ಅನ್ನಭಾಗ್ಯ ಸಂಘರ್ಷ: ಮುನಿಯಪ್ಪ ಭೇಟಿಗೆ ಮೂರು ದಿನ ಸತಾಯಿಸಿದ ಕೇಂದ್ರ ಸಚಿವ- ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದ ಕಾಂಗ್ರೆಸ್
ಬೆಂಗಳೂರು, ಜೂನ್ 23: ರಾಜ್ಯದ ಆಹಾರ ಸಚಿವರನ್ನು ಭೇಟಿಯಾಗಲು ಕಾಲಾವಕಾಶ ನೀಡಿ ನಂತರ ಮೂರು ದಿನಗಳ ಕಾಲ ಸತಾಯಿಸುವ ಕೇಂದ್ರ ಸಚಿವರದ್ದು ದುರಹಂಕಾರದ ಪರಮಾವಧಿ ಎಂದು ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ರಾಜ್ಯದ ಆಹಾರ ಸಚಿವರನ್ನು ಸತಾಯಿಸಿರುವುದು ಕರ್ನಾಟಕಕ್ಕೆ, ಕನ್ನಡಿಗರಿಗೆ ಬಿಜೆಪಿ ಮಾಡುತ್ತಿರುವ ಅವಮಾನ' ಎಂದು ಆರೋಪಿಸಿದೆ.

ಚುನಾವಣೆ ಪ್ರಚಾರಕ್ಕೆ ತಿಂಗಳಾನುಗಟ್ಟಲೆ ಸಮಯ ಇರುವ ಬಿಜೆಪಿಗರಿಗೆ ಜನಪರ ಯೋಜನೆಯ ಬಗ್ಗೆ ಚರ್ಚಿಸಲು ಸಮಯವಿಲ್ಲವೇ? ಅಥವಾ ಇಷ್ಟವಿಲ್ಲವೇ? ಎಂದೂ ಪ್ರಶ್ನಿಸಿದೆ.
ಕೇಂದ್ರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ ಎಂದ ಕಟೀಲ್ಗೆ ಚಾಟಿ
'ಕೇಂದ್ರಕ್ಕೆ ಕರ್ನಾಟಕ ಒಂದೇ ಮುಖ್ಯವಲ್ಲ' ಇದು ಕರ್ನಾಟಕದ ಹಿತ ಕಾಯಲು ಕನ್ನಡಿಗರಿಂದ ಆಯ್ಕೆಯಾದ ಸಂಸದರ ಮಾತು. ನಳೀನ್ ಕುಮಾರ್ ಕಟೀಲರೇ, ಚುನಾವಣೆ ಬಂದಾಗ ಮಾತ್ರ ಮೋದಿಗೆ ಕರ್ನಾಟಕವೇ ಮುಖ್ಯವಾಗಿರುತ್ತದೆಯೇ? ಚುನಾವಣೆಗಾಗಿ ಮೂರ್ ಮೂರು ದಿನಕ್ಕೊಮ್ಮೆ ಓಡೋಡಿ ಬಂದು ಗಲ್ಲಿ ಗಲ್ಲಿಯಲ್ಲಿ ಕೈ ಬೀಸಿದ ಮೋದಿಗೆ ಅಂದು ಕರ್ನಾಟಕ ಮುಖ್ಯವಾಗಿತ್ತೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕರ್ನಾಟಕ ಮುಖ್ಯವಾಗಿರದಿದ್ದಕ್ಕೆ, ನೆರೆ ಪರಿಹಾರ ಕೊಡಲಿಲ್ಲವೇ? ಬರ ಪರಿಹಾರ ಕೊಡಲಿಲ್ಲವೇ? ಕರ್ನಾಟಕದಲ್ಲಿನ ಯೋಜನೆಗಳನ್ನು ಕಿತ್ತುಕೊಂಡಿದ್ದೇ? ಎಂದೂ ಕೇಳಿದೆ.
'ಒಕ್ಕೂಟ ವ್ಯವಸ್ಥೆಯ ಗಂಧಗಾಳಿ ತಿಳಿಯದ, ಗೌರವಿಸದ ಬಿಜೆಪಿಯಿಂದ ಕರ್ನಾಟಕವೂ ಉದ್ದರವಾಗಿಲ್ಲ, ದೇಶವೂ ಉದ್ದಾರವಾಗಿಲ್ಲ. ರಾಜ್ಯಗಳೆಲ್ಲ ಸೇರಿಯೇ ದೇಶ ಆಗಿರುವುದು ಎಂಬ ಕನಿಷ್ಠ ಜ್ಞಾನ ಕಟೀಲರಿಗಿಲ್ಲದಿರುವುದು ದುರಂತ ಎಂದು ಹರಿಹಾಯ್ದಿದೆ.
ಸಂಸದನಾಗಿ ತನ್ನ ಜವಾಬ್ದಾರಿ ಮರೆತು ಇಂತಹ ಹೊಣೆಗೇಡಿ ಹೇಳಿಕೆ ನೀಡುತ್ತಿರುವ ಬಿಜೆಪಿಯವರನ್ನು ಕರ್ನಾಟಕದ ಜನತೆ ಲೋಕಸಭೆಯ ಚುನಾವಣೆಯಲ್ಲೂ ಫ್ರಿಯಾಗಿ ಟಿಕೆಟ್ ಕೊಡಿಸಿ ಮನೆಗೆ ಕಳಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಟೀಕಿಸಿದೆ.












Click it and Unblock the Notifications