ಕರ್ನಾಟಕ ಸರ್ಕಾರದಿಂದ ಕಾಶಿಯಾತ್ರೆಯ ಸಬ್ಸಿಡಿ ಹೆಚ್ಚಳ?
ಬೆಂಗಳೂರು, ಜುಲೈ 30; ಕರ್ನಾಟಕ ಸರ್ಕಾರ ಕಾಶಿಯಾತ್ರೆ ಕೈಗೊಳ್ಳುವ ಪ್ರತಿ ಯಾತ್ರಿಕರಿಗೆ 5 ಸಾವಿರ ರೂ. ಸಬ್ಸಿಡಿಯನ್ನು ನೀಡುತ್ತಿದೆ. ಭಾರತ್ ಗೌರವ್ ಕಾಶಿ ದರ್ಶನ ರೈಲಿನ ಮೂಲಕ ರಾಜ್ಯದಿಂದ ಕಾಶಿಯಾತ್ರೆ ಕೈಗೊಳ್ಳಲು ಸಹ ವ್ಯವಸ್ಥೆ ಇದೆ.
ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಶನಿವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು. ಈ ರೈಲಿನ ಮೂಲಕ 450 ಪ್ರಯಾಣಿಕರು ಕಾಶಿಯಾತ್ರೆ ಕೈಗೊಂಡರು. ಮುಂದಿನ ಯಾತ್ರೆ ಆ.12ಕ್ಕೆ ಆರಂಭವಾಗಲಿದೆ.

ಕಾಶಿಗೆ ಭಾರತ್ ಗೌರವ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, "ರಾಜ್ಯ ಸರ್ಕಾರದಿಂದ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು 5 ಸಾವಿರದಿಂದ 7,500ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗತ್ತದೆ" ಎಂದರು.
ಒಬ್ಬರಿಗೆ 20 ಸಾವಿರ ರೂ. ದರವಿದೆ; ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ 8 ದಿನಗಳ ಕಾಶಿ ಪ್ರವಾಸಕ್ಕೆ ಒಬ್ಬರಿಗೆ 20 ಸಾವಿರ ರೂ. ದರವಿದೆ. ಇದರಲ್ಲಿ 5 ಸಾವಿರ ರೂ. ದರವನ್ನು ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಈ ಸಬ್ಸಿಡಿಯನ್ನು ಹೆಚ್ಚಳ ಮಾಡುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಐಆರ್ಸಿಟಿಸಿ ಮತ್ತು ಭಾರತೀಯ ರೈಲ್ವೆಯ ಜೊತೆ ಸೇರಿ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ರೈಲು ಸೇವೆ ಆರಂಭಿಸಿದೆ. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆಯಡಿ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. 4ನೇ ಸುತ್ತಿನ ಯಾತ್ರೆ ಜುಲೈ 29ರಂದು ಆರಂಭವಾಗಿದೆ.
ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, "ಮುಂದಿನ ಯಾತ್ರೆ ಆ. 12ಕ್ಕೆ ಆರಂಭವಾಲಿದೆ. ರಾಮೇಶ್ವರಂ, ಗಯಾ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಊಟ, ವಸತಿ ವ್ಯವಸ್ಥೆ ಜೊತೆಗೆ ಧಾರ್ಮಿಕ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ರಾಜ್ ದರ್ಶನ ಸಿಗಲಿದೆ" ಎಂದು ಸಚಿವರು ಹೇಳಿದರು.
ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ಇದುವರೆಗೂ 3 ಸುತ್ತುಗಳ ಪ್ರಯಾಣ ಪೂರ್ಣಗೊಂಡಿದೆ. ವಿಶೇಷ ರೈಲಿನಲ್ಲಿ ಒಟ್ಟು 1644 ಜನರು ಯಾತ್ರೆ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದಿಂದ ತಲಾ 5 ಸಾವಿರ ರೂ. ಸಹಾಯಧನದಂತೆ 82.20 ಲಕ್ಷ ಸಹಾಯಧನವನ್ನು ವಿತರಣೆ ಮಾಡಲಾಗಿದೆ.
ಈ ರೈಲಿನ ಪ್ರಯಾಣ ಬೋರ್ಡಿಂಗ್, ತಂಗುವಿಕೆ ಮತ್ತು ದರ್ಶನ ಸೌಲಭ್ಯಗಳನ್ನು ಒಳಗೊಂಡ ಪ್ಯಾಕೇಜ್ ಆಗಿದೆ. ಬೆಂಗಳೂರಿನಿಂದ ಹೊರಡುವ ಈ ರೈಲು ಹುಬ್ಬಳ್ಳಿ, ಬೆಳಗಾವಿ ಮೂಲಕವೂ ಸಂಚರಿಸಲಿದ್ದು, ಕಾಶಿಗೆ ತೆರಳಲು ಬಯಸುವ ಉತ್ತರ ಕರ್ನಾಟಕದವರಿಗೂ ಅನುಕೂಲವಾಗಿದೆ.
ಈ ರೈಲು ಪ್ರಯಾಗ್ರಾಜ್ ಮತ್ತು ಅಯೋಧ್ಯೆ ಮೂಲಕವೂ ಹೋಗುತ್ತದೆ. ಪ್ರವಾಸದ ವೆಚ್ಚ ರೂ. ಇದರಲ್ಲಿ 20,000 ರೂ. ಇದರಲ್ಲಿ 5000 ರೂ. ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಕಾಶಿಯ ಹೊರತಾಗಿ, ಯಾತ್ರಿಕರು ಅಯೋಧ್ಯೆ ಮತ್ತು ಪ್ರಯಾಗರಾಜ್ಗೆ ಭೇಟಿ ನೀಡುತ್ತಾರೆ.
ಭಾರತ್ ಗೌರವ್ ರೈಲುಗಳ ಮೂಲಕ (ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್ ರೈಲುಗಳು) ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಭಾರತ ಮತ್ತು ಪ್ರಪಂಚದ ಜನರಿಗೆ ಪ್ರದರ್ಶಿಸಲು ಭಾರತ್ ಗೌರವ್ ರೈಲನ್ನು ಓಡಿಸಲಾಗುತ್ತಿದೆ.












Click it and Unblock the Notifications