KRS & Kabini Dam: ತುಂಬುತ್ತಿವೆ ಕಾವೇರಿ ಕೊಳ್ಳದ ಜಲಾಶಯಗಳು: ಇನ್ನೊಂದು ದಿನದಲ್ಲಿ ಕೆಆರ್ಎಸ್ ಭರ್ತಿ
ರಾಜ್ಯದಲ್ಲಿ ಪುನರ್ವಸು ಮಳೆ ಅಬ್ಬರ ಜೋರಾಗಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ರಾಜ್ಯದ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಲವು ಜಲಾಶಯಗಳು ಈಗಾಗಲೇ ಭರ್ತಿಯಾಗುವ ಹಂತ ತಲುಪಿವೆ.
ಕಾವೇರಿ ಕೊಳ್ಳ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಆರಂಭದಲ್ಲೇ ಕರ್ನಾಟಕ ತಮಿಳುನಾಡು ನಡುವಿನ ಜಲವಿವಾದ ಕೊನೆಯಾಗಿದೆ. ಹಾರಂಗಿ ಮತ್ತು ನುಗು ಜಲಾಶಯ ಭರ್ತಿಯಾಗಿದ್ದು, ಕೆಆರ್ ಎಸ್ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.

ಹೇಮಾವತಿ ಮತ್ತು ಹಾರಂಗಿ ಜಲಾಶಯದಿಂದ ಕೂಡ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದು ಎಲ್ಲಾ ನೀರು ಕೆಆರ್ಎಸ್ ಒಡಲು ಸೇರಲಿದೆ. ಕೆಆರ್ಎಸ್ ಭರ್ತಿಯಾಗಲು ಕ್ಷಣಗಣನೆ ಶುರುವಾಗುತ್ತಿದ್ದಂತೆ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಈಗಾಗಲೇ ತಗ್ಗು ಪ್ರದೇಶಗಳಲ್ಲಿ, ಕಾವೇರಿ ನದಿ ದಂಡೆಗಳಲ್ಲಿರುವ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ಕ್ಷಣಗಳಲ್ಲಾದರೂ ಕೆಆರ್ಎಸ್ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಯಲಿದೆ.
ಹೇಮಾವತಿ, ಕಬಿನಿ ಭರ್ತಿ
ಈಗಾಗಲೇ ಹೇಮಾವತಿ ಜಲಾಶಯ ಕೂಡ ಬಹುತೇಕ ಭರ್ತಿಯಾಗಿದೆ. 2922 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಈಗ 2919.03 ಅಡಿ ನೀರು ಭರ್ತಿಯಾಗಿದೆ. 37.10 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು ಈಗ 34.270 ಟಿಎಂಸಿ ನೀರು ಸಂಗ್ರಹವಾಗಿದೆ. 29,800 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 22,750 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದು, 1200 ಕ್ಯೂಸೆಕ್ಸ್ ನೀರು ನಾಲೆಗಳಿಗೆ ಬಿಡಲಾಗಿದೆ. ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, 40000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ.
ಕೆಆರ್ ಎಸ್ ಭರ್ತಿಗೆ ಕ್ಷಣಗಣನೆ
ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕೂಡ ನೀರಿನ ಮಟ್ಟ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿದೆ. ಸದ್ಯ ಜಲಾಶಯಕ್ಕೆ 60,224 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, 121.40 ಅಡಿ ನೀರು ಸಂಗ್ರಹವಾಗಿದೆ. 124.80 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯದಿಂದ 17,795 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.
ಶನಿವಾರ ರಾತ್ರಿಯೇ ಜಲಾಶಯ ಬಹುತೇಕ ಭರ್ತಿಯಾಗಲಿದ್ದು, ಭಾನುವಾರದಿಂದ ಮತ್ತಷ್ಟು ನೀರನ್ನು ಜಲಾಶಯದಿಂದ ಹೊರಗೆ ಬಿಡುವ ಸಾಧ್ಯತೆ ಇದೆ.












Click it and Unblock the Notifications