ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದ ರಾಮುಲು, ಜಾರಕಿಹೊಳಿಗೆ ಭಾರೀ ಹಿನ್ನಡೆ
ದಾವಣಗೆರೆ, ಜ 9: ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ರಮೇಶ್ ಜಾರಕಿಹೊಳಿ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲುಗೆ ಹಿನ್ನಡೆಯಾಗುವ ಸುದ್ದಿಯೊಂದು ಹೊರಬಿದ್ದಿದೆ.
Recommended Video
ನಮ್ಮ ಜನಾಂಗಕ್ಕೆ ಡಿಸಿಎಂ ಹುದ್ದೆ ನೀಡಲೇಬೇಕೆಂದು ಪಟ್ಟು ಹಿಡಿದಿದಿದ್ದ ವಾಲ್ಮೀಕಿ ಸಮುದಾಯದ ಪೀಠಾಧಿಪತಿಗಳು, ಹುದ್ದೆಯನ್ನೇ ತೆಗೆದುಬಿಟ್ಟರೆ ನಮಗೇನು ಅಭ್ಯಂತರವಿಲ್ಲ ಎಂದಿದ್ದಾರೆ.
ದಿನದಿಂದ ದಿನಕ್ಕೆ ಅಮಿತ್ ಶಾಗೆ ಬಿಸಿ ತುಪ್ಪವಾಗುತ್ತಿರುವ ರಾಜ್ಯ ಬಿಜೆಪಿ ನಾಯಕರ ಡಿಮಾಂಡ್
ಕೆಲವು ದಿನಗಳ ಹಿಂದೆ, ವಾಲ್ಮೀಕಿ ಸಮುದಾಯದ ಪೀಠಾಧಿಪತಿಗಳು ಬಿಜೆಪಿ ಸರಕಾರದ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದರು. "ಅಧಿಕಾರಕ್ಕೆ ಬರುವ ಮುನ್ನ, ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯತೆ ನೀಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ನಮ್ಮ ಸಮುದಾಯವನ್ನು ಬಿಜೆಪಿ ವೋಟ್ ಬ್ಯಾಂಕ್ ಮಾಡಿಕೊಂಡಿದೆ" ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದರು.
ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ವಾಲ್ಮೀಕಿ ಶ್ರೀ, ರಾಮುಲು
ಡಿಸಿಎಂ ಹುದ್ದೆಯ ಬಗ್ಗೆ ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಧನುರ್ಮಾಸದ ನಂತರ ಸಂಪುಟ ರಚನೆಯಾಗಲಿದೆ ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೇಳಿರುವುದರಿಂದ, ಶ್ರೀಗಳ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದೆ.
ಶ್ರೀರಾಮುಲು, ಜಾರಕಿಹೊಳಿಯಾಗಲಿ, ಇಬ್ಬರೂ ನಮಗೆ ಎರಡು ಕಣ್ಣು ಇದ್ದಂತೆ
"ಶ್ರೀರಾಮುಲು ಆಗಲಿ ರಮೇಶ್ ಜಾರಕಿಹೊಳಿಯಾಗಲಿ, ಇಬ್ಬರೂ ನಮಗೆ ಎರಡು ಕಣ್ಣು ಇದ್ದಂತೆ. ಯಾರಿಗೆ, ಡಿಸಿಎಂ ಸ್ಥಾನ ಕೊಟ್ಟರು, ನಮಗೆ ಸಂತೋಷ" ಎಂದು ಶ್ರೀಪ್ರಸನ್ನಾನಂದ ಸ್ವಾಮೀಜಿಗಳು ಹೇಳಿದ್ದರು. "ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಬೇಕಿಲ್ಲ ಡಿಸಿಎಂ ಸ್ಥಾನದ ಅವಶ್ಯಕತೆಯೂ ಇಲ್ಲ. ಆದರೆ, ಸಮುದಾಯಕ್ಕೆ ಮಾನ್ಯತೆ ನೀಡಬೇಕು" ಎಂದು ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದರು.
ರಾಜೀನಾಮೆ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎನ್ನುವ ನಂಬಿಕೆ ನಮಗಿದೆ, ರಾಜು ಗೌಡ
"ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನಕ್ಕಿಂತ ಶೇ.7.5ರಷ್ಟು ಮೀಸಲಾತಿ ಬೇಕು" ಎಂದು ರಾಜು ಗೌಡ ಹೇಳಿದ್ದರು. ಜೊತೆಗೆ, ನಮ್ಮಿಷ್ಟು ಒತ್ತಾಯಕ್ಕೆ ಮಣಿಯದೇ ಇದ್ದರೆ, ನಮ್ಮ ಶ್ರೀಗಳು ನೀಡಿದ ಹೇಳಿಕೆಗೆ ನಾವು ಬದ್ದ, ಎಲ್ಲಾ ಹದಿನೈದು ಶಾಸಕರು ರಾಜೀನಾಮೆ ನೀಡುತ್ತೇವೆ. ಮೀಸಲಾತಿ ವಿಚಾರದಲ್ಲಿ ಶ್ರೀಗಳ ಆದೇಶಕ್ಕೆ ನಮ್ಮ ಸಹಮತವಿದೆ. ಮುಖ್ಯಮಂತ್ರಿಗಳು, ನಮ್ಮನ್ನು ರಾಜೀನಾಮೆ ಕೊಡುವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎನ್ನುವ ನಂಬಿಕೆ ನಮಗಿದೆ" ಎಂದು ರಾಜು ಗೌಡ ಹೇಳಿದ್ದರು.
ಉಪಮುಖ್ಯಮಂತ್ರಿ ಹುದ್ದೆಯನ್ನೇ ತೆಗೆದುಬಿಟ್ಟರೆ ನಮಗೆ ಸಂತೋಷ
ದಾವಣಗೆರೆಯಲ್ಲಿ ಮಾತನಾಡುತ್ತಿದ್ದ ಪ್ರಸನ್ನಾನಂದಪುರಿ ಸ್ವಾಮೀಜಿಗಳು, "ಉಪಮುಖ್ಯಮಂತ್ರಿ ಹುದ್ದೆಯನ್ನೇ ತೆಗೆದುಬಿಟ್ಟರೆ ನಮಗೆ ಸಂತೋಷ. ಇದರಿಂದ, ನಮಗಾಗಲಿ ಅಥವಾ ನಮ್ಮ ಸಮಾಜದ ಮುಖಂಡರಿಗೆ ಯಾವುದೇ ಬೇಸರವಾಗುವುದಿಲ್ಲ. ಈ ಹುದ್ದೆ ಇದ್ದರೆ ಮುಖ್ಯಮಂತ್ರಿಗಳಿಗೆ ದಿನದಿಂದ ದಿನಕ್ಕೆ ರಗಳೆಗಳೇ ಜಾಸ್ತಿ" ಎನ್ನುವ ಹೇಳಿಕೆಯನ್ನು ಶ್ರೀಗಳು ನೀಡಿದ್ದಾರೆ.
ನಮ್ಮ ಸಮಾಜದ ನಾಯಕರಿಗೂ ನೀಡಬೇಕು
"ಒಂದು ವೇಳೆ, ಸಂಪುಟ ವಿಸ್ತರಣೆಯ ನಂತರವೂ ಡಿಸಿಎಂ ಹುದ್ದೆ ಮುಂದುವರಿದರೆ, ನಮ್ಮ ಸಮಾಜದ ನಾಯಕರಿಗೂ ನೀಡಬೇಕು. ಈ ಮಾತನ್ನು ನಾವು ಅತ್ಯಂತ ಸ್ಪಷ್ಟವಾದ ಮಾತಿನಿಂದ ಹೇಳುತ್ತಿದ್ದೇವೆ. ಬಿಜೆಪಿಯು ಅಧಿಕಾರಕ್ಕೆ ಬರುವ ಮುನ್ನ ವಾಲ್ಮೀಕಿ ಸಮಾಜದ ಶಾಸಕರನ್ನು ಡಿಸಿಎಂ ಮಾಡುವುದಾಗಿ ಹೇಳಿದೆ. ಅವರು ತಮ್ಮ ಮಾತಿನ ಮೇಲೆ ನಿಂತುಕೊಳ್ಳಲಿ, ಇಲ್ಲವೇ ಆ ಹುದ್ದೆಯನ್ನು ತೆಗೆದುಬಿಡಲಿ" ಎಂದು ಶ್ರೀಗಳು ಹೇಳಿದರು.
ಶ್ರೀಗಳು ಒಂದು ಮಾತು ಹೇಳಿದರೆ ನಾವು ಆ ಮಾತನ್ನು ತೆಗೆದು ಹಾಕುವುದಿಲ್ಲ
"ನಮಗೆ ಮುಖ್ಯಮಂತ್ರಿಗಳ ಮೇಲೆ ಅಪಾರ ಗೌರವವಿದೆ. ಹಾಗೆಯೇ, ಶ್ರೀಗಳು ಒಂದು ಮಾತು ಹೇಳಿದರೆ ನಾವು ಆ ಮಾತನ್ನು ತೆಗೆದು ಹಾಕುವುದಿಲ್ಲ. ಯಾವುದೇ ತ್ಯಾಗಕ್ಕೂ ಸಿದ್ಧ" ಎಂದು ಶ್ರೀರಾಮುಲು ಪರೋಕ್ಷವಾಗಿ ರಾಜೀನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.