Click it and Unblock the Notifications