ಸಂಕಷ್ಟದಲ್ಲಿ ಬಿಎಸ್ವೈ ಸರಕಾರ: ಈಡೇರದ ಭರವಸೆ, ಮತ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ?
ಬೆಂಗಳೂರು, ಫೆ 2: ರಾಜ್ಯ ಸರಕಾರ ಸ್ವಾಮ್ಯದ ನಾಲ್ಕು ಸಂಸ್ಥೆಗಳು ಡಿಸೆಂಬರ್ ತಿಂಗಳಲ್ಲಿ ನಡೆಸಿದ್ದ ಮುಷ್ಕರ ಯಾವಮಟ್ಟಿಗೆ ಸರಕಾರಕ್ಕೆ ಬಿಸಿಮುಟ್ಟಿಸಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
Recommended Video
ಸಾರಿಗೆ ಸಂಸ್ಥೆ ನೌಕರರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಸರಕಾರ ನಿರ್ದಿಷ್ಟ ಕಾಲಾವಧಿಯಲ್ಲಿ ಈಡೇರಿಸಲು ಒಪ್ಪಿಕೊಂಡ ನಂತರ, ಬಸ್ಸುಗಳು ರೈಟ್ ರೈಟ್ ಅಂದಿದ್ದವು. ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೋರಾಟದ ನೇತೃತ್ವವನ್ನು ವಹಿಸಿಕೊಂಡಿದ್ದರು.
ಮುಷ್ಕರ ನಿರತರ ಮನವೊಲಿಸಲು ಕಂದಾಯ ಸಚಿವ ಆರ್.ಅಶೋಕ್ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿ ತಮ್ಮ ರಾಜಕೀಯ ಅನುಭವವನ್ನೆಲ್ಲಾ ಧಾರೆ ಎರೆಯಬೇಕಾಗಿ ಬಂದಿತ್ತು.
ಸರಕಾರ ಅಂದು ನೌಕರರಿಗೆ ನೀಡಿದ್ದ ಭರವಸೆಯು ಕಾರ್ಯರೂಪಕ್ಕೆ ಇನ್ನೂ ಬರದೇ ಇರುವುದರಿಂದ, ನೌಕರರು ಮತ್ತೆ ದೊಡ್ಡಮಟ್ಟಿನ ಮುಷ್ಕರಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ ತಿಂಗಳ ಪೂರ್ಣ ಸಂಬಳ ಇನ್ನೂ ಇಲ್ಲ
ಡಿಸೆಂಬರ್ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ನಡೆದ ಪ್ರತಿಭಟನೆಯನ್ನು ಸಾರಿಗೆ ಸಂಸ್ಥೆ ನೌಕರರು ಹಿಂದಕ್ಕೆ ಪಡೆದಿದ್ದರು. ಈಗ ಫೆಬ್ರವರಿ ತಿಂಗಳು ಆಗುತ್ತಾ ಬಂದಿದ್ದರೂ, ಡಿಸೆಂಬರ್ ತಿಂಗಳ ಪೂರ್ಣ ಸಂಬಳ ಇನ್ನೂ ಸಿಗದೇ, ಕೇವಲ ಅರ್ಧ ವೇತನ ಮಾತ್ರ ಸಿಕ್ಕಿರುವುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾರಿಗೆ ನಿಗಮ ಹಣಕಾಸಿನ ಕೊರತೆ ಎಂದು ಸೈಲೆಂಟ್ ಆಗಿದೆ ಎಂದು ಹೇಳಲಾಗುತ್ತಿದೆ.

ಸಾರಿಗೆ ಸಂಸ್ಥೆಯ ನಾಲ್ಕು ನಿಗಮ
ನಾಲ್ಕು ದಿನಗಳ ಕಾಲ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಾದ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ ಮತ್ತು ವಾಯುವ್ಯ ಕರ್ನಾಟಕ ಸಂಸ್ಥೆಯ ಸಾರಿಗೆ ನೌಕರರು ಮುಷ್ಕರ ಹೂಡಿದ್ದರು. ರಾಜ್ಯದ ಜೀವನಾಡಿಯಂತಿರುವ ಸಾರಿಗೆ ವ್ಯವಸ್ಥೆ ಬಂದ್ ಆಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಸಾರಿಗೆ ಸಚಿವ ಲಕ್ಷ್ಮಣ ಸವದಿ
ಮೊದಲಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ವಿಚಾರದಲ್ಲಿ ಉದಾಸೀನತೆ ತೋರಿದ್ದರಿಂದ ನೌಕರರ ಮುಷ್ಕರ ರಾಜ್ಯ ಸರಕಾರಕ್ಕೆ ಭಾರೀ ಮುಜುಗರವನ್ನು ತಂದೊಡ್ಡಿತ್ತು. ಕೊನೆಗೂ, ಬೇಡಿಕೆ ಈಡೇರಿಸುವ ಮನವೊಲಿಸುವ ಮೂಲಕ, ಮುಷ್ಕರ ಹಿಂದಕ್ಕೆ ಪಡೆಸುವಲ್ಲಿ ಸರಕಾರ ಯಶಸ್ವಿಯಾಗಿತ್ತು. ಆದರೆ, ಕೊಟ್ಟ ಭರವಸೆಯನ್ನು ಮುಷ್ಕರ ನಿಂತು ಐವತ್ತು ದಿನಗಳಾಗುತ್ತಾ ಬಂದರು, ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ಮತ್ತೆ ಮುಷ್ಕರಕ್ಕೆ ನೌಕರರ ಸಂಘ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಸಂಕಷ್ಟದಲ್ಲಿ ಬಿಎಸ್ವೈ ಸರಕಾರ: ಮತ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ?
ಮುಷ್ಕರ ನಿರತ ನೌಕರರು ಇಟ್ಟಿದ್ದ ಬೇಡಿಕೆಗಳು ಹೀಗಿತ್ತು:
1) ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು (ಈ ಬೇಡಿಕೆ ಈಡೇರಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಸರಕಾರ ಸ್ಪಷ್ಟ ಪಡಿಸಿತ್ತು)
2) ಸಾರಿಗೆ ನೌಕರರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು.
3) ಸಾರಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡಬೇಕು.
4) ಕೊರೋನಾದಿಂದ ಬಂದಾಗಿನಿಂದ ಡಿಪೋಗಳಲ್ಲಿ ಸರಿಯಾಗಿ ಡ್ಯೂಟಿ ಸಿಗುತ್ತಿಲ್ಲ.
5) ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ಧನ ಒದಗಿಸಬೇಕು.
6) ಡಿಪೋದಿಂದ ಡಿಪೋಗೆ ವರ್ಗಾವಣೆ ಆಗುತ್ತಿದೆ. ಇಂಥ ಸಮಸ್ಯೆಗಳನ್ನ ಬಗೆಹರಿಸಬೇಕು.

ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
"ಮೂರು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿಯಾಗಿದೆ ಎಂದು ನೀವು ಹೇಳುವುದಾದರೆ, ಉಳಿದಿರುವ ಆರು ಬೇಡಿಕೆಗಳನ್ನೂ ಈಡೇರಿಸಿ. ಇಲ್ಲದಿದ್ದರೆ, ನಾವು ಮುಷ್ಕರ ನಡೆಸದೇ ಬೇರೆ ದಾರಿಯಿಲ್ಲ"ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.












Click it and Unblock the Notifications