ಕರ್ನಾಟಕ: ಹಿಂಗಾರು ಮಳೆ ಇನ್ನೂ ಆರಂಭವಾಗಿಲ್ಲ, ಈ ಭಾರಿ ರಾಜ್ಯಕ್ಕೆ ಶೇ.20ರಷ್ಟು ಹೆಚ್ಚು ಮಳೆ
ಬೆಂಗಳೂರು, ಅಕ್ಟೋಬರ್ 02: ಕರ್ನಾಟಕ ಸೇರಿದಂತೆ ಭಾರತದಲ್ಲಿ 'ಹಿಂಗಾರು ಮಳೆ' ಅಕ್ಟೋಬರ್ ಎರಡನೇ ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಮುಂಗಾರು ಮಳೆ ಅಂತ್ಯಗೊಂಡಿಲ್ಲ ಎಂದು ಹವಾಮಾನ ತಜ್ಞರು ಹಾಗೂ ವಿಜ್ಞಾನಿ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಇನ್ನೇನು ಅಂತ್ಯಗೊಳ್ಳಲು ದಿನಗಣನೆ ಆರಂಭಿಸಿರುವ ಮುಂಗಾರು ರಾಜ್ಯದಲ್ಲಿ ಚುರುಕಾಗಿದೆ. ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಕರ್ನಾಟಕದಲ್ಲಿ ಶೇ. 20ರಷ್ಟು ಅಧಿಕ ಮಳೆ ಸುರಿದಿದೆ. ಮುಂದಿನ ಕೆಲವು ದಿನ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದ ಉತ್ತರ ಭಾರತ ಹಾಗೂ ಮಧ್ಯ ಭಾರತದಲ್ಲಿ ಮುಂಗಾರು ಮಾರುಗಳ ಬೀಸುವಿಕೆ ಕಡಿಮೆಯಾಗಿದೆ. ಇದು ಹಿಂಗಾರು ಮಳೆಯ ಆಗಮನದ ನಿರೀಕ್ಷೆ ಎನ್ನಲಾಗಿದೆ. ಆದರೆ ಹಿಂಗಾರು ಆರಂಭವಾಗಲು ಇನ್ನೊಂದು ವಾರ ಕಾಯಬೇಕಿದೆ. ಮುನ್ಸೂಚನೆ ಪ್ರಕಾರ ಅಕ್ಟೋಬರ್ 08ಇಲ್ಲವೇ 10ರಂದು ಹಿಂಗಾರು ಆರಂಭವಾಗುವ ನಿರೀಕ್ಷೆ ಎಂದು ವಿಜ್ಞಾನಿ ಪ್ರಸಾದ್ ಹೇಳಿದರು. ಹೀಗಾಗಿ ಮುಂಗಾರು ಮಳೆ ಹಿಂಪಡೆಯಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಮುಂಗಾರು ಮಾರುತಗಳೇ ಚುರುಕುಗೊಂಡಿವೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಶೇ.20ರಷ್ಟು ಅಧಿಕ ಮಳೆ
ದೇಶದ ಈಶಾನ್ಯ ಭಾಗ ಇಲ್ಲವೇ ಪೂರ್ವ ಭಾಗದ ಪ್ರದೇಶಗಳಿಂದ ಬೀಸುವ ಗಾಳಿ ಸಮುದ್ರ ಮಟ್ಟಕ್ಕಿಂತ 1.5ಕಿ.ಮೀ. ಎತ್ತರದಲ್ಲಿರಬೇಕು. ಹೀಗಾದಾಗ ತಮಿಳುನಾಡು ರಾಜ್ಯದಲ್ಲಿ ನಿರಂತರವಾಗಿ ಎರಡು ದಿನ ಮಳೆ ಆದರೆ ಅದು ಹಿಂಗಾರು ಆಗಮನ ಎಂದರ್ಥ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಆರಂಭವಾದಾಗಿನಿಂದ ಜೂನ್ನಿಂದ ಸೆಪ್ಟಂಬರ್ ಅಂತ್ಯಕ್ಕೆ ವಾಡಿಕೆಗಿಂತ ಒಟ್ಟು ಶೇ.20ರಷ್ಟು ಅಧಿಕ ಮಳೆ ದಾಖಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ವಾಡಿಕೆಗಿಂತ 1019ಮಿ.ಮೀ. ಅಧಿಕ ಮಳೆ
ಹವಾಮಾನ ಇಲಾಖೆ ಪ್ರಕಾರ ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಮುಂಗಾರು ಮಳೆಯ ಋತು ಎನ್ನಲಾಗುತ್ತದೆ. ಈ ವರ್ಷ ಮುಂಗಾರಿನಲ್ಲಿ ವಾಡಿಕೆ 852ಮೀ.ಮೀ. ಮಳೆ ಆಗಬೇಕಿತ್ತು. ಅದರಲ್ಲಿ ವಾಡಿಕೆಗಿಂತ 1019ಮಿ.ಮೀ. ಮಳೆ ದಾಖಲಾಗುವ ಮೂಲಕ ಒಟ್ಟು ಶೇ. 20ರಷ್ಟು ಅಧಿಕ ಮಳೆ ಬಿದ್ದಿದೆ. ಈ ಪೈಕಿ ಪ್ರಸಕ್ತ ಮುಂಗಾರಿನಲ್ಲಿ ದಕ್ಷಿಣ ಒಳನಾಡಿಗೆ ಅತ್ಯಧಿಕ ಮಳೆ ಬಿದ್ದಿದೆ.

ದಕ್ಷಿಣ ಒಳನಾಡಿಗೆ ಶೇ.79ರಷ್ಟು ಅಧಿಕ ಮಳೆ
ಒಟ್ಟಾರೆ ಮುಂಗಾರು ಋತುವಿನಲ್ಲಿ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಿಗೆ ವಾಡಿಕೆ ವಾಡಿಕೆ (369ಮಿ.ಮೀ.)ಗಿಂತ 660ಮಿ.ಮೀ. ಮಳೆ ಬಿದ್ದಿದೆ, ಇದರಿಂದ ಈ ವರ್ಷ ಈ ಭಾಗದಲ್ಲಿ ಶೇ.79ರಷ್ಟು ಅಧಿಕ ಮಳೆ ಬಿದ್ದಂತಾಗಿದೆ. ಉತ್ತರ ಒಳನಾಡಿನಲ್ಲಿ ಶೇ.26ರಷ್ಟು ಅಧಿಕ ಮಳೆ ದಾಖಲಾಗಿದೆ. ಇಲ್ಲಿ ವಾಡಿಕೆ ಮಳೆ 479ಮಿ.ಮೀ.ಗಿಂತ 602ಮಿ.ಮೀ. ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಮಳೆ ವರದಿ ತಿಳಿಸಿದೆ.
ಈ ವರ್ಷ ಮಲೆನಾಡಿನ ಭಾಗದಲ್ಲಿ ಶೇ.11ರಷ್ಟು ಅಧಿಕ ಮಳೆ ಬಿದ್ದಿದ್ದು, ಇಲ್ಲಿ ವಾಡಿಕೆ 1556ಮಿ.ಮೀ.ನಷ್ಟು ಮಳೆ ಆಗಬೇಕಿತ್ತು. ಆದರೆ ವಾಸ್ತವದಲ್ಲಿ ವಾಡಿಕೆಗಿಂತ 1,725ಮೀ.ಮಿ. ಮಳೆ ಆಗಿದೆ. ಇನ್ನೂ ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 3101 ಮಿ.ಮೀ. ವಾಡಿಕೆಯಷ್ಟು ಮಳೆ (3107ಮೀ.ಮಿ.) ದಾಖಲಾಗಿದೆ.

ಸೆಪ್ಟಂಬರ್ನಲ್ಲಿ ದಕ್ಷಿಣ ಒಳನಾಡಿಗೆ ಶೇ.11ಮಳೆ ಕೊರತೆ
ಇನ್ನೂ ಸೆಪ್ಟಂಬರ್ ಒಂದು ತಿಂಗಳ ಮಳೆ ನೋಡುವುದಾದರೆ ಈ 30ದಿನದಲ್ಲಿ ಕರಾವಳಿಗೆ ಶೇ.22ರಷ್ಟು ಅಧಿಕ ಮಳೆ ಆಗಿದೆ. ಇಲ್ಲಿ 304ವಾಡಿಕೆ ಮಳೆಗಿಂತ 371ಮಿ.ಮೀ. ಬಿದ್ದಿದೆ. ನಂತರದ ಸ್ಥಾನದಲ್ಲಿ ಉತ್ತರ ಒಳನಾಡು ಇದ್ದು, ಇಲ್ಲಿ ಶೇ.14ರಷ್ಟು ಹೆಚ್ಚು ವರ್ಷಧಾರೆ ಸುರಿದಿದೆ. 142ಮಿ.ಮೀ. ವಾಡಿಕೆ ಮಳೆಗಿಂತ ಒಟ್ಟು 162ಮಿ.ಮೀ. ಮುಂಗಾರು ಆಗಿದೆ. ಮಲೆನಾಡಿನಲ್ಲಿ ವಾಡಿಕೆ (179ಮಿ.ಮೀ.)ಗಿಂತ 195ಮಿ.ಮೀ. ಮಳೆ ಆಗಿದ್ದು, ಒಟ್ಟು ಶೇ.9ರಷ್ಟು ಹೆಚ್ಚು ಮಳೆ ಆದಂತಾಗಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟಂಬರ್ ನಲ್ಲಿ ಶೇ.11ರಷ್ಟು ಮಳೆ ಕೊರತೆ ಆಗಿದೆ. ವಾಡಿಕೆ 136ಮಿ.ಮಿ. ವಾಡಿಕೆಯಷ್ಟು ಮಳೆಯಾಗದೇ ಕೇವಲ 121ಮಿ.ಮೀ. ಮಳೆ ಬಿದ್ದಿದೆ ಎಂದು ಮಳೆ ವರದಿ ತಿಳಿಸಿದೆ.

ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 2-3ದಿನ ತುಂತುರು, ಇಲ್ಲವೇ ಹಗುರದಿಂದ ಸಾಧಾರಣವಾಗಿ ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗೆ ಸೋಮವಾರ ಒಂದು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications