ಕಡ್ಡಾಯ ಕನ್ನಡ ಕಲಿಕೆ ವಿರುದ್ಧ CBSE ಆದೇಶ: ಎನ್ಒಸಿ ನಿಯಮ ಕಠಿಣಗೊಳಿಸಲು ಆಗ್ರಹ
ಬೆಂಗಳೂರು: ಕಡ್ಡಾಯ ಕನ್ನಡ ಕಲಿಕೆಯನ್ನು ಬದಿಗಿಟ್ಟು ಮಕ್ಕಳ ಕನ್ನಡ ಕಲಿಕೆಗೆ ಅಡ್ಡಿಗಾಲು ಹಾಕುವಂತಹ ಆದೇಶ ನೀಡಿದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (CBSE) ಸರ್ಕಾರ ನೀಡುವ 'ನಿರಾಕ್ಷೇಪಣಾ ಪತ್ರ'ದ ನಿಯಮಗಳಲ್ಲಿ ಪರಿಷ್ಕರಣೆ ಮಾಡಬೇಕು. ಹೀಗೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಮುಖೇನ ಅವರು ತಿಳಿಸಿರುವ ಅವರು, ಇತ್ತೀಚೆಗೆ ಸಿಬಿಎಸ್ ಹೊರಡಿಸಿದ ಶಿಕ್ಷಣದಲ್ಲಿ ಕನ್ನಡ ಭಾಷೆ ಬದಿಗಡುವ ಆದೇಶವನ್ನು ಖಂಡಿಸಿದರು. ರಾಜ್ಯದಲ್ಲಿ 2015 ರಿಂದಲೂ ಜಾರಿಯಲ್ಲಿರುವ ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ವಿರುದ್ಧವಾಗುವ ರೀತಿಯಲ್ಲಿ ಸಿಬಿಎಸ್ಇ ಮಂಡಳಿಯು ಇದೇ ಮೇ 15 ರಂದು ತನ್ನ ಅಧೀನದ ಎಲ್ಲ ಶಾಲಾ ಮುಖ್ಯಸ್ಥರುಗಳಿಗೆ ಸೂಚನೆ ನೀಡಿರುವ ಕ್ರಮ ಆಕ್ಷೇಪಾರ್ಹವಾಗಿದೆ.

ಕೂಡಲೇ ಮಂಡಳಿ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆದು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವು ಒತ್ತಾಯಿಸಬೇಕು. ಮುಖ್ಯವಾಗಿ ನಿರಾಕ್ಷೇಪಣಾ ಪತ್ರ ನೀಡಿಕೆ (ಎನ್.ಒ.ಸಿ.) ನಿಯಮಗಳ ಸಮಗ್ರ ಪರಿಷ್ಕರಣೆಗೆ ಮುಂದಾಗಬೇಕೆಂದು ಎಂದು ಅವರು ಒತ್ತಾಯಿಸಿದ್ದಾರೆ.
ಭಾಷಾ ಕಾನೂನಿನ ವಿರುದ್ಧದ ಆದೇಶ
ಕನ್ನಡ ಭಾಷೆ ಕಲಿಕೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವಾಗ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೇ ತೆಗೆದುಕೊಳ್ಳದೇ ಸಿಬಿಎಸ್ಇ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ. ರಾಜ್ಯವು ಜಾರಿಗೊಳಿಸಿರುವ ಭಾಷಾ ಕಾನೂನುಗಳನ್ನು ದುರ್ಬಲಗೊಳಿಸುವ ಅಥವಾ ಅದರ ವಿರುದ್ಧದ ಆದೇಶ ಇದಾಗಿದ್ದು, ಸಿಬಿಎಸ್ಇಯ ಇಂತಹ ಈ ಕ್ರಮ ಸ್ವೀಕಾರಾರ್ಹವಲ್ಲ ಎಂದು ವಿವರಿಸಿದರು.
ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಕಡ್ಡಾಯ
ಕನ್ನಡ ಭಾಷಾ ಕಲಿಕಾ ಕಾಯ್ದೆಯು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಲಿಕೆ ಕಡ್ಡಾಯಗೊಳಿಸಿದೆ. ಕನ್ನಡವನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಪ್ರತಿ ವಿದ್ಯಾರ್ಥಿಗೆ ಇದೆ. ಈ ನೆಲದಲ್ಲಿ ಕನ್ನಡ ಉಳಿಯುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದನ್ನು ಅವರು ನೆನಪಿಸಿದರು.
ಕರ್ನಾಟಕದಲ್ಲಿ ಸಿಬಿಎಸ್ಇ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳಿಗೆ ಒಮ್ಮೆ ನಿರಾಕ್ಷೇಪಣಾ ಪತ್ರವನ್ನು ನೀಡಿದ ಬಳಿಕ ಈ ಶಾಲೆಗಳ ಮೇಲೆ ಶಿಕ್ಷಣ ಇಲಾಖೆಯ ನಿಯಂತ್ರಣ ಸೀಮಿತವಾಗುತ್ತದೆ. ಆದ್ದರಿಂದ ಈ ವಿಚಾರವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದರು.
ಎನ್ಒಸಿಯಲ್ಲಿ ಕನ್ನಡಪರ ಕಠಿಣ ನಿಯಮ ತನ್ನಿ
ರಾಜ್ಯ ಸರ್ಕಾರವು ಸಿಬಿಎಸ್ಇ ಶಾಲೆಗಳಿಗೆ ನೀಡುವ ಎನ್.ಒ.ಸಿ. ನಿಯಮಾವಳಿಗಳನ್ನು ಕನ್ನಡ ಪರವಾಗಿ ಮತ್ತಷ್ಟು ಕಠಿಣಗೊಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಅವರು ಸರ್ಕಾರಕ್ಕೆ ನೀಡಿದ ಕೆಲವು ಸಲಹೆಗಳು ಇಲ್ಲಿವೆ.
ಎಲ್ಲ ಸಿಬಿಎಸ್ಇ ಶಾಲೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಬದಿಗಿಡುವ ವ್ಯವಸ್ಥೆಗೆ ಕೂಡಲೇ ಕಡಿವಾಣ ಹಾಕಬೇಕು. ಮಂಡಳಿ ಉಲ್ಲೇಖಿಸಿದಂತೆ ಆರ್ 1/ ಆರ್ 2 ವಿಷಯ ಕಡ್ಡಾಯವಾಗಿ ಕನ್ನಡವೇ ಇರಬೇಕು. ಪ್ರತಿ ವರ್ಷ ಎನ್.ಒ.ಸಿ. ವ್ಯವಸ್ಥೆ ನವೀಕರಿಸಬೇಕು. ಕನ್ನಡ ಬೋಧನೆ, ವಿದ್ಯಾರ್ಥಿಗಳ ಕನ್ನಡ ಆಯ್ಕೆ, ಕನ್ನಡ ಶಿಕ್ಷಕರ ನೇಮಕಾತಿ ಮತ್ತು ಭಾಷಾ ಅನುಷ್ಠಾನದ ಸಮಗ್ರ ವರದಿ ನವೀಕರಣದಲ್ಲಿ ಒಳಗೊಳ್ಳಬೇಕು.
ನಿರಾಕ್ಷೇಪಣಾ ಪತ್ರ ರದ್ದು ಅಧಿಕಾರ ಸರ್ಕಾರಕ್ಕಿರಲಿ
ಕನ್ನಡ ಅನುಷ್ಠಾನದಲ್ಲಿ ಲೋಪ ಕಂಡುಬಂದಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ರದ್ದುಪಡಿಸುವ ಅಧಿಕಾರ ರಾಜ್ಯ ಸರ್ಕಾರವು ಕಾಯ್ದಿರಿಸಿಕೊಳ್ಳಬೇಕು. ಸಿಬಿಎಸ್ಇ ಶಾಲೆಗಳಲ್ಲಿ ಅರ್ಹ ಕನ್ನಡ ಶಿಕ್ಷಕರ ನೇಮಕಾತಿ ಕಡ್ಡಾಯಗೊಳಿಸಬೇಕು. ಕನ್ನಡ ಸಮರ್ಪಕ ಬೋಧನಾ ವ್ಯವಸ್ಥೆ ಜಾರಿಯಾಗಬೇಕು.
ಕನ್ನಡ ಭಾಷಾ ನೀತಿಯನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ನಿಯಂತ್ರಣ ಕ್ರಮಗಳನ್ನು ರೂಪಿಸಬೇಕು. ಅದಕ್ಕಾಗಿ ತಜ್ಞರ ಸಮಿತಿ ರಚಿಸಿ, ಅವರ ಶಿಫಾರಸು ಜಾರಿಗೊಳಿಸಬೇಕೆಂದು ಹೇಳಿದರು.













Click it and Unblock the Notifications