ಶಿಕ್ಷಕರ ವರ್ಗಾವಣೆ ನಿಯಮ ಸಡಿಲಿಕೆ: ನಿಯಮದಲ್ಲಿ ಏನೇನಿದೆ?
ಬೆಂಗಳೂರು, ಜನವರಿ 29: ಬಹುಕಾಲದ ತಲೆನೋವಾಗಿದ್ದ ಶಿಕ್ಷಕರ ವರ್ಗಾವಣೆ ನಿಯಮಗಳನ್ನು ತಿದ್ದುಪಡಿ ಮಾಡುವಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯಶಸ್ವಿಯಾಗಿದ್ದು, ವಿಧಾನಸಭೆ-ಪರಿಷತ್ನ ಒಪ್ಪಿಗೆ ಪಡೆಯುವುದಷ್ಟೆ ಬಾಕಿ ಉಳಿದಿದೆ.
ನಿಯಮಾವಳಿಗಳ ಕರಡು ಸಿದ್ಧವಾಗಿದ್ದು, ನಿನ್ನೆ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿದ ಸಚಿವ ಸುರೇಶ್ ಕುಮಾರ್, ಅವರ ಒಪ್ಪಿಗೆ ಪಡೆದಿದ್ದಾರೆ, ಕರಡಿನ ಬಗ್ಗೆ ಶಿಕ್ಷಕರ ಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೊದಲನೇಯದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಕಾಡುತ್ತಿದ್ದ 'ಕಡ್ಡಾಯ ವರ್ಗಾವಣೆ' ಪದವನ್ನೇ ಕೈಬಿಡಲಾಗಿದ್ದು, ಬದಲಿಗೆ 'ವಲಯ ವರ್ಗಾವಣೆ' ಎಂದು ಬದಲಾಯಿಸಲಾಗಿದೆ.

50 ವರ್ಷ ಮೇಲ್ಪಟ್ಟ ಶಿಕ್ಷಕಿಯರು, 55 ಮೇಲ್ಪಟ್ಟ ಶಿಕ್ಷಕರಿಗೆ ವಲಯ ವರ್ಗಾವಣೆ ಅನ್ವಯವಾಗುವುದಿಲ್ಲ. ಹಾಗೂ 10 ವರ್ಷಗಳ ಕಾಲ ಸಿ ವಲಯದಲ್ಲಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ವಲಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ.
ಇಷ್ಟು ದಿನ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಪಡೆಯುತ್ತಿದ್ದ ನೌಕರರ ಸಂಘ, ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಇನ್ನು ಮುಂದೆ ವಿನಾಯಿತಿ ಇರುವುದಿಲ್ಲ. ಅವರೂ ಸಹ ವರ್ಗಾವಣೆಗೆ ಅರ್ಹರೇ ಆಗಿರುತ್ತಾರೆ.
ಯಾವುದೇ ವಲಯ ವರ್ಗಾವಣೆಯಲ್ಲಿ ಶಿಕ್ಷಕರು ಕೋರಿಕೆ ವರ್ಗಾವಣೆಯಲ್ಲಿ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲಾಗುವುದು.
ಸಿಆರ್ಪಿ (ಕ್ಲಸ್ಟರ್ ರಿಸೋರ್ಸ್ ಪರ್ಸನ್), ಬಿಆರ್ಪಿ (ಬ್ಲಾಕ್ ರಿಸೋರ್ಸ್ ಪರ್ಸನ್) ಗಳ ಅವಧಿ ಮುಕ್ತಾಯದ ಬಳಿಕ ಅವರನ್ನು ಶಾಲೆಗಳಿಗೆ ಮರುನಿಯುಕ್ತಿ ಮಾಡುವಾಗ ಶೇ 20 ರಷ್ಟು ಶಿಕ್ಷಕರ ಕೊರತೆ ಇರುವ ತಾಲ್ಲೂಕುಗಳಿಗೆ ನಿಯುಕ್ತಿ ಮಾಡುವ ನಿಯಮವನ್ನು ಸಡಿಲಿಸಿ, ತಾಲ್ಲೂಕು ಅಥವಾ ಜಿಲ್ಲೆಯ ಯಾವುದೇ ಹುದ್ದೆಗೆ ಅಥವಾ ಶಾಲೆಗೆ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡುವ ನಿಯಮ ಜಾರಿಗೊಳಿಸಲಾಗಿದೆ.
ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಶಿಕ್ಷಕರನ್ನು ನಿಯುಕ್ತಿಗೊಳಿಸುವಾಗ ಮೊದಲು ತಾಲ್ಲೂಕು ವ್ಯಾಪ್ತಿಯ ಶಾಲೆಗಳಿಗೆ ನಿಯುಕ್ತಿಗೊಳಿಸಿ ನಂತರ ಜಿಲ್ಲಾ ವ್ಯಾಪ್ತಿಗೆ ನಿಯುಕ್ತಿಗೊಳಿಸಲಾಗುವುದು.
ವಿನಾಯಿತಿ ಮತ್ತು ಆದ್ಯತೆಗಳಲ್ಲಿ ಏಕನೀತಿ ತರಲು ಯೋಜಿಸಲಾಗಿದೆ ಹಾಗೂ ಶಿಕ್ಷಕರ ಕುಂದು-ಕೊರತೆ ಪರಿಹರಿಸಲು ವಿಭಾಗೀಯ ನಿರ್ದೇಶಕರನ್ನು ನೇಮಿಸಲಾಗುವುದು.












Click it and Unblock the Notifications