ಅನುಪಮಾ ರಾಜೀನಾಮೆ ಅಂಗೀಕರಿಸಿದ ಸರ್ಕಾರ
ಬೆಂಗಳೂರು, ಜೂನ್ 09 : ಕೊನೆಗೂ ರಾಜ್ಯ ಸರ್ಕಾರ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿದೆ. ಈ ಮೂಲಕ ಅನೇಕ ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಹೈ ಡ್ರಾಮಾಕ್ಕೆ ತೆರೆ ಬಿದ್ದಿದೆ.
ರಾಜ್ಯ ಸರ್ಕಾರ ಅನುಪಮಾ ಅವರ ಮನವೊಲಿಕೆಗೆ ಮಾಡಿದ ಯತ್ನ ವಿಫಲವಾದ ಕಾರಣ ರಾಜೀನಾಮೆಯನ್ನು ಅಂಗೀಕಾರ ಮಾಡಿದೆ. ಶನಿವಾರ ಜೂನ್ 4 ರಂದು ಅನುಪಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.[ಅನುಪಮಾ ಶೆಣೈ ಯಾರು?]

ರಾಜೀನಾಮೆ ನೀಡಿದ ನಂತರ ಅನುಪಮಾ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಗುರುವಾರ ಕಾಣಿಸಿಕೊಂಡ ಅನುಪಮಾ ಕೂಡ್ಲಿಗಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ್ದರು. ಫೇಸ್ ಬುಕ್ ಸ್ಟೇಟಸ್ ಬಗ್ಗೆ ನನಗೇನು ಗೊತ್ತಿಲ್ಲ. ಸರ್ಕಾರ ಬೇಕಾದರೆ ವಜಾ ಮಾಡಿಕೊಳ್ಳಲಿ ಎಂಬ ಮಾತುಗಳನ್ನು ಆಡಿದ್ದರು.[ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]

ಮಾಧ್ಯಮದವರ ಮುಂದೆ ಕಾಣಿಸಿಕೊಂಡ ಅನುಪಮಾ ಸರ್ಕಾರ ಮತ್ತು ತಮ್ಮ ರಾಜೀನಾಮೆ ಬಗ್ಗೆ ಅನೇಕ ವಿಚಾರಗಳನ್ನು ತೆರೆದಿಡಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಏನನ್ನು ಹೇಳದೇ ಅನುಪಮಾ ಅನೇಕ ಪ್ರಶ್ನೆಗಳನ್ನು ಹಾಗೇ ಬಿಟ್ಟಿದ್ದಾರೆ.[ಕೂಡ್ಲಿಗಿಯಲ್ಲಿ ಕೂಲ್ ಆಗಿ ಶೆಣೈ ಕೇಳಿದ ಪ್ರಶ್ನೆ 'ಫೇಸ್ಬುಕ್ ಎಂದ್ರೇನು?']
ಅನುಪಮಾ ರಾಜೀನಾಮೆ ಹಿಂಪಡೆಯಬೇಕು ಎಂಬ ಕೂಗು ಜನರಿಂದ, ಸಾಮಾಜಿಕ ತಾಣಗಳಲ್ಲಿ ಕೇಳಿ ಬಂದಿತ್ತು. ಅಲ್ಲದೇ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಗೃಹಮಂತ್ರಿ ಡಾ ಜಿ ಪರಮೇಶ್ವರ ಮಾತುಕತೆಗೂ ಯತ್ನಿಸಿದ್ದರು. ಇದೀಗ ಅನುಪಮಾ ಶೆಣೈ ಸ್ವತಂತ್ರ ಹಕ್ಕಿ.












Click it and Unblock the Notifications