'ಅನ್ನಭಾಗ್ಯ'ದಲ್ಲಿ ಇನ್ನು ಮುಂದೆ ರಾಗಿ ವಿತರಣೆ
ಬೆಂಗಳೂರು, ಜನವರಿ 8: ಕರ್ನಾಟಕ ಸರಕಾರ ಬರೋಬ್ಬರಿ ಮೂರು ವರ್ಷಗಳ ನಂತರ ಪಡಿತರ ವ್ಯವಸ್ಥೆಯಲ್ಲಿ ರಾಗಿ ವಿತರಣೆಗೆ ಮುಂದಾಗಿದೆ. ರಾಗಿ ಬೆಳೆಗೆ ಪ್ರೋತ್ಸಾಹ ಹಾಗೂ ರಾಗಿ ಸೇವನೆಯನ್ನು ಉತ್ತೇಜಿಸಲು ಈ ನಿರ್ಧಾರಕ್ಕೆ ಮುಂದಾಗಿದೆ.
ಅಪೌಷ್ಠಿಕತೆಯ ನಿವಾರಣೆ, ಸುಸ್ಥಿರ ಕೃಷಿಗೆ ಪ್ರೋತ್ಸಾಹ ಮತ್ತು ರೈತರಿಗೆ ನಿಯಮಿತ ಆದಾಯ ದೊರೆಯುಂತೆ ಮಾಡುವ ಪ್ರಯತ್ನದ ಭಾಗವಾಗಿ ರಾಗಿ ವಿತರಣೆಗೆ ಸರಕಾರ ಮನಸ್ಸು ಮಾಡಿದೆ.
ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ರಾಗಿ ವಿತರಿಸುವುದರಿಂದ ದಕ್ಷಿಣ ಕರ್ನಾಟಕದ ಜನರಿಗೆ ಭಾರೀ ಅನುಕೂಲವಾಗಲಿದೆ.

"ನಾವು ರಾಗಿ ಸಂಗ್ರಹಣೆಗೆ ಮುಂದಾಗುವುದಾದರೆ ಕೇಂದ್ರ ಸರಕಾರಕ್ಕೆ ಅನುಮತಿ ನೀಡಬೇಕಾಗುತ್ತದೆ. ಇದಕ್ಕೆ ಅನುಮತಿ ಪಡೆಯಲು ಕನಿಷ್ಠ 1 ತಿಂಗಳು ಬೇಕು. ಹೀಗಾಗಿ ಮಾರ್ಚ್ ನಂತರ ನಾವು ಇದನ್ನು ಪಡಿತರ ವ್ಯವಸ್ಥೆಗೆ ಸೇರಿಸಬಹುದು," ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇದರ ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಜೋಳವನ್ನೂ ಪಡಿತರ ವ್ಯವಸ್ಥೆಗೆ ಸೇರಿಸಲು ಸರಕಾರ ಚಿಂತನೆ ನಡೆಸುತ್ತಿದೆ.
ಸದ್ಯ ಕ್ಷಿಂಟಾಲ್ ಗೆ 2,300 ರೂಪಾಯಿ ದರದಲ್ಲಿ ರಾಗಿ ಖರೀದಿಗೆ ಸರಕಾರ ಮುಂದಾಗಿದೆ. ಮಾರುಕಟ್ಟೆ ದರ ರಾಗಿಗೆ ಕ್ವಿಂಟಾಲ್ ಒಂದಕ್ಕೆ 1,600 ರೂಪಾಯಿ ಇದ್ದು, 400 ರೂಪಾಯಿ ಪ್ರೋತ್ಸಾಹ ಧನ ಸೇರಿ 2,300 ರೂಪಾಯಿಗೆ ರಾಗಿ ಖರೀದಿಸಲಿದೆ. ರಾಗಿ ಬೆಳೆಗೆ ಉತ್ತೇಜನ ನೀಡಬೇಕು ಎಂಬ ಕಾರಣಕ್ಕೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ರಾಗಿ ಖರೀದಿಸಲಿದೆ.
ದಕ್ಷಿಣದ ಜಿಲ್ಲೆಗಳ ರೈತರು ಸರಕಾರದ ಸತತ ಪ್ರಯತ್ನಗಳ ನಂತರವೂ ಹೆಚ್ಚಿನ ನೀರು ಬಳಸಬೇಕಾದ ಭತ್ತ ಮತ್ತು ಕಬ್ಬು ಬೆಳೆಯಿಂದ ಬೇರೆ ಬೆಳೆಗಳತ್ತ ಮನಸ್ಸು ಮಾಡುತ್ತಿಲ್ಲ. ಈ ಕಾರಣಕ್ಕೆ ರಾಗಿಗೆ ಪ್ರೋತ್ಸಾಹ ನೀಡಿ ಆ ಮೂಲಕ ರೈತರು ರಾಗಿ ಬೆಳೆಯುವಂತೆ ಪರೋಕ್ಷ ಒತ್ತಡ ಹೇರಲು ಸರಕಾರ ಮುಂದಾಗಿದೆ.











Click it and Unblock the Notifications