ಹೊಸ ವಾಹನ ನೋಂದಣಿಗೆ ಇನ್ಮುಂದೆ ಆರ್ಟಿಓ ಕಚೇರಿಗೆ ಹೋಗುವಂತಿಲ್ಲ
ಬೆಂಗಳೂರು, ನ. 02: ರಾಜ್ಯದ ವಾಹನ ಮಾಲೀಕ ಹಾಗೂ ಸವಾರರಿಗೆ ಸಂತಸದ ಸುದ್ದಿ. ಪ್ರಾದೇಶಿಕ ಸಾರಿಗೆ ಇಲಾಖೆ (ಆರ್ಟಿಒ) ಕಚೇರಿಯಲ್ಲಿ ಸಿಗುವ ಸೇವೆಗಾಗಿ ಇನ್ನು ಅನಾವಶ್ಯಕವಾಗಿ ಅಲೆಯುವಂತಿಲ್ಲ! ಸಾರಿಗೆ ಇಲಾಖೆಯ ಸೇವೆಯನ್ನು ಪಾರದರ್ಶಕವಾಗಿ ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಸಾರಿಗೆ ಇಲಾಖೆ 30 ಸೇವೆಗಳನ್ನು ಆನ್ಲೈನ್ ಮೂಲಕವೇ ಜನರ ಮನೆ ಬಾಗಿಲಿಗೆ ತಲುಪಲಿದೆ.
ಸಾರಿಗೆ ಇಲಾಖೆಯ 30 ಸೇವೆಗಳನ್ನು ಜನರು ಇರುವಲ್ಲಿಯೇ ಆನ್ಲೈನ್ ಮೂಲಕ ಪಡೆಯುವ ಮಹತ್ವಾಕಾಂಕ್ಷಿ ಯೋಜನೆಗೆ ಸೋಮವಾರ ಚಾಲನೆ ನೀಡಲಾಗಿದೆ. ಈ ಮೂವತ್ತು ಸೇವೆಗಳನ್ನು ಪಡೆಯಲು ಇನ್ನು ಸಾರ್ವಜನಿಕರು ಆರ್ಟಿಒ ಕಚೇರಿಗಳಿಗೆ ಅಳೆಯುವಂತಿಲ್ಲ. ಯಾವ ಅಧಿಕಾರಿಯನ್ನೂ ಸಂಪರ್ಕಿಸಿ ಬೇಡುವಂತಿಲ್ಲ. ವಾಹನ ನೋಂದಣಿ ಮಾಡಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡುವ ಅವಶ್ಯಕತೆ ಬೀಳುವುದಿಲ್ಲ. ಚಾಲನ ಪರವಾನಗಿಯನ್ನೂ ಕೂಡ ಅನ್ಲೈನ್ ಮೂಲಕವೇ ಪಡೆಯಲು ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ. ಇದರಿಂದ ಸಾರಿಗೆ ಇಲಾಖೆಯ ಪೇಪರ್ ಮುಕ್ತ ಆಡಳಿತಕ್ಕೆ ನಾಂದಿ ಹಾಡಿದ್ದು, ವರ್ಷಕ್ಕೆ 70 ಸಾವಿರ ಕೋಟಿ ಪೇಪರ್ ಉಳಿತಾಯವಾಗಲಿದೆ.
ಸಿಎಂ ಫುಲ್ ಖುಷಿ: ಸಾರಿಗೆ ಇಲಾಖೆಯ 30 ಜನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಸ ವ್ಯಕ್ತಪಡಿಸಿದರು. ಪ್ರತಿ ವರ್ಷ 60 ಲಕ್ಷ ಮಂದಿ ಸಾರಿಗೆ ಇಲಾಖೆಯ ಕಚೇರಿಗಳಿಗೆ (ಆರ್ಟಿಒ) ಭೇಟಿ ನೀಡುತ್ತಾರೆ. ಇದರಿಂದ ಅಧಿಕಾರಿಗಳಿಗೂ ಒತ್ತಡ, ಜನರಿಗೂ ಒತ್ತಡ. ಆನ್ಲೈನ್ ಮೂಲಕ ವಾಹನ ನೋಂದಣಿಗೆ ಅವಕಾಶ ಕೊಟ್ಟಿದ್ದು, ಡೀಲರ್ಗಳು ನೇರವಾಗಿ ವಾಹನ ನೋಂದಣಿ ಮಾಡಬಹುದು. ಇದರಿಂದ ಅನಾವಶ್ಯಕವಾಗಿ ಜನರು ಸಾರಿಗೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡುವುದು ತಪ್ಪುತ್ತದೆ . ಆರಂಭದಲ್ಲಿ ಹತ್ತು ಡೀಲರ್ ಗಳಿಗೆ ವಾಹನ ನೋಂದಣಿಗೆ ಅವಕಾಶ ನೀಡಲಾಗಿದೆ. ಇದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆಧಾರ್ ಗುರುತು ಆಧರಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಬಹುತೇಕ ಸೇವೆ ನೀಡಲು ಅವಕಾಶವಿದ್ದರೂ ತಂತ್ರಜ್ಞಾನದ ಉಪಯೋಗ ಪಡೆದುಕೊಂಡಿರಲಿಲ್ಲ. ಇದರಿಂದ ಜನರು ಅನಾವಶ್ಯಕವಾಗಿ ಆರ್ಟಿಓ ಕಚೇರಿಗಳಿಗೆ ಅಲೆಯುವಂತಾಗಿತ್ತು. ಅಧಿಕಾರಿಗಳು ಒತ್ತಡಕ್ಕೆ ಒಳಾಗಾಗಿ ಕಾಲಮಿತಿಯಲ್ಲಿ ಜನರಿಗೆ ಸೇವೆ ಕಲ್ಪಿಸಲು ಆಗುತ್ತಿರಲಿಲ್ಲ. ಇದೀಗ 30 ಸೇವೆ ಆನ್ಲೈನ್ನಲ್ಲಿಯೇ ಒಗಿಸಿರುವ ಕಾರಣ ಪಾರದರ್ಶಕತೆ ಜತೆಗೆ ತ್ವರಿತವಾಗಿ ಜನರಿಗೆ ಸೇವೆ ಲಭ್ಯವಾಗಲಿದೆ.
ಏನೆಲ್ಲಾ ಸೇವೆ ಲಭ್ಯವಾಗಲಿದೆ: ಹೊಸ ವಾಹನಗಳ ನೋಂದಣಿ, ಕಲಿಕಾ ಪರವಾನಗಿಯಲ್ಲಿ ಹೆಸರು ಬದಲಾವಣೆ, ವಾಹನ ಮಾಲೀಕತ್ವ ಬದಲಾವಣೆ, ಆರ್.ಸಿ ಹೆಸರು ಬದಲಾವಣೆ, ನಕಲಿ ಆರ್ ಸಿ ವಿತರಣೆ ಸೇರಿದಂತೆ ಅನೇಕ ಸೇವೆಗಳನ್ನು ಇದೀಗ ಸಾರ್ವಜನಿಕರು ಆನ್ಲೈನ್ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಚಾಲನಾ ಪರವಾನಗಿ ಮರು ನವೀಕರಣ ಸೇವೆಯನ್ನು ಈ ಸೇವೆ ವ್ಯಾಪ್ತಿಗೆ ತಂದಿಲ್ಲ. ಕೆಲವು ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಸೇವೆಯನ್ನು ಮುಂದಿನ ದಿನಗಳಲ್ಲಿ ಆನ್ಲೈನ್ ಸೇವೆ ವ್ಯಾಪ್ತಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Recommended Video
ಆಧಾರ್ ಗುರುತು ಆಧರಿಸಿ ಆರ್ಟಿಒ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಿಗುವ ಸೇವೆಯನ್ನು ಮನೆ ಬಾಗಿಲಿಗೆ ಕಲ್ಪಿಸುವ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು ಒಪ್ಪಿಸಿದ್ದಾರೆ. ಆಧಾರ್ ನಂಬರ್ ಗುರುತು ಮೂಲಕ ಕೆಲ ಸೇವೆಗಳನ್ನು ಬೆರಳ ತುದಿಯಲ್ಲಿ ಒದಗಿಸುವ ಮೂಲಕ ಪಾರದರ್ಶಕತೆ ತರುವ ಜತೆಗೆ ಜನರು ಅನಾವಶ್ಯಕ ಆರ್ ಟಿಓ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಪೇಪರ್ ರಹಿತ ಆಡಳಿತದಿಂದ ಇಲಾಖೆಗೂ ಕೋಟ್ಯಂತರ ರೂಪಾಯಿ ಉಳಿಯಲಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಬೆನ್ನಲ್ಲೇ ಈ ಹೊಸ ಸೇವೆಯನ್ನು ಜನರಿಗೆ ಅರ್ಪಿಸಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.