ಹಿಂದೂ ಮಹಿಳೆಯರ ರಕ್ಷಣೆಗಾಗಿ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ: ಪ್ರಮೋದ್ ಮುತಾಲಿಕ್
ಕಲಬುರಗಿ, ಜನವರಿ 13: ಹಿಂದೂ ಮಹಿಳೆಯರ ರಕ್ಷಣೆಗಾಗಿ ನಿಮ್ಮ ಮನೆಗಳಲ್ಲಿ ಎಲ್ಲರಿಗೂ ಕಾಣಿಸುವ ಸ್ಥಳದಲ್ಲಿ ತಲ್ವಾರ್ ಇಟ್ಟುಕೊಳ್ಳಿ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಸಲಹೆ ನೀಡಿದರು.
ಈ ಕುರಿತು ಗುರುವಾರ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಶ್ರೀರಾಮಸೇನೆ ಸಂಘಟನೆ ವತಿಯಿಂದ ನಡೆದ ಸಂತರ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ತಲ್ವಾರ್ ಇಟ್ಟುಕೊಂಡರೆ ಪೊಲೀಸರು ಎಫ್ಐಆರ್ ಹಾಕಲ್ಲ. ತಲ್ವಾರ್ ಅನ್ನು ಸಹೋದರಿಯರ ರಕ್ಷಣೆಗೆ ಇಡಬೇಕೆ ಹೊರತು ಬೇರೆ ಯಾರನ್ನೋ ಹೊಡೆಯಲು ಅಲ್ಲ ಎಂದು ಹೇಳಿದ್ದಾರೆ.
ಇನ್ನೂ ದಸರ ಆಯುಧ ಪೂಜೆ ದಿನದಂದು ಪೆನ್, ಪುಸ್ತಕ, ಟ್ರ್ಯಾಕ್ಟರ್ಗೆ ಬದಲು ತಲ್ವಾರ್ಗೆ ಪೂಜಿಸಬೇಕು. ಆಯುಧವೆಂದರೆ ಖಡ್ಗ, ಭರ್ಚಿ, ತ್ರಿಶೂಲ, ಕೊಡಲಿ. ಆಯುಧ ಪೂಜೆಯ ದಿನದಂದು ಠಾಣೆಗಳಲ್ಲಿ ಪೊಲೀಸರು ಬಂದೂಕಿಗೆ ಪೂಜಿಸುತ್ತಾರೆ ಹೊರತು ಎಫ್ಐಆರ್ ಪ್ರತಿಗಳಿಗಲ್ಲ ಎಂದರು.
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಯಾವುದೇ ಒಂದು ಒಂದು ಸಮಾವೇಶ ನಡೆಸಿದರೆ, ಕೆಲವು ದೇಶದ್ರೋಹಿ ಮುಸಲ್ಮಾನರು ಸುಮ್ಮಸುಮ್ಮನೇ ಅಪಪ್ರಚಾರ ಮಾಡುತ್ತಾರೆ. ಅದಕ್ಕೆ ಸಾಥ್ ನೀಡುತ್ತಿರುವ ತಾಲೂಕಿನ ಶಾಸಕ ಅಜಯಸಿಂಗ್ ಕೋಮುವಾದಿಗಳು. ನಮ್ಮ ತಾಲೂಕು ಭಾವೈಕ್ಯತೆಯ ತಾಲೂಕು ಅಂತಿರಲ್ಲಾ ಈ ಹಿಂದೆ ನಮ್ಮ ಮಾಜಿ ಅಧ್ಯಕ್ಷ ಶರಣು ಕೋಳಕೂರ ಅವರ ಮನೆಯ ಮೇಲೆ ಮುಸ್ಲಿಮರು ಹಲ್ಲೆ ಮಾಡಿದಾಗ ಸೌಜನ್ಯಕ್ಕೂ ಸಹ ಭೇಟಿ ಕೊಡಲಿಲ್ಲ, ಅವರಿಗೆ ಪ್ರಚೋದನೆ ನೀಡಿದವರೆ ನೀವು ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತಿರಾ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಮಲ್ಲಿನಾಥ ಗೌಡ ಪಾಟೀಲ್ ಯಲಗೋಡ ಕಾರ್ಯಕ್ರಮ ಉದ್ಘಾ ಟಿಸಿದರು, ಚೈತ್ರಾ ಕುಂದಾಪುರ, ಡಾ. ವಿಶ್ವರಾದ್ಯ ಶೀವಾಚಾರ್ಯರು, ಡಾ. ಶಿವಾನಂದ ಸ್ವಾಮೀಜಿ ಸೊನ್ನ ರುದ್ರಮುನಿ ಶಿವಾಚಾರ್ಯರು, ಕೆಂಚ ವೃಷಭೇಂದ್ರ ಶಿವಾಚಾರ್ಯರು, ಚನ್ನಮಲ್ಲ ಮಹಾಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ದೊಡ್ಡಪ್ಪಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿಗಿ, ದಂಡಪ್ಪ ಸಾಹು ಕುರಳಗೆರಾ, ರೇವಣಸಿದ್ದಪ್ಪ ಸಂಕಾಲಿ, ಸಿದ್ದು ನಾಲ್ನೋಡಿ, ಮಡಿವಾಳಪ್ಪ ತಳವಾರ, ವಿಶ್ವನಾಥಗೌಡ ಪಾಟೀಲ್, ಒಂಟು ಕಡಕೋಳ, ರಾಜು ದೋತ್ರೆ, ಗಿರೀಶ ಗುತ್ತೆದಾರ ಇದ್ದರು. 6000ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.