Sub Registrar Office: ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬಂದ್? ಕಾರಣ ಇಲ್ಲಿದೆ
ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘವು ಉಪ ನೋಂದಣಾಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದೆ. ಈ ಮುಷ್ಕರ ನಡೆದರೆ ರಾಜ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪ ನೋಂದಣಾಧಿಕಾರಿ ಹಾಗೂ ಇಲಾಖೆ ಸಿಬ್ಬಂದಿ ಇದೇ ಫೆಬ್ರವರಿ 27ರಿಂದ ಮುಷ್ಕರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘದಿಂದ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಆಸ್ತಿ ದಸ್ತಾವೇಜು, ನೋಂದಣಿ ಸೇರಿದಂತೆ ಇನ್ನಿತರೆ ಸೇವೆಗಳು ಆ ದಿನ ಬಂದ್ ಆಗುವ ಸಾಧ್ಯತೆ ಇದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಈ ಸೇವೆಗಳು ಸಿಗುವುದಿಲ್ಲ. ಇದರಿಂದ ಸಾರ್ವಜನಿಕರಿಗೂ ಸಕಾಲಕ್ಕೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ.

ಬೇಡಿಕೆಗಳೇನು?: ಕಾವೇರಿ-2 ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು, ಕರ್ನಾಟಕ ನೋಂದಣಿ ಕಾಯ್ದೆಗೆ 22 ಬಿ ಕಲಂ ಸೇರಿಸಿರುವುದನ್ನು ವಿರೋಧಿಸಿ, ಮಾಹಿತಿ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳಿಗೆ ಐಟಿ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದನ್ನು ತಪ್ಪಿಸುವುದು, ಫೇಸ್ಲೆಸ್ ರಿಜಿಸ್ಟ್ರೇಷನ್ ಸೇರಿದಂತೆ ಇಲಾಖೆಯಲ್ಲಿ ಕಂಡುಬರುತ್ತಿರುವ ಸರ್ವರ್ ಸಮಸ್ಯೆ, ಉಪ ನೋಂದಣಾಧಿಕಾರಿಗಳ ಟ್ರಾನ್ಸ್ಫರ್ಗೂ ಪ್ರತ್ಯೇಕ ನಿಯಮ ರೂಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಮುಷ್ಕರಕ್ಕೆ ಮುಂದಾಗಿದೆ. ಹಾಗಾಗಿ ಸಿಬ್ಬಂದಿ ಎಲ್ಲ ಸೇವೆಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದ್ದಾರೆ.
ಈ ಮುಷ್ಕರ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದೆ. ಹಾಗಾಗಿ ಇದೇ ಫೆಬ್ರವರಿ 27ರಿಂದ ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಕಲಿ ದಸ್ತಾವೇಜುಗಳನ್ನು ನೋಂದಣಿ ಮಾಡುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸಿರುವ ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2023 ವಿರೋಧಿಸಿ ಸಬ್ ರಿಜಿಸ್ಟ್ರಾರ್ಗಳು ಈ ಹಿಂದೆಯೂ ತಮ್ಮ ಕೆಲಸ ನಿಲ್ಲಿಸಿ ಆಕ್ರೋಶ ಹೊರಹಾಕಿದ್ದರು.

ರಾಜ್ಯ ಸರ್ಕಾರ ನೋಂದಣಿ ಕಾಯ್ದೆ 1908ರ ನಿಯಮ 22 (ಬಿ)ಗೆ ತಿದ್ದುಪಡಿ ತರುವ ಮೂಲಕ ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2023 ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ವಿರೋಧಿಸಿ ಸಬ್ ರಿಜಿಸ್ಟ್ರಾರ್ಗಳು ರಾಜ್ಯಾದ್ಯಂತ ಆಸ್ತಿ ದಾಖಲೆ ಹಾಗೂ ಎಲ್ಲ ದಸ್ತಾವೇಜುಗಳ ನೋಂದಣಿ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರು.
ನಕಲಿ ದಸ್ತಾವೇಜುಗಳು, ನಿಷೇಧಿತ ವ್ಯವಹಾರಕ್ಕೆ ಸಂಬಂಧಿಸಿದ ದಸ್ತಾವೇಜುಗಳು, ಕೇಂದ್ರ, ರಾಜ್ಯ ಅಧಿನಿಯಮ, ಜಪ್ತಿ ಮಾಡಿದ್ದ ಯಾವುದೇ ಸ್ವತ್ತಿನ ಮಾರಾಟ, ದೇಣಿಗೆ, ಗೇಣಿ, ಇತರೆ ರೂಪದಲ್ಲಿ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದ ದಸ್ತಾವೇಜುಗಳ ನೋಂದಣಿ ಮಾಡುವುದನ್ನ ಹೊಸ ಕಾನೂನಿನಡಿ ನಿರ್ಬಂಧಿಸಲಾಗಿದೆ. ಒಂದು ವೇಳೆ ಸಬ್ ರಿಜಿಸ್ಟ್ರಾರ್ಗಳು ನಿಯಮ ಉಲ್ಲಂಘಿಸಿ ನಕಲಿ ದಸ್ತಾವೇಜುಗಳನ್ನು ನೋಂದಣಿ ಮಾಡಿದರೆ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.












Click it and Unblock the Notifications