ಮತದಾನ; ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ
ಬೆಂಗಳೂರು, ಮೇ 09; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10ರ ಬುಧವಾರ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 5,30,85,566 ಜನರು ಈ ಬಾರಿ ಮತದಾನ ಮಾಡಲು ಅರ್ಹರು.
ರಾಜ್ಯ ಚುನಾವಣಾ ಆಯೋಗ ಮತದಾನಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಮಾಡಿದವರ ಎಡಗೈ ತೋರು ಬೆರಳಿಗೆ (left hand Fore finger) ಅಳಿಸಲಾಗದ ಶಾಯಿಯ ಗುರುತು ಹಾಕಲಾಗುತ್ತದೆ.

ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಮೈಸೂರಿನಿಂದ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗುತ್ತದೆ. 2023ರ ಕರ್ನಾಟಕದ ಚುನಾವಣೆಗೆ ಸಹ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಶಾಯಿ ಪೂರೈಕೆ ಮಾಡಿದೆ. ಮಾಸ್ಟರಿಂಗ್ ಕಾರ್ಯ ಪೂರ್ಣಗೊಂಡ ಮೇಲೆ ಮತಗಟ್ಟೆ ಅಧಿಕಾರಿಗಳಿಗೆ ಶಾಯಿಯನ್ನು ನೀಡಲಾಗುತ್ತದೆ.
ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರಸ್ವಾಮಿ ಈ ಕುರಿರಿತು ಮಾಹಿತಿ ನೀಡಿದ್ದಾರೆ. "1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಸಂಸ್ಥೆ ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದ ಬೇಡಿಕೆಯಂತೆ ಈ ಬಾರಿಯೂ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

ಮತಗಟ್ಟೆಗಳ ಮಾಹಿತಿ; ಮತದಾನಕ್ಕಾಗಿ ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. 58,545 ಮತಗಟ್ಟೆಗಳನ್ನು ರಾಜ್ಯಾದ್ಯಂತ ಸ್ಥಾಪನೆ ಮಾಡಲಾಗಿದೆ. ಎಲ್ಲ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.
ಈ ಬಾರಿಯ ಚುನಾವಣೆಯಲ್ಲಿ 2,66,82,156 ಪುರುಷ, 2,63,98,483 ಮಹಿಳೆ, 4,927 ಇತರ ಮತದಾರರು ಸೇರಿದಂತೆ ಒಟ್ಟು 5,30,85,566 ಮತದಾರರು ಈ ಬಾರಿ ಹಕ್ಕು ಚಲಾವಣೆ ಮಾಡಲು ಅವಕಾಶವಿದೆ.
ರಾಜ್ಯದಲ್ಲಿ ಈ ಬಾರಿ 11,71,558 ಯುವ ಮತದಾರರು ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ. ಇವರಲ್ಲಿ ಪುರುಷರು 6,45, 140. ಮಹಿಳೆಯರು 5,26,237 ಇತರರು 181 ಮತದಾರರು.
ಆಯಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರನ ಹೆಸರು, ಕ್ರಮಸಂಖ್ಯೆ, ಮತಗಟ್ಟೆ ವಿವರ ಇರುವ ವೋಟರ್ ಸ್ಲೀಪ್ (Voter slip)ಗಳನ್ನು ಮತ್ತು ಮತದಾನದ ಸ್ಥಳ ಹಾಗೂ ಇತರ ವಿವರ ಇರುವ ವೋಟರ್ ಗೈಡ್ (Voter Guide)ಗಳನ್ನು ಮತದಾರರಿಗೆ ವಿತರಣೆ ಮಾಡಲಾಗಿದೆ.
ಶಾಂತಿಯುತ ಮತದಾನಕ್ಕಾಗಿ ಮೇ 8ರ ಸಂಜೆ 5 ಗಂಟೆಯಿಂದ ಮೇ 11 ರ ಬೆಳಗ್ಗೆ 6 ಗಂಟೆಯವರೆಗೆ ಶುಷ್ಕ ದಿನ ಎಂದು ಆದೇಶವನ್ನು ಹೊರಡಿಸಲಾಗಿದೆ. ಶುಷ್ಕ ದಿನಗಳಂದು ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ತಯಾರಿಕೆ, ಬಾರ್, ದೇಸಿಯ ಸರಾಯಿ ತಯಾರಿಕಾ ಘಟಕಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.
ಮತದಾನಕ್ಕೆ ಸಹಾಯವಾಗುವಂತೆ ಮೇ 8ರ ಸಾಯಂಕಾಲ 6 ಗಂಟೆಯಿಂದ ಮೇ 10ರ ಸಾಯಂಕಾಲ 6 ಗಂಟೆಯವರೆಗೆ ಸಿ. ಆರ್. ಪಿ. ಸಿ. 1973ರ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಆದೇಶಿಸಲಾಗಿದೆ.
ಮತದಾನದ ಹಿನ್ನಲೆಯಲ್ಲಿ ಮೇ 10ರ ಬುಧವಾರದಂದು ಆಯಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಖಾಸಗಿ ಸಂಸ್ಥೆಗಳಿಗೆ ತುರ್ತು ಸೇವೆಗಳನ್ನು ಹೊರತುಪಡಿಸಿ ಸರ್ಕಾರವು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿದೆ.












Click it and Unblock the Notifications