Karnataka rain: ಇಂದು ರಾಜ್ಯದ ಈ ಭಾಗಗಳಲ್ಲಿ ಮಾತ್ರ ಗಡುಗು ಸಹಿತ ಮಳೆ ಆರ್ಭಟ: IMD ಮುನ್ಸೂಚನೆ
ಮಂಗಳೂರು, ಜೂನ್, 16: ಬಿಪರ್ಜಾಯ್ ಚಂಡಮಾರುತ ಹಿನ್ನೆಲೆ ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಅದರಲ್ಲೂ ಕರಾವಳಿ ಭಾಗದಲ್ಲಿ ಇದು ತೀವ್ರ ಸ್ವರೂಪ ಪಡೆಯುತ್ತಲೇ ಇದೆ. ಅಲ್ಲದೆ ಹಲವು ಜೀವಗಳನ್ನು ಬಲಿ ಪಡೆದ ಯಮಸ್ವರೂಪಿಯೂ ಆಗಿದೆ. ಮತ್ತೊಂದೆಡೆ ಮುಂಗಾರು ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ಗುರುವಾರ (ಜೂನ್ 15) ಭಾರೀ ಮಳೆಯಾಗಿದೆ. ಹಾಗೆಯೇ ಶುಕ್ರವಾರವೂ (ಜೂನ್ 16) ಕೆಲವು ಭಾಗಗಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಬೆಳ್ಳಗೆಯಿಂದಲೂ ಸಂಜೆವರೆಗೂ ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಆದರೆ ಸಂಜೆ ಬಳಿಕ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಕೂಡ ಮಳೆಯೇ ಇಲ್ಲದಂತಾಗಿತ್ತು. ಇನ್ನು ಇಂದು ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಮುಂದುವರೆದಿದ್ದು ಸಂಜೆ ವೇಳೆ ನಗರದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿನ್ನೆಯೂ ಕೂಡ ಸಂಜೆ ವೇಳೆಗೆ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹಲವಾಮಾನ ಇಲಾಖೆ ತಿಳಿಸಿತ್ತು. ಆದರೆ ನಗರದಲ್ಲಿ ರಾತ್ರಿಯಾದರೂ ಕೂಡ ಮಳೆಯೇ ಆಗಲಿಲ್ಲ. ಹಾಗಾದರೆ ಇಂದು ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಳೆಯಾಗುತ್ತದೆಯಾ ಎಂದು ಕಾದುನೋಡಬೇಕಿದೆ.
ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಶುಕ್ರವಾರ ಮತ್ತು ಶನಿವಾರ ಕರಾವಳಿ ಭಾಗದ ಹಲವು ಪ್ರದೇಶಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆಯಿದೆ. ಅಲ್ಲದೆ ಬೆಂಗಳೂರು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಹಾಸನ, ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಗುರುವಾರ (ಜೂನ್ 15) ಕರಾವಳಿಯ ಹಲವು ಭಾಗಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲದಲ್ಲಿ ತಲಾ 2 ಸೆಂ.ಮೀ. ಮಳೆ ಸುರಿದಿದೆ.
ಮತ್ತೊಂದೆಡೆ ದ.ಕನ್ನಡ ಜಿಲ್ಲೆಯ ಮಂಗಳೂರು, ಮಾಣಿ, ಪಣಂಬೂರು, ಸುಬ್ರಹ್ಮಣ್ಯ, ಮೂಲ್ಕಿ, ಬೆಳ್ತಂಗಡಿ, ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಕೋಟ, ಸಿದ್ದಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಂಕಿ, ಅಂಕೋಲಾ, ಗೇರುಸೊಪ್ಪದಲ್ಲಿ ತಲಾ 1 ಸೆಂ.ಮೀ. ಮಳೆ ಬಿದ್ದಿದೆ ಎಂದು ತಿಳಿಸಿದೆ.
ಹಾಗೆಯೇ ಇಂದು ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ಇರಲಿದೆ. ಇನ್ನು ಕರಾವಳಿ ಭಾಗರದಲ್ಲಿ ಗಾಳಿ ವೇಗ ಗಂಟೆಗೆ 40 ರಿಂದ 45 ಕಿ.ಮೀ.ನಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಂಭವ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಲಾಗಿದೆ.
ಅಲ್ಲದೆ ಮತ್ತೊಂದೆಡೆ ರಾಜ್ಯದಲ್ಲಿನ ತಾಮಮಾನದಲ್ಲಿ ಹೆಚ್ಚಿನ ಬದಲಾವಣೆಗಳು ಆಗಿಲ್ಲ. ಅತೀ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ ಎಂದು ತಿಳಿಸಿದೆ.
ಇನ್ನು ಬಿಪರ್ಜಾಯ್ ಚಂಡಮಾರುತದ ಪ್ರಭಾವ ಹಿನ್ನೆಲೆ ನಿನ್ನೆ ಗುಜರಾತ್ನ ಹಲವೆಡೆ ಭಾರೀ ಮಳೆ ಬಿದ್ದಿದೆ. ಗುರುವಾರ ಸಂಜೆಯಿಂದ ಗುಜರಾತ್ ಕರಾವಳಿಯಲ್ಲಿ ಗಾಳಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಬೀಸುತ್ತಿರುವುದರಿಂದ ಧಾರಾಕಾರ ಮಳೆ ಸುರಿಯುತ್ತಲೇ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಜನರಿಗೆ ಬಿಪರ್ಜಾಯ್ ಚಂಡಮಾರುತದ ಪ್ರಭಾವದಿಂದ ಈಗಾಗಲೇ ರಾಜ್ಯದ ಕರಾವಳಿ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಹಲವು ಕಡೆಗಳಲ್ಲಿ ಮುಂಗಾರು ಪ್ರವೇಶ ಆದರೂ ಕೂಡ ಮಳೆ ಬಾರದೇ ಜನರು ಮೋಡದತ್ತ ಮುಖ ಮಾಡಿ ಕುಳಿತುಕೊಂಡಿದ್ದಾರೆ. ಹಾಗೆಯೇ ಕೆಲವೆಡೆ ಕೃಷಿಕರು ಮಳೆ ಇಲ್ಲದೆ ಬೇಸಿಗೆ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಜೊತೆಗೆ ಈಗಲೂ ಹಲವು ಜಿಲ್ಲೆಗಳಲ್ಲಿ ಮಳೆಗಾಗಿ ವಿಶೇಷ ಆಚರಣೆಗಳನ್ನು ಮಾಡುತ್ತಲೇ ಇದ್ದಾರೆ.












Click it and Unblock the Notifications