Karnataka Rains: ವಾಯುಭಾರ ಕುಸಿತ, ಮುಂದಿನ 3 ದಿನ ಈ ಜಿಲ್ಲೆಗಳಿಗೆ ಮಳೆ, ಉಳಿದೆಡೆ ಒಣಹವೆ
ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ರಾಜ್ಯದ ಒಳನಾಡು ಪ್ರದೇಶದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ, ಕಡಿಮೆ ಒತ್ತಡದ ಪ್ರದೇಶ ಹಾಗೂ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ವ್ಯಾಪಕ ಮಳೆ ನಿರೀಕ್ಷೆ ಇದೆ. ಮತ್ತೊಂದೆಡೆ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಅಬ್ಬರವೇ ಮುಂದುವರಿಯಲಿದೆ. ಈಗಿನ ಬಿಸಿಲ ಝಳಕ್ಕೆ ಉತ್ತರ ಒಳನಾಡಿನ ಜನರು ತತ್ತರಿಸಿದ್ದಾರೆ.
ವಿವಿಧೆಡೆ ಸಮುದ್ರಮೇಲ್ಮೈ ಮತ್ತು ಹವಾಮಾನದಲ್ಲಿ ಬದಲಾವಣೆ ಆಗಿದೆ. ಅವುಗಳ ತೀವ್ರತೆ ಅಷ್ಟಾಗಿ ಇಲ್ಲದ್ದರಿಂದ ಭಾರೀ ಮಳೆ ಎಚ್ಚರಿಕೆ ಸದ್ಯಕ್ಕಿಲ್ಲ. ಮುಂದೆ ವೈಪರೀತ್ಯಗಳ ತೀವ್ರತೆ ಹೆಚ್ಚಾದಲ್ಲಿ ಧಾರಾಕಾರ ಮಳೆ ಸುರಿಯಲೂಬಹುದು. ಸದ್ಯ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಪೈಕಿ ಎರಡರಿಂದ ಮೂರು ದಿನ (ಮೇ 13) ಹಗುರದಿಂದ ಸಾಧಾರಣ ಮಳೆ ಎಚ್ಚರಿಕೆ ನೀಡಲಾಗಿದೆ. ರಾಜ್ಯಾದ್ಯಂತ ಒಣಹವೆ ಮೇಲುಗೈ ಸಾಧಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಭಾಗದಲ್ಲಿ ವ್ಯಾಪಕ ಮಳೆ ಸಾಧ್ಯತೆ
ಕೆಲವು ದಿನಗಳಿಂದ ಮಳೆ ಆಗುತ್ತಿರುವ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೂರು ದಿನ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಇದೇ ಅವಧಿಯಲ್ಲಿಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಗಂಟೆಗೆ ಸುಮಾರು 40-50 ರಿಂದ ಕಿಲೋ ಮೀಟರ್ ವೇಗದ ಜೋರು ಗಾಲಿ ಸಹಿತ ಸಾಮಾನ್ಯ ಮಳೆ ಸಂಭವವಿದೆ.
ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆ ಆಗಬಹುದು. ಉಳಿದಂತೆ ಗರಿಷ್ಠ ತಾಪಮಾನ, ಅತೀಯಾದ ಸೆಖೆಯ ವಾತಾವರಣ ನಿರ್ಮಾಣವಾಗಲಿದೆ. ಇನ್ನೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಶುಷ್ಕ ವಾತಾವರಣ ಕಂಡು ಬರಲಿದೆ ಎಂದು ರಾಜ್ಯ ಹವಾಮಾನ ತಜ್ಞರು ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.
ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ
ರಾಜ್ಯದ ಗರಿಷ್ಠ ತಾಪಮಾನ ಕೊಪ್ಪಳದಲ್ಲಿ 41 ಡಿಗ್ರಿ ಸೆಲ್ಸಿಯಸ್ ಕಲಬುರಗಿ, ಬೀದರ್, ವಿಜಯಪುರದಲ್ಲಿ ತಲಾ 39 ಡಿಗ್ರಿ ಸೆಲ್ಸಿಯಸ್, ರಾಯಚೂರು ಮತ್ತು ಹಾವೇರಿಯಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್, ಗದಗ, ಧಾರವಾಡ, ಕಾರವಾಡದಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತಾಪಮಾನದಲ್ಲಿ ಏರಿಕೆ ಸಂಭವ ಕುರಿತು ಯಾವುದೇ ಮುನ್ಸೂಚನೆಗಳಿಲ್ಲ. ಯಥಾಸ್ಥಿತಿ ಮುಂದುವರಿಯಲಿದೆ.
ಕಡಿಮೆ ಒತ್ತಡದ ಪ್ರದೇಶ, ಮೇಲ್ಮೈ ಸುಳಿಗಾಳಿ
ಮನ್ನಾರ್ ಕೊಲ್ಲಿ ಮತ್ತು ಶ್ರೀಲಂಕಾದ ಭಾಗದ ಸಮುದ್ರಮಟ್ಟದಿಂದ 5.8 ಕಿ.ಮೀ ವರೆಗೆ ಮೇಲ್ಮೈ ಸುಳಿಗಾಳಿ ಪರಿಚಲನೆ ಮುಂದುವರೆದಿದೆ. ಇದರಿಂದ ಮುಂದಿನ ಎರಡು ದಿನಗಳಲ್ಲಿ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣವಾಗುವ ಸಾಧ್ಯತೆ ಇದೆ.
ಇನ್ನೂ ವಾಯುಭಾರ ಕುಸಿತವು ಈಗ ಕರ್ನಾಟಕದ ಉತ್ತರ ಒಳನಾಡಿನಿಂದ ಮನ್ನಾರ್ ಕೊಲ್ಲಿ ಮತ್ತು ಶ್ರೀಲಂಕಾ ಕೇರಳ ಕರಾವಳಿಯ ಮೂಲಕ ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಪಸರಿಸಿದೆ. ಇದು ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿದೆ. ಇವುಗಳ ತೀವ್ರತೆ ಹೆಚ್ಚಾದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ.














Click it and Unblock the Notifications