ವಾಲ್ಮೀಕಿ ಸಮಯದಾಯದ ಮೀಸಲಾತಿ ಹೋರಾಟಕ್ಕೆ ಸುದೀಪ ಬೆಂಬಲ
Recommended Video
ಬೆಂಗಳೂರು, ಜೂನ್ 25 : ವಾಲ್ಮೀಕಿ ಸಮುದಾಯ ನಡೆಸುತ್ತಿರುವ ಮೀಸಲಾತಿ ಹೋರಾಟಕ್ಕೆ ನಟ ಕಿಚ್ಚ ಸುದೀಪ ಬೆಂಬಲ ನೀಡಿದರು. ಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಮಂಗಳವಾರ ಬೃಹತ್ ಹೋರಾಟ ನಡೆಯುತ್ತಿದೆ.
ಮಂಗಳವಾರ ಕಿಚ್ಚ ಸುದೀಪ ಅವರು ಟ್ವಿಟರ್ನಲ್ಲಿ ವಿಡಿಯೋವನ್ನು ಅಪ್ ಲೋಡ್ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪ್ರಸನ್ನಾನಂದ ಮಹಾಸ್ವಾಮಿ ಅವರು ಕೈಗೊಂಡ ಹೋರಾಟವನ್ನು ಅವರು ಶ್ಲಾಘಿಸಿದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಾಲ್ಮೀಕಿ ಸಮುದಾಯದ ಬೃಹತ್ ಹೋರಾಟ ನಡೆಯುತ್ತಿದೆ. ಶೇ 7.5ರಷ್ಟು ಮೀಸಲಾತಿ ನೀಡಬೇಕು ಎಂದು ಬೇಡಿಕೆ ಮುಂದಿಡಲಾಗಿದೆ.

ವಿಡಿಯೋದಲ್ಲಿ ಏನಿದೆ? : ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು 16 ದಿನಗಳಿಂದ ನೂರಾರು ಮೈಲಿ ಪಾದಯಾತ್ರೆ ಮಾಡಿ ಇವತ್ತು ಬೆಂಗಳೂರಿಗೆ ತಲುಪಿದ್ದಾರೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೋಸ್ಕರ.
ಒಂದು ಒಳ್ಳೆಯ ಛಲ ಎಂದು ಹೇಳಿದರೆ ತಪ್ಪಾಗೋದಿಲ್ಲ. ಅದಕ್ಕಾಗಿ ಸಾವಿರಾರು ಜನರು ಒಟ್ಟಿಗೆ ಹೆಜ್ಜೆ ಇಟ್ಟು ಬಲ ಕೊಟ್ಟಿದ್ದೀರಿ. ಇದಕ್ಕೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಿ ಒಂದು ಒಳ್ಳೆಯ ಪರಿಹಾರ ನೀಡುತ್ತದೆ ಎಂದು ನಂಬುತ್ತೇನೆ.
ಸ್ವಾಮೀಗಳೇ ಎಲ್ಲಾ ಸ್ನೇಹಿತರೇ ನಿಮಗೆ ನಮ್ಮ ಬೆಂಬಲವೂ ಇದೆ ಎಂದು ಹೇಳುತ್ತೇನೆ. ಆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ನಾನು ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ.
ದಾವಣಗೆರೆಯಲ್ಲಿ ಆರಂಭವಾದ ಪಾದಯಾತ್ರೆ ಇಂದು ಬೆಂಗಳೂರಿಗೆ ತಲುಪಿದೆ. ನಗರದ ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications