ಕಾವೇರಿ ವಿವಾದ : ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಸೆಪ್ಟೆಂಬರ್ 09 : ಕೈಕೊಟ್ಟಿರುವ ಮುಂಗಾರು ಮಳೆ, ಕುಸಿದುಬಿದ್ದಿರುವ ಜಲಾಶಯಗಳ ನೀರಿನ ಮಟ್ಟ, ತಮಿಳುನಾಡಿನ ತೀರದ ಅತಿಯಾದ ನೀರಿನ ದಾಹ, ಸುಪ್ರೀಂ ಕೋರ್ಟಿನ ವ್ಯತಿರಿಕ್ತ ಆದೇಶ, ಕರ್ನಾಟಕದಲ್ಲಿ ಭುಗಿಲೆದ್ದ ಪ್ರತಿಭಟನೆಯಿಂದ ರೋಸತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾವೇರಿ ವಿವಾದ ಸಮಸ್ಯೆ ಬಗೆಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
ಈ ಪತ್ರದ ಸಾರಾಂಶ ಕೆಳಗಿನಂತಿದೆ...
ಗೌರವಾನ್ವಿತ ಸರ್,
ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡುತ್ತಿರುವುದನ್ನು ಪ್ರತಿರೋಧಿಸಿ ಕಾವೇರಿ ಕೊಳ್ಳದಲ್ಲಿ ನಡೆಸಲಾಗುತ್ತಿರುವ ಹೋರಾಟದಿಂದ ರಾಜ್ಯದಲ್ಲಿ ಉದ್ಭವವಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ನೀರು ಬಿಡುವುದನ್ನು ಇದೇ ರೀತಿ ಮುಂದುವರಿಸಿದರೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಮಾತ್ರವಲ್ಲ, ಕಾವೇರಿ ಕಣಿವೆಯ ರೈತರ ಬೆಳೆಗೆ ನೀರನ್ನು ಸಂಪೂರ್ಣವಾಗಿ ನಿರಾಕರಿಸಿದಂತಾಗುತ್ತದೆ.
ತಮಿಳುನಾಡಿನಲ್ಲಿರುವ ಮೆಟ್ಟೂರು ಡ್ಯಾಂ ಮತ್ತು ಸಾಕಷ್ಟು ಸುರಿದಿರುವ ಈಶಾನ್ಯ ಮುಂಗಾರು ಮಳೆ ತಮಿಳುನಾಡಿನ ರೈತರು ಬೆಳೆಯುತ್ತಿರುವ ಸಾಂಬಾ ಭತ್ತದ ಬೆಳೆಗೆ ಸಾಕಾಗುವಷ್ಟಾಗಿದೆ.
ಸೆಪ್ಟೆಂಬರ್ 6ರಂದು ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕರ ಅಭಿಪ್ರಾಯ ಏನಾಗಿತ್ತೆಂದರೆ, ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಬಾರದು ಎಂಬುದಾಗಿತ್ತು. ಆದರೆ, ರಾಜ್ಯದ ಸಾಂವಿಧಾನಿಕ ನಾಯಕನಾಗಿರುವ ನಾನು ಸುಪ್ರೀಂ ಕೋರ್ಟ್ ಆದೇಶಕ್ಕೆ ಮಾನ್ಯತೆ ನೀಡಿ, ಆದೇಶದಂತೆ ನೀರು ಬಿಟ್ಟಿದ್ದರಿಂದ ರಾಜ್ಯದಲ್ಲಿ ಅಶಾಂತತೆ ಸ್ಥಿತಿ ತಲೆದೋರಿದೆ.
ಇದೇ ಸ್ಥಿತಿ ಮುಂದುವರಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಮಾಹಿತಿ ತಂತ್ರಜ್ಞಾನ ಮತ್ತು ವಿದೇಶ ವಿನಿಮಯದಿಂದ ದೇಶಕ್ಕೆ ಬರುತ್ತಿರುವ ಅಗಾಧ ಆದಾಯವನ್ನು ಕುಂಠಿತಗೊಳಿಸಲಿದೆ. ಅಲ್ಲದೆ, ಜನಸಾಮಾನ್ಯರ ದೈನಂದಿನ ಜೀವನದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.
ಈ ಕಾರಣದಿಂದಾಗಿ, ದೇಶದ ಪ್ರಧಾನಿಯಾಗಿರುವ ಮತ್ತು ಇಡೀ ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿರುವ ತಾವು, ಈಗ ತಲೆದೋರಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಕೋರುತ್ತೇನೆ.
1995ರ ಡಿಸೆಂಬರ್ ನಲ್ಲಿ ಇಂಥದೇ (ನೀರಿನ ಕೊರತೆ) ಪರಿಸ್ಥಿತಿ ತಲೆದೋರಿದಾಗ, ಡಿಸೆಂಬರ್ 28ರಂದು ಸರ್ವೋಚ್ಚ ನ್ಯಾಯಾಲಯ, ಈ ಸಮಸ್ಯೆಯನ್ನು ಪ್ರಧಾನಿಯವರು ಮಧ್ಯ ಪ್ರವೇಶಿಸಿ ಬಗೆಹರಿಸಬೇಕೆಂದು ಮನವಿ ಮಾಡಿತ್ತು ಮತ್ತು ಪ್ರಧಾನಿ ಮಧ್ಯ ಪ್ರವೇಶಿಸಿ ಎರಡೂ ರಾಜ್ಯಗಳಿಗೆ ಒಪ್ಪುವಂತೆ ಸಮಸ್ಯೆ ಬಗೆಹರಿಸಿದ್ದರು.
ತಾವು ಈಕೂಡಲೆ ದೂರವಾಣಿ ಮುಖಾಂತರವಾಗಲಿ, ಫ್ಯಾಕ್ಸ್ ಅಥವಾ ಈಮೇಲ್ ಮುಖಾಂತರವಾಗಲಿ ತಮ್ಮ ಪ್ರತಿಕ್ರಿಯೆ ನೀಡಬೇಕೆಂದು ಕೋರುತ್ತೇನೆ.
ಇಂತಿ ತಮ್ಮ ವಿಶ್ವಾಸಿ,
ಸಿದ್ದರಾಮಯ್ಯ