ಮುಂಗಾರು ಅಂತ್ಯ; ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆ
ಬೆಂಗಳೂರು, ಅಕ್ಟೋಬರ್ 01 : 2019ನೇ ಸಾಲಿನ ಮುಂಗಾರು ಋತು ಪೂರ್ಣಗೊಂಡಿದೆ. ದೇಶದಲ್ಲಿ ವಾಡಿಕೆಗಿಂತ ಶೇ 10ರಷ್ಟು ಹೆಚ್ಚು ಮಳೆಯಾಗಿದೆ. 4 ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ 1 ರಿಂದ ಸೆಪ್ಟೆಂಬರ್ 30ರ ತನಕ ದೇಶದಲ್ಲಿ ಮುಂಗಾರು ಋತು ಚಾಲ್ತಿಯಲ್ಲಿರುತ್ತದೆ. ದೇಶದ ರೈತರು ಬೆಳೆಗಳನ್ನು ಬೆಳೆಯಲು ಮುಂಗಾರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಆದ್ದರಿಂದ, ಮುಂಗಾರು ಮಳೆ ಎಷ್ಟು ಸುರಿದಿದೆ? ಎನ್ನುವುದು ಮುಖ್ಯವಾಗುತ್ತದೆ.
ಈ ವರ್ಷದ ಮುಂಗಾರು ಋತುವಿನಲ್ಲಿ ದೇಶದಲ್ಲಿ ಶೇ 10ರಷ್ಟು ಹೆಚ್ಚು ಮಳೆಯಾಗಿದೆ. ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆ ಸುರಿದಿದೆ. ದೇಶದ 4 ರಾಜ್ಯಗಳಲ್ಲಿ ಮಳೆಯ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಶೇ 90ರಷ್ಟು, ಮೈಸೂರಿನಲ್ಲಿ ಶೇ 67ರಷ್ಟು, ಶಿವಮೊಗ್ಗದಲ್ಲಿ ಶೇ 33ರಷ್ಟು, ಹಾವೇರಿಯಲ್ಲಿ ಶೇ 52ರಷ್ಟು, ಧಾರವಾಡ ಜಿಲ್ಲೆಯಲ್ಲಿ ಶೇ 42ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಈ ಬಾರಿ ಪ್ರವಾಹ ಉಂಟಾಗಿತ್ತು.

ಮುಂಗಾರು ಮಳೆ : ಎಲ್ಲಿ, ಎಷ್ಟು?
ಈ ವರ್ಷದ ಮುಂಗಾರು ಋತುವಿನಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಧಿಕ ಮಳೆಯಾಗಿದೆ. ವಾಡಿಕೆಗಿಂತ ಶೇ 32ರಷ್ಟು ಅಧಿಕ ಮಳೆ ರಾಜ್ಯದಲ್ಲಿ ಸುರಿದಿದೆ. 11 ರಾಜ್ಯದಲ್ಲಿ ಹೆಚ್ಚು ಮಳೆಯಾಗಿದೆ. 20 ರಾಜ್ಯಗಳಲ್ಲಿ ವಾಡಿಕೆಯಷ್ಟು ಮಳೆ ಸುರಿದಿದೆ. 4 ರಾಜ್ಯಗಳು ಮಳೆಯ ಕೊರತೆಯನ್ನು ಎದುರಿಸಿವೆ.

ಮಳೆ ಕೊರತೆಯ ರಾಜ್ಯಗಳು
ದೇಶದಲ್ಲಿ ಮುಂಗಾರು ಋತುವಿನಲ್ಲಿ ಶೇ 10ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 21, ಪಂಜಾಬ್ನಲ್ಲಿ ಶೇ 42, ದೆಹಲಿಯಲ್ಲಿ ಶೇ 35, ಮಣಿಪುರದಲ್ಲಿ ಶೇ 56ರಷ್ಟು ಮಳೆ ಕೊರತೆ ಎದುರಾಗಿದೆ.

ಕರ್ನಾಟಕದಲ್ಲಿ ಶೇ 23ರಷ್ಟು ಹೆಚ್ಚು ಮಳೆ
ಕರ್ನಾಟಕದಲ್ಲಿ ಮುಂಗಾರು ಋತುವಿನಲ್ಲಿ ಶೇ 23ರಷ್ಟು ಹೆಚ್ಚು ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಅಲ್ಲಿಂದ ಹರಿದು ಬಂದ ನೀರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಕರ್ನಾಟಕ ಸರ್ಕಾರದ ಮಾಹಿತಿ ಪ್ರಕಾರ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.

ಜಿಲ್ಲೆಯ ಮಳೆಯ ವಿವರಗಳು
ಕರ್ನಾಟಕದಲ್ಲಿ ಶಿವಮೊಗ್ಗದಲ್ಲಿ ಶೇ 33, ಮೈಸೂರು ಶೇ 67, ಮಂಡ್ಯ ಶೇ 37, ಚಿಕ್ಕಮಗಳೂರು ಶೇ 31, ಹಾವೇರಿ ಶೇ 52, ಗದಗ ಶೇ 21, ಧಾರವಾಡ ಶೇ 42, ಬೆಳಗಾವಿ ಶೇ 90, ಉತ್ತರ ಕನ್ನಡ ಶೇ 33ರಷ್ಟು ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.












Click it and Unblock the Notifications