ಕೋಲಾರ ಜಿಲ್ಲೆಯ ಆಂತರಿಕ ಸಮೀಕ್ಷೆ ಕಂಡು ವಿಚಲಿತರಾದ ಸಿದ್ದರಾಮಯ್ಯ? ಏನಿದು ಅಂಕಿಅಂಶ, ಮಾಹಿತಿ, ವರದಿ
ಕುರುಬರು ಹಾಗೂ ಒಕ್ಕಲಿಗರು ಹೆಚ್ಚಿರುವ ಕೋಲಾರದಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸುಲಭವೆಂದು ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆ. ಆದರೆ, ಅವರು ಜಿಲ್ಲೆಯ ಆಂತರಿಕ ಸಮೀಕ್ಷೆಯನ್ನು ನೋಡಿ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಅಂಕಿಅಂಶ, ವರದಿ ತಿಳಿಯಿರಿ
ಬೆಂಗಳೂರು, ಜನವರಿ 28: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇವೆ. ಕೋಲಾರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕೋಲಾರದಲ್ಲಿ 2.3 ಲಕ್ಷ ಮತದಾರರಲ್ಲಿ ಶೇ 70 ಅಹಿಂದ (ಅಲ್ಪಸಂಖ್ಯಾತರು, ಇತರ ಹಿಂದುಳಿದ ವರ್ಗಗಳು ಮತ್ತು ದಲಿತ) ವರ್ಗಕ್ಕೆ ಸೇರಿದವರು. ಸುಮಾರು 30,000 ಕುರುಬ ಮತದಾರರು (ಒಬಿಸಿ) ಇದ್ದಾರೆ. ಕುರುಬರು ಹಾಗೂ ಒಕ್ಕಲಿಗರು ಹೆಚ್ಚಿರುವ ಕೋಲಾರದಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸುಲಭವೆಂದು ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆ. ಆದರೆ, ಅವರು ಜಿಲ್ಲೆಯ ಆಂತರಿಕ ಸಮೀಕ್ಷೆಯನ್ನು ನೋಡಿ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಕಾರಣ, ಕೋಲಾರ ಜಿಲ್ಲೆಯಲ್ಲಿನ ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ಕೋಲಾರ ಗೋಲ್ಡ್ ಫಿಲ್ಡ್ ಶಾಸಕಿ ರೂಪಾಕಲಾ ಅವರು ಗೆಲುವು ಸುಲಭವಾಗಹುದು. ಆದರೆ, ಇನ್ನುಳಿದು ಐದು ಕ್ಷೇತ್ರಗಳ ಸಮೀಕ್ಷೆ ಕಾಂಗ್ರೆಸ್ ಗೆಲುವಿನ ಪರ ಇಲ್ಲವೆಂಬ ಮಾಹಿತಿ ಬಹಿರಂಗವಾಗಿದೆ.

ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವು ಕಷ್ಟಕರ?
ಕೋಲಾರದಲ್ಲಿ ಒಕ್ಕಲಿಗರು ಅಧಿಕವಾಗಿದ್ದಾರೆ. ಅವರು ಜೆಡಿಎಸ್ ಪರ ಮತ ಚಲಾಯಿಸುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಬಿಜೆಪಿಯಿಂದ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ವರ್ತೂರು ಪ್ರಕಾಶ್ ಕೋಲಾರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅವರು ಕುರುಬ ಸಮೂದಾಯಕ್ಕೆ ಸೇರಿದವರು. ಹೀಗಾಗಿ, ಸಿದ್ದರಾಮಯ್ಯ ಗೆಲುವು ಕಷ್ಟಕರವಾಗಲಿದೆ ಎಂದು ಆಂತರಿಕ ಸಮೀಕ್ಷೆ ಹೇಳಿದೆ. ಇತ್ತ ಬಿಜೆಪಿ ನಾಯಕರು ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಬಹುದೆಂಬುದನ್ನು ಕಾದು ನೋಡಬೇಕಿದೆ.

ಮುಳುಬಾಗಿಲು ಬಿಡುವ ಸಿದ್ಧತೆಯಲ್ಲಿ ಎಚ್ ನಾಗೇಶ್
ಇನ್ನು ಮುಳುಬಾಗಿಲಿನಲ್ಲಿ ಪಕ್ಷೇತರ ಶಾಸಕರಾಗಿದ್ದ ಎಚ್ ನಾಗೇಶ್ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಅವರು ಈ ಹಿಂದೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಈಗ ಕಾಂಗ್ರೆಸ್ ಸೇರಿದ್ದಾರೆ. ಅವರು ಬೆಂಗಳೂರಿನ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹೀಗಾಗಿ, ಮುಳುಬಾಗಿಲು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ. ಈ ಬೆಳವಣಿಗೆ ಮುಳುಬಾಗಿಲಿನಲ್ಲಿ ಕಾಂಗ್ರೆಸ್ಗೆ ಮುಳುವಾಗುವ ಸಾಧ್ಯತೆಗಳಿವೆ.

ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ
ಇನ್ನು ಶ್ರೀನಿವಾಸಪುರದಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ನಿಂದ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಅವರು ಸಿದ್ದರಾಮಯ್ಯನವರ ಪರಮಾಪ್ತರು. ಕೋಲಾರದಲ್ಲಿ ಸ್ಪರ್ಧೆಗೆ ಸೂಚಿಸಿದವರಲ್ಲಿ ಪ್ರಮುಖರು. ಆದರೆ, ರಮೇಶ್ ಕುಮಾರ್ ಅವರಿಗೆ ಪಕ್ಷದಲ್ಲೇ ಆಂತರಿಕ ವಿರೋಧ ಎದುರಾಗಿದೆ. ಮಾಜಿ ಕೇಂದ್ರ ಸಚಿವ ಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ನಡುವೆ ಇರುವ ಅಸಮಾಧಾನಗಳು ಬಹಿರಂಗಗೊಂಡಿವೆ. ಕಳೆದ ಬಾರಿ ಹತ್ತು ಸಾವಿರ ವೋಟುಗಳಿಂದ ಜಯಗಳಿಸಿದ್ದ ರಮೇಶ್ ಕುಮಾರ್ ಅವರಿಗೆ ಈ ಬಾರಿಯು ವಿಧಾನಸಭೆ ಚುನಾವಣೆ ಸುಲಭದ ಮಾತಲ್ಲವೆಂಬ ವಿಚಾರಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ.

ಬಂಗಾರಪೇಟೆ, ಚಿಂತಾಮಣಿ ಕಾಂಗ್ರೆಸ್ಗೆ ಸುಲಭವಲ್ಲ
ಇನ್ನು ಬಂಗಾರಪೇಟೆ ಹಾಗೂ ಚಿಂತಾಮಣಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸುಲಭವಾಗಿಲ್ಲ. ಚಿಂತಾಮಣಿಯಲ್ಲಿ ಪ್ರಸ್ತುತ ಜೆಡಿಎಸ್ನ ಜಿ.ಕೆ.ಕೃಷ್ಣಾರೆಡ್ಡಿ ಅವರು ಶಾಸಕರಾಗಿದ್ದಾರೆ. ಅವರ ಕಾಂಗ್ರೆಸ್ಗೆ ಮತ್ತೊಮ್ಮೆ ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಬಂಗಾರಪೇಟೆಯಲ್ಲಿ ಕಾಂಗ್ರೆಸ್ನ ಎಸ್.ಎನ್. ನಾರಾಯಣಸ್ವಾಮಿ ಅವರು ಹಾಲಿ ಶಾಸಕರಾಗಿದ್ದಾರೆ ಇಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ.

ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಸಿಗದ ಸ್ಪಂದನೆ
ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಕೋಲಾರ ಜಿಲ್ಲೆಯ ಚಿತ್ರಣ ಕಂಡು ಕಾಂಗ್ರೆಸ್ ವಿಚಲಿತವಾಗಿದೆ ಎನ್ನಲಾಗಿದೆ. ಕಳೆದ ವಾರ ಕೋಲಾರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮಕ್ಕೂ ಅಷ್ಟೇನು ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಇಷ್ಟೆಲ್ಲ ಸಂಕಷ್ಟಗಳನ್ನು ಎದುರಿಸಿ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ವಿಜಯಪತಾಕೆ ಬಾರಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications