ಆಸ್ತಿ ನೋಂದಣಿಗೆ ಆಧಾರ್ ಬಳಕೆ ಮಾಡಲು ಒಪ್ಪಿಗೆ ಕೊಟ್ಟ ಕರ್ನಾಟಕ ಸರ್ಕಾರ
ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರ ನೈಜತೆಯನ್ನು ದೃಢೀಕರಿಸಲು ಆಧಾರ್ ಬಳಕೆ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಭೂ ವ್ಯವಹಾರಗಳ ಸಮಯದಲ್ಲಿ ಒಬ್ಬರ ಆಸ್ತಿಯನ್ನು ಇನ್ನೊಬ್ಬರು ಮಾರಾಟ ಮಾಡುವುದನ್ನು ತಡೆಯುವ ಉದ್ದೇಶದಿಂದ ಕಂದಾಯ ಇಲಾಖೆ ಈ ನಿಯಮ ಜಾರಿ ಮಾಡಿದೆ, ಇದು ಭೂ ವ್ಯವಹಾರಗಳ ಮಾರಾಟ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲಿದೆ.
ಪ್ರಸ್ತುತ, ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರನ್ನು ಯಾರೆಂದು ದೃಢೀಕರಿಸಲು ಸಬ್-ರಿಜಿಸ್ಟ್ರಾರ್ಗಳು ಸರ್ಕಾರದಿಂದ ನೀಡಲಾದ ಗುರುತಿನ ದಾಖಲೆಗಳು ಮತ್ತು ಸಾಕ್ಷಿಗಳ ಸಹಿಯನ್ನು ಅವಲಂಬಿಸಿದ್ದಾರೆ. ಇದರಿಂದ ನೈಜ ಮಾಲೀಕರಲ್ಲದವರು ಕೂಡ ಮಾರಾಟಗಾರರು ಎಂದು ಬಿಂಬಿಸಿಕೊಂಡು, ಅಕ್ರಮ ಎಸಗುವ ಸಾಧ್ಯತೆ ಇತ್ತು.

ಭೂಮಿ ಮತ್ತು ನಗರ ಆಸ್ತಿ ಮಾಲೀಕತ್ವ ದಾಖಲೆ ವಿಭಾಗಗಳಿಗೆ ಆಸ್ತಿ ಮಾರಾಟಕ್ಕೆ ಸಂಬಂಧಪಟ್ಟಂತೆ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಆಧಾರ್ ಮಾಹಿತಿಯನ್ನು ಬಳಸಿಕೊಳ್ಳುವಂತೆ ಅನುಮತಿ ನೀಡಿ ಮೇ 18 ರಂದು ಅಧಿಸೂಚನೆ ಹೊರಡಿಸಲಾಗಿದೆ.
ಕೇಂದ್ರ ಸರ್ಕಾರ ಏಪ್ರಿಲ್ನಲ್ಲಿ ಎಲ್ಲಾ ಭೂಮಿ ಅಥವಾ ಆಸ್ತಿ ವಹಿವಾಟುಗಳಿಗೆ ಆಧಾರ್ ದೃಢೀಕರಣದ ಬಳಕೆ ಮಾಡುವಂತೆ ಒಪ್ಪಿಗೆ ನೀಡಿದ ನಂತರ ರಾಜ್ಯ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ.
"ಒಬ್ಬರ ಹೆಸರಿನ ಆಸ್ತಿಯನ್ನು ಮತ್ತೊಬ್ಬರು ಮಾರಾಟ ಮಾಡುವುದನ್ನು ತಡೆಯುವುದು ಈಗ ಸುಲಭವಾಗಲಿದೆ. ಒಂದೇ ಸರ್ವೆ ನಂಬರ್ ನಲ್ಲಿ ಒಬ್ಬರಿಗಿಂದ ಹೆಚ್ಚು ಜನ ಆಸ್ತಿಯ ಮಾಲೀಕರು ಇದ್ದಾಗ ಅವರನ್ನು ಗುರುತಿಸಲು ಹೊಸ ನಿಯಮ ಸಹಕಾರಿಯಾಗುತ್ತದೆ" ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
"ಆಸ್ತಿ ಮಾಲೀಕರ ಮರಣದ ನಂತರ ಯಾವುದೇ ಅರ್ಜಿಯನ್ನು ಸಲ್ಲಿಸದೆ ಆರ್ಟಿಸಿಯಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರನ್ನು ಸ್ವಯಂಚಾಲಿತವಾಗಿ ನಮೂದಿಸಲು ಇದು ಸಹಾಯ ಮಾಡುತ್ತದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಿಯಮದಿಂದ ಸ್ಥಿರಾಸ್ತಿಗಳ ವಿವಾದಗಳು ಬೇಗನೆ ಬಗೆಹರಿಯಲಿವೆ ಮತ್ತು ಮುಂದಿನ ದಿನಗಳಲ್ಲಿ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳ ಪ್ರಮಾಣ ಶೇಕಡಾ 40-50 ರಷ್ಟು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸರ್ಕಾರದ ಸೌಲಭ್ಯ ಪಡೆಯಲು ಮತ್ತಷ್ಟು ಅನುಕೂಲ
ಮುಂದಿನ ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಭೇಟಿ ನೀಡದೆ ಆಸ್ತಿಯನ್ನು ನೋಂದಣಿ ಮಾಡಲು ಸಾಧ್ಯವಿದೆ ಎಂದು ಹೇಳಲಾಗಿದೆ. ಅಲ್ಲದೆ, ಭೂಮಿಯ ಆಧಾರದ ಮೇಲೆ, ಬ್ಯಾಂಕ್ಗಳಿಂದ ಸಾಲ ಪಡೆಯಲು, ಕೃಷಿ ವಿಮೆಗಳನ್ನು ಪಡೆಯಲು, ರಸಗೊಬ್ಬರ ಸಬ್ಸಿಡಿ ಪಡೆಯಲು ಕೂಡ ಇದು ನೆರವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications