ಕೇರಳದಿಂದ ಕರ್ನಾಟಕದವರೆಗೆ: ಪಿಎಫ್ಐ ಹುಟ್ಟು ಮತ್ತು ಬೆಳವಣಿಗೆ
ಬೆಂಗಳೂರು, ಫೆಬ್ರವರಿ 22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅರ್ಥಾತ್ ಪಿಎಫ್ಐ; ಸದ್ಯ ಕರ್ನಾಟಕದಲ್ಲಿ ಚರ್ಚೆಯ ಕೇಂದ್ರ ಸ್ಥಾನದಲ್ಲಿರುವ ಸಂಘಟನೆಯೊಂದರ ಹೆಸರು.
ಇದೊಂದು ಮುಸ್ಲಿಂ ಮೂಲಭೂತವಾಗಿ ಸಂಘಟನೆ ಎಂಬ ಆರೋಪವನ್ನು ಹೊತ್ತುಕೊಂಡಿದೆ. ಸಹಜವಾಗಿಯೇ ಬಿಜೆಪಿ ಮತ್ತು ಆರ್.ಎಸ್.ಎಸ್ ಸಂಘಟನೆಗಳು ಈ ಪಿಎಫ್ಐ ನಿಷೇಧಕ್ಕೆ ಒತ್ತಾಯಿಸುತ್ತಿದ್ದರೆ, ಕಾಂಗ್ರೆಸ್ ಬ್ಯಾನ್ ಮಾಡಲ್ಲ ಎಂದು ಪಟ್ಟು ಹಿಡಿದರು ಕೂತಿದೆ.
ಹಾಗಿದ್ದರೆ ಪಿಎಫ್ಐ ಸಂಘಟನೆ ಮೂಲ ಯಾವುದು? ಹುಟ್ಟಿದ್ದು ಹೇಗೆ? ಕರ್ನಾಟಕದಲ್ಲಿ ಪಿಎಫ್ಐ ಬೇರುಗಳು ಎಲ್ಲೆಲ್ಲಿವೆ? ಎಂದು ಹುಡುಕುತ್ತಾ ಹೊರಟರೆ ಕುತೂಹಲಕಾರಿ ಕಥೆಗಳು ತೆರೆದುಕೊಳ್ಳುತ್ತವೆ.

ಕೇರಳದಲ್ಲಿ ಹುಟ್ಟು
ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್ (ಎನ್.ಡಿ.ಎಫ್)ನ ಮುಂದುವರಿದ ಭಾಗವಾಗಿ 2006ರಲ್ಲಿ ಸ್ಥಾಪನೆಯಾಗಿದ್ದೇ ಪಿಎಫ್ಐ. ಮುಂದೆ ಎನ್.ಡಿ.ಎಫ್, ತಮಿಳುನಾಡಿನ ಮನಿತಾ ನೀತಿ ಪಸರೈ, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆ.ಎಫ್.ಡಿ) ಇದರಲ್ಲಿ ವಿಲೀನವಾದವು. ಇದರ ಜತೆಗೆ ಇನ್ನೂ ಹಲವು ರಾಜ್ಯಗಳಲ್ಲಿ ಹಲವು ಸಂಘಟನೆಗಳು ಪಿಎಫ್ಐನಲ್ಲಿ ವಿಲೀನಗೊಂಡವು. ಅಲ್ಲಿಗೆ ಪಿಎಫ್ಐ ಬಲಗೊಂಡಿತು.

ಹಲವು ಅಂಗ ಸಂಸ್ಥೆಗಳು
ಮಹಿಳಾ ಸಂಘಟನೆ 'ನ್ಯಾಷನಲ್ ವುಮನ್ಸ್ ಫ್ರಂಟ್, ವಿದ್ಯಾರ್ಥಿಗಳ ಸಂಘಟನೆ 'ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ', ರಾಜಕೀಯ ಪಕ್ಷ 'ಎಸ್.ಡಿ.ಪಿ.ಐ' ಇದೇ ಪಿಎಫ್ಐನ ಅಂಗ ಸಂಸ್ಥೆಗಳಾಗಿವೆ. ಸದ್ಯ ನವದೆಹಲಿಯಲ್ಲಿ ಇದರ ಕೇಂದ್ರ ಕಚೇರಿಯಿದೆ. ದೇಶದಾದ್ಯಂತ ಈ ಸಂಘಟನೆ ಕಾರ್ಯ ನಿರ್ವಹಿಸುತ್ತದೆ.
ಆಗಾಗ ಸಾರ್ವಜನಿಕವಾಗಿ ಸಮವಸ್ತ್ರ ಧರಿಸಿ ಪೆರೇಡನ್ನೂ ಈ ಸಂಘಟನೆ ನಡೆಸುತ್ತದೆ.

ಧ್ಯೇಯ
ನ್ಯಾಯ, ಸ್ವಾತಂತ್ರ್ಯ ಮತ್ತು ಸುರಕ್ಷತೆಗಾಗಿ ಹೋರಾಡುವುದೇ ತನ್ನ ಧ್ಯೇಯ ಎಂದು ಸಂಘಟನೆ ಹೇಳಿಕೊಳ್ಳುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆ, ಯುಎಪಿಎ ಕಾಯ್ದೆ ವಿರುದ್ಧ ಹೋರಾಟ, ಮುಸ್ಲಿಮರ ಹಕ್ಕುಗಳಿಗಾಗಿ ಧರಣಿ ಹೀಗೆ ನಿರಂತರ ಚಟುವಟಿಕೆಗಳನ್ನು ಈ ಸಂಘಟನೆ ಮಾಡುತ್ತಾ ಬಂದಿದೆ.
ಗಾಝಾ , ಪ್ಯಾಲೆಸ್ತೀನ್ ಸೇರಿದಂತೆ ಅಂತರಾಷ್ಟ್ರೀಯ ವಿಷಯಗಳ ಬಗ್ಗೆಯೂ ಸಂಘಟನೆ ಹಲವು ಹೋರಾಟ, ಪ್ರತಿಭಟನೆಗಳನ್ನು ಮಾಡಿದ ಉದಾಹರಣೆಗಳಿವೆ.
ಇದೇ ವೇಳೆ ಸಂಸ್ಥೆಯ ಮೇಲೆ ಹಲವು ಗುರುತರ ಆರೋಪಗಳೂ ಇವೆ. ಅವುಗಳಲ್ಲಿ ಮುಖ್ಯವಾದುದು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಜತೆಗಿನ ಸಂಬಂಧ.

ತೀವ್ರವಾದಿ ಸಂಘಟನೆ ಆರೋಪ
ಅಪಹರಣ, ಕೊಲೆ, ಬೆದರಿಕೆ, ದ್ವೇಷದ ಪ್ರಚಾರಗಳು, ಗಲಭೆ, ಲವ್ ಜಿಹಾದ್, ಧಾರ್ಮಿಕ ತೀವ್ರವಾದ ಮತ್ತು ಶಸ್ತ್ರಾಸ್ತ್ರ ಹೊಂದಿದ ಆರೋಪಗಳು ಸಂಘಟನೆಯ ಮೇಲಿವೆ. ಕೇರಳದ ಪ್ರೊ. ಟಿ.ಜೆ. ಥಾಮಸ್ ಮೇಲಿನ ದಾಳಿ ಈ ಸಂಘಟನೆ ವಿರುದ್ಧ ಕೇಳಿ ಬಂದ ಪ್ರಮುಖ ಆರೋಪಗಳಲ್ಲಿ ಒಂದು. ಆದರೆ ಇದನ್ನು ಸಂಘಟನೆ ಮಾತ್ರ ಅಲ್ಲಗಳೆಯುತ್ತಲೇ ಬಂದಿದೆ.
ಕರ್ನಾಟಕದಲ್ಲಿಯೂ ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ, ಕೊಲೆ ಮಾಡಿದ ಆರೋಪಗಳು ಸಂಘಟನೆ ಮೇಲಿವೆ. ಎನ್ಐಎ ಚಾರ್ಜ್ ಶೀಟ್ ನಲ್ಲಿ ಶಿವಾಜಿನಗರದ ರುದ್ರೇಶ್ ಹಂತಕರು ಪಿಎಫ್ಐ ಜತೆ ಸಂಪರ್ಕ ಹೊಂದಿದ್ದರು ಎಂದು ದಾಖಲಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಇತ್ತೀಚಿನ ಸುದ್ದಿಯನ್ನೇ ತೆಗೆದುಕೊಂಡರೆ ಜಾರ್ಖಂಡ್ ನಲ್ಲೀ ಐಸಿಸ್ ಜತೆ ಸಂಬಂಧ ಇದೆ ಎಂಬ ಕಾರಣಕ್ಕೆ ಪಿಎಫ್ಐಗೆ ನಿಷೇಧ ಹೇರಲಾಗಿದೆ.

ಕೇರಳದಲ್ಲಿ ನಿಷೇಧ
2012 ರಲ್ಲಿ, ಕೇರಳ ಸರ್ಕಾರವು ಪಿಎಫ್ಐ ಚಟುವಟಿಕೆಗಳು ರಾಷ್ಟ್ರದ ಸುರಕ್ಷತೆಗೆ ಅಪಾಯಕಾರಿಯಾಗಿವೆ ಮತ್ತು ಇದು ನಿಷೇಧಿತ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಮತ್ತೊಂದು ರೂಪ ಎಂಬ ಅಭಿಪ್ರಾಯವನ್ನು ಹೈಕೋರ್ಟಿಗೆ ತಿಳಿಸಿತ್ತು. ಅಲ್ಲಿ ಸ್ವಾತಂತ್ರ್ಯ ದಿನದಂದು ಹಮ್ಮಿಕೊಂಡಿದ್ದ ಫ್ರೀಡಂ ಪೆರೇಡ್ ಗೆ ನಿಷೇಧ ಹೇರಲು ಸರಕಾರ ಹೈಕೋರ್ಟ್ ಮೊರೆ ಹೋದ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಸರಕಾರದ ವಾದವನ್ನು ಅವತ್ತು ಕೋರ್ಟ್ ತಳ್ಳಿ ಹಾಕಿತಾದರೂ, ಸಂಘಟನೆ ಮೇಲೆ ಕೇರಳದಲ್ಲಿ 2010ರಲ್ಲಿ ಹೇರಿದ್ದ ನಿಷೇಧವನ್ನು ಎತ್ತಿ ಹಿಡಿಯಿತು. 2010ರ ಜುಲೈನಲ್ಲಿ ಪಿಎಫ್ಐ ಕಾರ್ಯಕರ್ತರಿಂದ ನಾಡ ಬಾಂಬು, ಶಸ್ತ್ರಾಸ್ತ್ರಗಳು ಮತ್ತು ಆಲ್ ಕೈದಾ, ತಾಲಿಬಾನ್ ಸಿದ್ಧಾಂತದ ಸಿಡಿಗಳನ್ನು ವಶಕ್ಕೆ ಪಡೆದ ಆಧಾರದಲ್ಲಿ ಕೇರಳ ಸರಕಾರ ರಾಜ್ಯದಲ್ಲಿ ಸಂಘಟನೆಗೆ ನಿಷೇಧ ಹೇರಿತ್ತು.
ಇದಾದ ಬಳಿಕ 2013ರಲ್ಲೂ ರೈಡ್ ಮಾಡಿದಾಗ ಇದಕ್ಕಿಂತ ಹೆಚ್ಚಿನ ಶಸ್ತ್ರಾಸ್ತ್ರಗಳು ಸಿಕ್ಕಿತ್ತು.

ಪಿಎಫ್ಐ ಮತ್ತು ಸಿಮಿ (SIMI)
ಪಿಎಫ್ಐ ಇಷೇಧಿತ ಸಿಮಿಯ ಇನ್ನೊಂದು ರೂಪ ಎಂಬ ಆರೋಪಗಳ ಜತೆಗೆ ಇದಕ್ಕೆ ಒಂದಷ್ಟು ಮೇಲ್ನೋಟದ ಸಾಕ್ಷ್ಯಗಳೂ ಇವೆ.
ಹಾಲಿ ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರೆಹ್ಮಾನ್ ಈ ಹಿಂದೆ ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದವರು. ಪಿಎಫ್ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಿಂದೆ ಸಿಮಿಯಲ್ಲೂ ರಾಜ್ಯ ಕಾರ್ಯದರ್ಶಿಯಾಗಿದ್ದರು. ಸಂಘಟನೆಯ ಹಲವು ಹಾಲಿ ಪದಾಧಿಕಾರಿಗಳು ಸಿಮಿಯವರೇ ಆಗಿದ್ದಾರೆ.
ಆದರೆ ಇದನ್ನು ಪಿಎಫ್ಐ ನಾಯಕರು ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಸಂಘಟನೆ 1993ರಲ್ಲೇ ಆರಂಭವಾಗಿದೆ. ಸಿಮಿ ನಿಷೇಧಿತವಾಗಿದ್ದು 2001ರಲ್ಲಿ ಎಂಬುದು ಅವರ ವಾದ.

ಕರ್ನಾಟಕದಲ್ಲಿ ಪಿಎಫ್ಐ ಬೇರುಗಳು
2006ರಲ್ಲಿ ಕೆ.ಎಫ್.ಡಿ ಸಂಘಟನೆ ಪಿಎಫ್ಐ ಜತೆ ವಿಲೀನವಾಗುವುದರೊಂದಿಗೆ ಕರ್ನಾಟಕದಲ್ಲಿ ಪಿಎಫ್ಐ ತನ್ನ ಬೇರುಗಳು ಇಳಿಬಿಡಲು ಆರಂಭಿಸಿತು. ಇವತ್ತಿಗೆ ಸಂಘಟನೆ ದಕ್ಷಿಣ ಕನ್ನಡ ಭಾಗದಲ್ಲಿ ಮರವಾಗಿ ಬೆಳೆದಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿಯೂ ಇಲ್ಲಿನ ಕಾಡುಗಳಷ್ಟೇ ಸದೃಢವಾಗಿದೆ.

ಕರ್ನಾಟಕದಲ್ಲಿ ವಿವಾದಿತ ಸಂಘಟನೆ
2015ರಲ್ಲಿ ಶಿವಮೊಗ್ಗದಲ್ಲಿ ನಡೆದ ಗಲಭೆಯಲ್ಲಿ ಇಬ್ಬರು ಅಸುನೀಗಿದ್ದರು. ಈ ಘಟನೆಯಲ್ಲಿ ಪಿಎಫ್ಐ ಪಾತ್ರದ ಬಗ್ಗೆ ಗಂಭೀರ ಆರೋಪಗಳಿವೆ. ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ರುದ್ರೇಶ್ ಕೊಲೆ ಮತ್ತೊಂದು ಉದಾಹರಣೆ. ದಕ್ಷಿಣ ಕನ್ನಡ ಭಾಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತರನ್ನು ಪಿಎಫ್ಐ ಕೊಂದಿದೆ ಎಂದು ಬಿಜೆಪಿ ನಿರಂತರ ಆರೋಪ ಹೊರಿಸುತ್ತಲೇ ಬಂದಿದೆ.
ಒಟ್ಟಾರೆ ಕರ್ನಾಟಕದಲ್ಲಿ ಪಿಎಫ್ಐ ಆರ್ಥಿಕವಾಗಿಯೂ ಸಂಘಟನಾತ್ಮಕವಾಗಿಯೂ ಗಟ್ಟಿಯಾಗಿದೆ. ಇಂಥ ಸಂಘಟನೆಯನ್ನು ಬ್ಯಾನ್ ಮಾಡವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಿಂದ ಪ್ರಸ್ತಾವನೆ ಬಂದರೆ ನಿಷೇಧಿಸುತ್ತೇವೆ ಎಂದು ಕೇಂದ್ರ ಬಿಜೆಪಿ ಸರಕಾರವೂ ನುಣುಚಿಕೊಂಡಿದೆ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications