ರಾಜ್ಯದಿಂದ ಸಿಗದ ಬೆಂಬಲ, ಸಿಲ್ವರ್ ಲೈನ್ ರೈಲು ಯೋಜನೆ ಸ್ಥಗಿತಗೊಳಿಸಿದ ಕೇರಳ
ಬೆಂಗಳೂರು, ನ.28: ಕರ್ನಾಟಕ ಸರ್ಕಾರದ ಬೆಂಬಲವನ್ನು ಪಡೆಯುವ ಪ್ರಯತ್ನಗಳು ನಿಷ್ಪ್ರಯೋಜಕವಾದ್ದರಿಂದ ಕೇರಳ ಸರ್ಕಾರವು ಮಹತ್ವಾಕಾಂಕ್ಷೆಯ ಸಿಲ್ವರ್ ಲೈನ್ ಸೆಮಿ-ಹೈ-ಸ್ಪೀಡ್ ರೈಲು ಯೋಜನೆಯನ್ನು ಸ್ಥಗಿತಗೊಳಿಸಿದೆ.
ಕೇರಳ ಸರ್ಕಾರದ ಆದೇಶದ ಪ್ರಕಾರ, ಸಿಲ್ವರ್ಲೈನ್ನ ಭೂಮಾಪನ ಮತ್ತು ಸ್ವಾಧೀನ ಸಂಬಂಧಿತ ಚಟುವಟಿಕೆಗಳಿಗೆ ನಿಯೋಜಿಸಲಾದ ಸುಮಾರು 200 ಅಧಿಕಾರಿಗಳಿಗೆ ಮತ್ತೆ ಹಳೆಯ ಇಲಾಖೆಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಕೇಂದ್ರದ ಒಪ್ಪಿಗೆ ಪಡೆದ ನಂತರವೇ ಯೋಜನೆಗೆ ಸಂಬಂಧಿಸಿದ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಹಿಂದೆ ರಾಜ್ಯ ಸರ್ಕಾರ ಅದರಲ್ಲೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಏನಾದರೂ ಮಾಡಿ ಮುಂದಕ್ಕೆ ಕೊಂಡೊಯ್ಯಲಾಗುವುದು ಎಂದು ಹಠ ಹಿಡಿದಿದ್ದರು.

ನವೆಂಬರ್ 27 ರಂದು ತಿರುವನಂತಪುರಂನಲ್ಲಿ ಕಂದಾಯ ಇಲಾಖೆ ಹೊರಡಿಸಿದ ಸರ್ಕಾರಿ ಆದೇಶದಲ್ಲಿ ಸಿಲ್ವರ್ಲೈನ್ ಯೋಜನೆಗಾಗಿ ಭೂಸ್ವಾಧೀನ ಘಟಕಗಳಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳಬಹುದು ಮತ್ತು ಸಿಬ್ಬಂದಿಯನ್ನು ಇತರ ಅಗತ್ಯ ಯೋಜನೆಗಳಿಗೆ ಮರು ನಿಯೋಜನೆ ಮಾಡಬಹುದು ಎನ್ನಲಾಗಿದೆ.
ಕೇರಳದ ಈ ಯೋಜನೆಗೆ ಕೇಂದ್ರದ ಬಿಜೆಪಿ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಲಿಲ್ಲ. ಇತ್ತ ಈ ರೂಲು ಯೋಜನೆಯನ್ನು ಮಂಗಳೂರಿನವರೆಗೂ ವಿಸ್ತರಿಸುವ ಕೇರಲದ ಪ್ರಸ್ತಾವನೆಗೆ ಬೊಮ್ಮಾಯಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.
ಕೇರಳ ಸರ್ಕಾರದ ಪ್ರಸ್ತಾವಿತ ತಿರುವನಂತಪುರ-ಕಾಸರಗೋಡು ಸೆಮಿ ಹೈಸ್ಪೀಡ್ ರೈಲು ಯೋಜನೆಯನ್ನು ಮಂಗಳೂರಿನ ತನಕ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗಿತ್ತು. ಬೆಂಗಳೂರಿಗೆ ಪಿಣರಾಯಿ ವಿಜಯನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಸಭೆ ಬಳಿಕ "ಕೇರಳ ಪ್ರಸ್ತಾಪಿಸಿದ ಮೂರು ಯೋಜನೆಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವ ಕಾರಣ ತಿರಸ್ಕರಿಸಲಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.












Click it and Unblock the Notifications