ಕೆಪಿಸಿಸಿಯಿಂದ ಕೆ.ಸಿ.ವೇಣುಗೋಪಾಲ್ ಔಟ್: ಸಿದ್ದರಾಮಯ್ಯಗೆ ಹಿನ್ನಡೆ?
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರೀ ಬದಲಾವಣೆಯನ್ನು ಮಾಡಿದ್ದಾರೆ. ಪಕ್ಷದ ಒಂದು ವರ್ಗ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದ ನಂತರ, ಸೋನಿಯಾ ಈ ಬದಲಾವಣೆಯನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದ ಸಭೆಯಲ್ಲಿ ರಾಹುಲ್ ಗಾಂಧಿ ಕೆಲವೊಂದು ಹಿರಿಯ ನಾಯಕರ ವಿರುದ್ದ ಅಪಸ್ವರ ಎತ್ತಿದ್ದರು. ಪರೋಕ್ಷವಾಗಿ ಬಿಜೆಪಿಗೆ ಸಹಕಾರ ನೀಡುತ್ತಿದ್ದಾರೆಂದು ನೇರವಾಗಿ ಆರೋಪಿಸಿ, ನಂತರ ತನ್ನ ಮಾತನ್ನು ವಾಪಸ್ ಪಡೆದಿದ್ದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರಿ ಬದಲಾವಣೆ
ಎಐಸಿಸಿ ಹೈಕಮಾಂಡ್ ಅಂಗಣದಲ್ಲಿ ಆಪ್ತರಾಗಿದ್ದ ಹಿರಿಯ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಗುಲಾಂ ನಬಿ ಆಜಾದ್ ಅವರಿಗೆ ಉನ್ನತ ಸ್ಥಾನಗಳಿಂದ ಗೇಟ್ ಪಾಸ್ ನೀಡಲಾಗಿದೆ.
ಇದರ ಜೊತೆಗೆ, ಕೆಪಿಸಿಸಿ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಅವರನ್ನೂ ಆ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದು, ವೇಣುಗೋಪಾಲ್ ಗೆ ಹಿನ್ನಡೆ ಅಲ್ಲದಿದ್ದರೂ, ಇವರ ಬಗ್ಗೆ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಒಟ್ಟಾರೆಯಾಗಿ ಉತ್ತಮ ಅಭಿಪ್ರಾಯ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ, ಇದು ಸಿದ್ದರಾಮಯ್ಯನವರಿಗಾದ ಹಿನ್ನಡೆಯೇ ಎನ್ನುವ ಪ್ರಶ್ನೆ ಏಳಲಾರಂಭಿಸಿದೆ.
ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪಣ
ರಾಹುಲ್ ಗಾಂಧಿ ಅವರ ಆಪ್ತರಾಗಿರುವ ಕೆ.ಸಿ.ವೇಣುಗೋಪಾಲ್
ರಾಹುಲ್ ಗಾಂಧಿ ಅವರ ಆಪ್ತರಾಗಿರುವ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲರನ್ನು ಎಲ್ಲ ಪ್ರಮುಖ ಸಮಿತಿಗಳಿಗೆ ನಾಮನಿರ್ದೇಶಿತಗೊಂಡಿದ್ದಾರೆ. ಕರ್ನಾಟಕದ ಉಸ್ತುವಾರಿಯಾಗಿದ್ದ ವೇಣುಗೋಪಾಲ್ ಅವರನ್ನು ಬದಲಿಸಿ, ರಣದೀಪ್ ಸುರ್ಜೇವಾಲ ಅವರಿಗೆ ಆ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ, ರಾಹುಲ್ ತಮ್ಮ ಹಿಡಿತವನ್ನು ಮುಂದುವರಿಸಿದ್ದಾರೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ
ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ, ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆಯಾಗಿತ್ತು. ಆ ವೇಳೆ, ವೇಣುಗೋಪಾಲ್, ಕೆಪಿಸಿಸಿ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅವರ ರಾಜೀನಾಮೆ ಆಂಗೀಕಾರವಾಗಿರಲಿಲ್ಲ. ಉಪಚುನಾವಣೆಗೆ ಟಿಕೆಟ್ ನೀಡಿದ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ವಿರುದ್ದ ಅಪಸ್ವರ ಎತ್ತಿದ್ದರು. ಆ ವೇಳೆ, ಸಿದ್ದರಾಮಯ್ಯ ಪರವಾಗಿ ವೇಣುಗೋಪಾಲ್ ನಿಂತಿದ್ದರು. ಇದು ಹಲವು ಕಾಂಗ್ರೆಸ್ ಮುಖಂಡರ ಸಿಟ್ಟಿಗೆ ಕಾರಣವಾಗಿತ್ತು.
ಸಿದ್ದರಾಮಯ್ಯ ಜೊತೆ ಅಡ್ಜೆಸ್ಟ್ ಮೆಂಟ್ ರಾಜಕಾರಣ
ಪ್ರಮುಖವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದಯನೀಯ ವೈಫಲ್ಯ ಕಂಡ ನಂತರ, ವೇಣುಗೋಪಾಲ್ ತಲೆದಂಡಕ್ಕೆ ಪಕ್ಷದೊಳಗೆ ಭಾರೀ ಕೂಗು ಎದ್ದಿತ್ತು. ಟಿಕೆಟ್ ಹಂಚಿಕೆಯಲ್ಲಿ ಸಿದ್ದರಾಮಯ್ಯನವರ ಕೈಮೇಲಾದ ನಂತರ, ಹಿರಿಯ ಕಾಂಗ್ರೆಸ್ಸಿಗರು, ವೇಣುಗೋಪಾಲ್, ಸಿದ್ದರಾಮಯ್ಯ ಜೊತೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದ್ದರು.
Recommended Video
ಸಿದ್ದರಾಮಯ್ಯ ಹಿಡಿತಕ್ಕೆ ಏಟು ಬೀಳಬಹುದು
ವೇಣುಗೋಪಾಲ್, ಕೆಪಿಸಿಸಿ ಉಸ್ತುವಾರಿಯಾಗಿ ನೇಮಕಗೊಂಡ ನಂತರ, ರಾಜ್ಯ ಕಾಂಗ್ರೆಸ್ ನಲ್ಲಿ ಇದೆ ಎಂದು ಹೇಳಲಾಗುವ ಬಣ ರಾಜಕೀಯದಲ್ಲಿ ಸಿದ್ದರಾಮಯ್ಯನವರ ಪರವಾಗಿಯೇ ಇರುತ್ತಿದ್ದರು ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಈಗ, ಕೆಪಿಸಿಸಿಗೆ ಸುರ್ಜೇವಾಲ ಅವರನ್ನು ನೇಮಿಸಲಾಗಿದೆ. ಇದು ವೇಣುಗೋಪಾಲ್ ಗೆ ಹಿನ್ನಡೆ ಅಲ್ಲದಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಹಿಡಿತಕ್ಕೆ ಏಟು ಬೀಳಬಹುದು ಎಂದೇ ವ್ಯಾಖಾನಿಸಲಾಗುತ್ತಿದೆ.