'ದಿವ್ಯ ಕಾಶಿ ಭವ್ಯ ಕಾಶಿ' ಉದ್ಘಾಟನೆ: ರಾಜ್ಯದಲ್ಲೂ ಲೈವ್ ವೀಕ್ಷಣೆ
ಬೆಂಗಳೂರು, ಡಿ.14: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಕೈಗೊಂಡ ಕಾಶಿ ವಿಶ್ವನಾಥ ಕಾರಿಡಾರ್ ಪ್ರಾಜೆಕ್ಟ್ "ದಿವ್ಯ ಕಾಶಿ ಭವ್ಯ ಕಾಶಿ' ಸೋಮವಾರ (ಡಿಸೆಂಬರ್ 13) ಉದ್ಘಾಟನೆಗೊಳ್ಳಲಿದೆ.
ಸಮಾರಂಭವನ್ನು ವೀಕ್ಷಿಸಲು ದೇಶದಾದ್ಯಂತ ಸುಮಾರು 51,000 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಎಲ್ಇಡಿ ಪರದೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ "ದಿವ್ಯ ಕಾಶಿ, ಭವ್ಯ ಕಾಶಿ" ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಇದಲ್ಲದೆ, ದೊಡ್ಡ ಪರದೆಗಳು ಇರುತ್ತವೆ. ಇದಲ್ಲದೆ ಪ್ರಧಾನಿಯವರ ಕಾರ್ಯಕ್ರಮವನ್ನು ಎಲ್ಲಾ ಪ್ರಮುಖ ದೇವಾಲಯಗಳು, ಮಠಗಳು ಮತ್ತು ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ವೀಕ್ಷಿಸಲು ಅವಕಾಶವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
"ದಿವ್ಯ ಕಾಶಿ ಭವ್ಯ ಕಾಶಿ" ಕಾರ್ಯಕ್ರಮದ ಪ್ರಯುಕ್ತ ನಗರದ ಅಲಸೂರಿನ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 10.30 ಗಂಟೆಗೆ ದೇವಾಲಯದಲ್ಲಿ ಪೂಜೆ ಮತ್ತು ಸ್ವಾಮೀಜಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ನೇರಪ್ರಸಾರ ವೀಕ್ಷಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ.
ಕಾಶಿ ವಿಶ್ವನಾಥನ ಕ್ಷೇತ್ರದ ಪುನರುಜ್ಜೀವನ
ಕಾಶಿ ಅತ್ಯಂತ ಪ್ರಾಚೀನ- ಪೌರಾಣಿಕ ನಗರವಾಗಿದ್ದು, ಇದು ಗಂಗಾ ಮಾತೆಯ ದಡದಲ್ಲಿದೆ. ಭಗವಾನ್ ಶಿವನ ಶಿರದಿಂದ ಹುಟ್ಟಿಕೊಂಡಿದೆ. ಇದು ಪವಿತ್ರ 'ಸಪ್ತಪುರಿ'ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಮಹಾನ್ ನಗರದ ಕುರಿತು ಋಗ್ವೇದ, ಸ್ಕಂದ ಪುರಾಣ, ರಾಮಾಯಣ ಮತ್ತು ಮಹಾಭಾರತ ಮತ್ತು ಮತ್ಸ್ಯ ಪುರಾಣ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಉಲ್ಲೇಖ ಕಂಡುಬರುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತದ ಶ್ರೇಷ್ಠ ಪ್ರಾಚೀನ ಸಂಸ್ಕೃತಿಯನ್ನು ಮರುಸ್ಥಾಪಿಸುವ ಕನಸು ಕಂಡವರು. ಅವರು "ದಿವ್ಯ ಕಾಶಿ, ಭವ್ಯ ಕಾಶಿ"ಯ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್.ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಲೈವ್ ವೀಕ್ಷಣೆ:
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಬೃಹತ್ ಮತ್ತು ಅದ್ಧೂರಿ ಕಾರ್ಯಕ್ರಮ ಇರಲಿದೆ. ದೇವಸ್ಥಾನ, ಮಠ, ಆಶ್ರಮ ಅಥವಾ ಇತರ ಧಾರ್ಮಿಕ ಸ್ಥಳದಲ್ಲಿ ಪಕ್ಷದ ಜಿಲ್ಲಾ ಘಟಕವು ಇದನ್ನು ಆಯೋಜಿಸಲಿದೆ. ಇದರಲ್ಲಿ ಸಂತರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ಮಾತ್ರವಲ್ಲದೆ, ಪಕ್ಷದ ಹಾಗೂ ಪಕ್ಷದ ಜನ ಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ 'ದಿವ್ಯ ಕಾಶಿಭವ್ಯ ಕಾಶಿ' ಕುರಿತು ಮಾಹಿತಿಯನ್ನೂ ನೀಡಲಾಗುವುದು. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಧಾರ್ಮಿಕ ಮುಖಂಡರು ಮತ್ತು ಸಂತರನ್ನು ಪಕ್ಷದಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.
ತಿಂಗಳು ಪೂರ್ತಿ ಕಾರ್ಯಕ್ರಮ:
ಈ ಐತಿಹಾಸಿಕ ಮತ್ತು ಅಭೂತಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಪಕ್ಷದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾರೆ. ಈ ಕಾರ್ಯಕ್ರಮಗಳು ಒಂದು ತಿಂಗಳ ಕಾಲ ದೇಶದಾದ್ಯಂತ ನಡೆಯಲಿವೆ. ಅವು ಡಿ.13 ರಿಂದ ಪ್ರಾರಂಭವಾಗಿ ಮಕರ ಸಂಕ್ರಾಂತಿ ಅಂದರೆ 2022ರ ಜನವರಿ 14ವರೆಗೆ ಮುಂದುವರಿಯುತ್ತದೆ. ಪಕ್ಷದ ಎಲ್ಲಾ ಜನ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ ಎಂದು ರವಿಕುಮಾರ್ ವಿವರಿಸಿದರು.
ಸ್ವಾಮಿ ವಿವೇಕಾನಂದರ ಜನ್ಮದಿನದ ವಾರ್ಷಿಕೋತ್ಸವದ ಅಂಗವಾಗಿ 2022 ರ ಜನವರಿ 12ರಂದು ಕಾಶಿಯಲ್ಲಿ ಯುವ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ ಮತ್ತು ರಾಜ್ಯ ಮಾಧ್ಯಮ ಸಹ ಸಂಚಾಲಕರಾದ ಬಿ.ಎನ್. ರಾಘವೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.