ಹಂದಿಜ್ವರಕ್ಕೆ ರಾಜ್ಯದಲ್ಲಿ ಮತ್ತೆ ನಾಲ್ಕು ಬಲಿ
ಬೆಂಗಳೂರು, ಫೆ. 17: ಎಚ್1 ಎನ್ 1 ಮಹಾಮಾರಿ ರಾಜ್ಯದಲ್ಲಿ ಮತ್ತೆ 4 ಜನರನ್ನು ಬಲಿಪಡೆದಿದ್ದು ಸಾವಿಗೀಡಾದವರ ಸಂಖ್ಯೆ 24ಕ್ಕೆ ಏರಿದೆ.
ಬೆಂಗಳೂರಿನ ಭಾಸ್ಕರ್ (60), ಬೀದರ್ನ ಗೀತಾ (32), ಮೈಸೂರು ಮತ್ತು ವಿಜಯಪುರದಲ್ಲಿ ಒಬ್ಬೊಬ್ಬರು ಎಚ್1ಎನ್1ಗೆ ಬಲಿಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾಸ್ಕರ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.[ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ]

10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರಿನ ಜೆ.ಪಿ.ನಗರದ ನಿವಾಸಿ 42 ವರ್ಷದ ಮಹಿಳೆ, ವಿಜಯಪುರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ 59 ವರ್ಷದ ವೃದ್ಧೆ ಮಹಾಮಾರಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದಾಗ ರೋಗದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಎಚ್1ಎನ್1 ಸೋಂಕಿತರ ಸಂಖ್ಯೆ 285ಕ್ಕೆ ಏರಿದೆ. ಮೈಸೂರಿನ ವಿವಿಧ ಆಸ್ಪತ್ರೆಯಲ್ಲಿ 17 ಮಂದಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 600 ಜನ ಹಂದಿಜ್ವರಕ್ಕೆ ಬಲಿಯಾಗಿದ್ದಾರೆ.[ಎಚ್1ಎನ್ 1 ಲಕ್ಷಣಗಳೇನು? ಮುನ್ನೆಚ್ಚರಿಕೆ ವಿಧಾನಗಳೆನು?]
ಅಗತ್ಯ ಔಷಧ ಸಂಗ್ರಹ: ಖಾದರ್
1,057 ಮಂದಿಯ ಕಫದ ಮಾದರಿಗಳನ್ನು ಪ್ರಯೋಗಾಲಕ್ಕೆ ಕಳಿಸಲಾಗಿದೆ ಇದರಲ್ಲಿ 285 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದ್ದು ಅಗತ್ಯ ಔಷಧ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications