ಇಡಿ ವಿಚಾರಣೆಗೆ ಹಾಜರಾದ ಕೆಜಿಎಫ್ ಬಾಬುಗೆ ಕಂಟಕವಾಗುತ್ತೇ ಬೇನಾಮಿ?
ಬೆಂಗಳೂರು, ಜೂ. 16: ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲನ್ನಪ್ಪಿದ್ದ ಗುಜರಿ ವ್ಯಾಪಾರಿ, ರಿಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬು ಗುರುವಾರ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.
ಬೇನಾಮಿ ವಹಿವಾಟು ಕಂಡು ಬಂದ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರ ನಿವಾಸ ಹಾಗೂ ಎಂಟು ರಿಯಲ್ ಎಸ್ಟೇಟ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೇ. 28 ರಂದು ದಾಳಿ ಮಾಡಿದ್ದರು. ದಾಳಿ ವೇಳೆ ವಿವಿಧ ರಿಯಲ್ ಎಸ್ಟೇಟ್ ಕಂಪನಿಗಳ ಅಕ್ರಮ ಜತೆಗೆ ಹಣದ ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಖಲೆಗಳ ಪರಿಶೀಲನೆ ಬಳಿಕ ಇದೀಗ ಬಾಬು ಅವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಇಡಿ ನೋಟಿಸ್ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅಲಿಯಾಸ್ ಯೂಸೆಫ್ ಷರೀಪ್ ಗುರುವಾರ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ.
ವಸಂತನಗರ ಮನೆ ಮೇಲೆ ದಾಳಿ:
ವಸಂತನಗರದಲ್ಲಿದ್ದ ಕೆಜಿಎಫ್ ಬಾಬು ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಬೆಳಗಿನ ಜಾವ ದಾಂಗುಡಿ ಇಟ್ಟು ದಾಖಲೆಗಳನ್ನು ಪಡೆದಿದ್ದರು. ಸುಮಾರು ಎಂಟಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಬೋಗಸ್ ಕಂಪನಿಗಳು ಹುಟ್ಟಿಹಾಕಿರುವ ಕೆಜಿಎಫ್ ಬಾಬು ಸರ್ಕಾರದ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ನಗರದ ಪ್ರಮುಖ ಪ್ರದೇಶದಲ್ಲಿ ಸರ್ಕಾರಿ ಜಮೀನನ್ನು ಆಕ್ಷನ್ ಹೆಸರಿನಲ್ಲಿ ಖರೀದಿಸಿ ಕೋಟಿ ಕೋಟಿ ಲೂಟಿ ಮಾಡಿದ ಆರೋಪ ಕೇಳಿ ಬಂದಿತ್ತು. ನಾನಾ ಕಂಪನಿಗಳ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಸಿ ಅದನ್ನು ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಬಾಬು ಅನ್ಯ ಕಂಪನಿಗಳಿಗೆ ಮಾರಾಟ ಮಾಡಿ ಕೋಟಿ ಕೋಟಿ ಗಳಿಸಿದ ಆರೋಪ ಕೇಳಿ ಬಂದಿತ್ತು.ಚುನಾವಣೆ ವೇಳೆ ಕೋಟಿ ಕೋಟಿ ಹಣ ಬೇನಾಮಿ ವಹಿವಾಟು ನಡೆಸಿದ್ದ ಮಾತು ಕೇಳಿ ಬಂದಿತ್ತು.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದು ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ವಿರುದ್ಧ ಸೋಲುಂಡಿದ್ದರು. ರೋಲ್ಸ್ ರಾಯ್ ಕಾರಿನಲ್ಲಿ ಬಂದಿದ್ದ ಬಾಬು ಸೋಲು ಕಂಡು ಆಟೋದಲ್ಲಿ ತೆರಳುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಚುನಾವಣೆ ವೇಳೆ 1743 ಕೋಟಿ ರೂ. ಆಸ್ತಿಯನ್ನು ಚುನಾವಣಾ ಆಯೋಗದ ಮುಂದೆ ಘೋಷಣೆ ಮಾಡಿದ್ದರು. ಈ ಮೂಲಕ ರಾಜ್ಯದ ನಂಬರ್ ಒನ್ ಶ್ರೀಮಂತ ರಾಜಕಾರಣಿ ಎಂದೇ ಹೆಸರಾಗಿದ್ದರು.

ಐದನೇ ಕ್ಲಾಸು ಬಾಬು ಕೋಟ್ಯಾಧಿಪತಿ!
ಕೇವಲ ಐದನೇ ತರಗತಿ ಓದಿರುವ ಯೂಸೆಫ್ ಷರೀಫ್ ಒಂದು ಕಾಲದಲ್ಲಿ ಕೇವಲ ಒಂದು ಬೀಡಿಗಾಗಿ ಒದ್ದಾಡುತ್ತಿದ್ದರು. ಚಿಕ್ಕಳು ಬಾಬು ಎಂದೇ ಹೆಸರು ಪಡೆದಿದ್ದ ಬಾಬುಗೆ ಅದೃಷ್ಟ ಖುಲಾಯಿಸಿದ್ದು ಕೆಜಿಎಫ್ ಗಣಿಯಲ್ಲಿ ಮಿಲ್ ಗಳನ್ನು (ಗುಜರಿ ವ್ಯಾಪಾರ) ಖರೀದಿಸಿ ಮಾರಾಟಕ್ಕೆ ಯತ್ನಿಸಿದ್ದರು. ಈ ವೇಳೆ ಆ ಮಿಲ್ ನೊಳಗೆ ಚಿನ್ನದ ಗಟ್ಟಿಗಳು ಸಿಕ್ಕಿದ್ದರಿಂದ ಯೂಸೆಫ್ ಷರೀಫ್ ಅದೃಷ್ಟವೇ ಬದಲಾಗಿತ್ತು ಎಂಬುದು ಬಾಬು ಬಗ್ಗೆ ಹೇಳುವ ಮಾತು.

ಎಂಟು ರಿಯಲ್ ಎಸ್ಟೇಟ್ ಕಂಪನಿಗಳ ಒಡೆಯ:
ಯೂಸೆಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಒಡೆತನದ ಒಂಭತ್ತು ರಿಯಲ್ ಎಸ್ಟೇಟ್ ಕಂಪನಿಗಳಿಗೆ. ಈ ಕಂಪನಿಗಳು ಬಹುತೇಕ ಸರ್ಕಾರದ ಜಮೀನನ್ನು ಅಕ್ಷನ್ ನಲ್ಲಿ ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿವೆ. ಟೆನೋ ಲ್ಯಾಂಡ್ ಡೆವಲಪರ್ಸ್ ಪ್ರೆ. ಲಿ. ಹಿಲ್ ಲ್ಯಾಂಡ್ ಬಿಲ್ಡ್ ಕಾನ್ ಪ್ರೆ. ಲಿಮಿಟೆಡ್, ಉಮ್ರಾ ಬ್ರದರ್ಸ್, ಉಮ್ರಾ ಡೆಲವಪರ್ಸ್, ಆಫನಾನ್ ಡೆವಲಪರ್ಸ್, ಹಿಲ್ ಲ್ಯಾಂಡ್ ಪ್ರಾಪರ್ಟಿಸ್, ಜುಮೇರಾ ಕನ್ಸ್ಟ್ರಕ್ಷನ್ ಪ್ರೆ. ಲಿ. ಜಾಮ್ ಜಾಮ್ ಬಿಲ್ಡರ್ಸ್, ಎಂವಿಆರ್ ಸೆಕ್ಯುರಿಟಿಸ್ ಪ್ರೆ. ಲಿ. ಸೇರಿದಂತೆ ಹಲವು ಕಂಪನಿಗಳ ಒಡೆಯ ಕೆಜಿಎಫ್ ಬಾಬು.












Click it and Unblock the Notifications