Karnataka Rain: ತೀವ್ರ ಸ್ವರೂಪ ಪಡೆದ ಬಿಪರ್ಜಾಯ್, ರಾಜ್ಯದ ಈ ಜಿಲ್ಲೆಗಳಲ್ಲೇ ಹೆಚ್ಚು ಮಳೆ, ಹುಷಾರು.!
ಕರ್ನಾಟಕ, ಜೂನ್, 14: ಕರ್ನಾಟಕ ರಾಜ್ಯಕ್ಕೆ ಈಗಾಗಲೇ ಮುಂಗಾರು ಮಳೆ ಪ್ರವೇಶ ನೀಡಿದೆ. ಈ ಹಿನ್ನೆಲೆ ಹಲವೆಡೆ ಅನ್ನದಾತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇನ್ನು ಕೆಲವೆಡೆ ಮಾತ್ರ ಮಳೆ ಇಲ್ಲದಂತಾಗಿದ್ದು, ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಮುಂಗಾರು ಬಂದರೂ ಸಹ ಕೆಲವು ಪ್ರದೇಶಗಳಲ್ಲಿ ಬಿಸಿಲಿನ ಧಗೆ ಮಾತ್ರ ಕಡಿಮೆ ಆಗುತ್ತಿಲ್ಲ. ಮತ್ತೊಂದೆಡೆ ನೋಡುವುದಾದರೆ ಇಂದು ರಾಜ್ಯದ ಹಲವು ಭಾಗಗಗಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯಲಿದ್ದಾನೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ (ಜೂನ್ 13) ಬೆಳಗ್ಗೆ ಮೋಡ ಕವಿದ ವಾತಾವಾರಣ ನಿರ್ಮಾಣವಾಗಿತ್ತು. ಆದರೆ ಬೆಳಗ್ಗೆ 9 ಗಂಟೆ ಸುಮಾರಿಗೆ ಮತ್ತೆ ದೀಢೀರ್ ಬಿಸಿಲಿನ ವಾತಾವರಣ ನಿರ್ಮಾಣ ಆಗಿತ್ತು. ನಂತರ ಸಂಜೆ 5 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಬರುವ ಎಲ್ಲಾ ಮುನ್ಸೂಚನೆಗಳು ಇದ್ದವು. ಆದರೆ ನಗರದ ಕೆಲವೆಡೆ ಮಾತ್ರ ಜಿನುಗು ಮಳೆಯಾಗಿದೆ ಅಷ್ಟೇ.

ಹಾಗೆಯೇ ಇಂದು (ಜೂನ್ 14) ನಗರದಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಸಂಜೆ ವೇಳೆಗೆ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಲ್ಲದೆ ಸಿಲಿಕಾನ್ ಸಿಟಿ ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆ ಬೀಳುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ.
ರಾಜ್ಯದ ಹಲವು ಭಾಗಗಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗಿದ್ದು, ಜೂನ್ 14, ಜೂನ್ 15ರಂದು ಸಹ ಮಳೆ ಮುಂದುವರೆಯಲಿದೆ. ರಾಜ್ಯಕ್ಕೆ ಮುಂಗಾರು ಆಗಮನ ಆಗಿರುವ ಹಿನ್ನೆಲೆ ಕರಾವಳಿಯ ಬಹುತೇಕ ಜಿಲ್ಲೆಗಳು, ದಕ್ಷಿಣ ಒಳನಾಡಿನ ಕೆಲವು ಕಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಬಿದ್ದಿದ್ದು, ಬೆಂಗಳೂರು ಸಮೀಪದ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ತುಂತುರು ಮಳೆ ಆಗಿದೆ ಎಂದು ತಿಳಿಸಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ತುಮಕೂರು ಜಿಲ್ಲೆಯ ತಿಪಟೂರು, ಮಡಿಕೇರಿಯ ಗೋಣಿಕೊಪ್ಪಲುನಲ್ಲಿ ತಲಾ 4 ಸೆ.ಮೀ. ಮಳೆಯಾಗಿದೆ. ಕೋಟ, ಹೊನ್ನಾವರ, ಮಂಗಳೂರು, ಮಾಲೂರಿನಲ್ಲಿ 3, ಅಂಕೋಲಾ, ಮಂಕಿ, ಬೆಳ್ತಂಗಡಿ, ಬೆಂಗಳೂರು ನಗರ, ಹುಣಸೂರು 2, ಕದ್ರಾ, ಬೇಲಿಕೇರಿ, ಪುತ್ತೂರು, ಕುಂದಾಪುರ, ಬೆಂಗಳೂರಿನ ಜ್ಞಾನಭಾರತಿ ವಿವಿ ಕ್ಯಾಂಪಸ್, ದೊಡ್ಡಬಳ್ಳಾಪುರ, ತಿ.ನರಸೀಪುರ, ಸರಗೂರು, ಭಾಗಮಂಡಲ, ಕೊಟ್ಟಿಗೆಹಾರದಲ್ಲಿ 2 ಸೆಂ.ಮೀಟ. ಮಳೆ ಸುರಿಸಿದೆ ಎಂದು ತಿಳಿಸಿದೆ.
ಹಾಗೆಯೇ ಇಂದು ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40ರಿಂದ 45 ಕಿ.ಮೀನಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ಸದ್ಯ ಗಾಳಿಯ ವೇಗವು ಕರಾವಳಿ, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿ. ಮೀ. ಇರಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಮತ್ತೊಂದೆಡೆ ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ಬಿಪರ್ಜಾಯ್ ಚಂಡಮಾರುತದ ಅಬ್ಬರವು ತೀವ್ರಗೊಳ್ಳುತ್ತಲೇ ಇದೆ. ಆದ್ದರಿಂದ ಈಗಾಗಲೇ ಗುಜರಾತ್ನ ಕರಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆಯಿದಿರುವಂತೆ ಜನರಿಗೆ ಸೂಚಿಸಲಾಗಿದೆ. ಅಲ್ಲದೆ ಕೆಲವರನ್ನು ಬೇರೆಡೆಗೆ ಸ್ಥಳಾಂತರವನ್ನು ಕೂಡ ಮಾಡಲಾಗಿದೆ.
ಇನ್ನು ಕರಾವಳಿ ಭಾಗದಲ್ಲಿ ಬಿಪರ್ಜಾಯ್ನ ಚಂಡಮಾರುತದ ಪ್ರಭಾವವವು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆಯುತ್ತಲೇ ಇದೆ. ಇದರಿಂದ ಈಗಾಗಲೇ ಹಲವರು ಪ್ರಾಣವನ್ನು ಕೂಡ ಕಳೆದುಕೊಂಡ ಘಟನೆಗಳು ನಡೆದಿವೆ. ಅದರಲ್ಲೂ ಅರಬ್ಬೀ ಸಮುದ್ರದ ಭಾಗರದಲ್ಲಿ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಎನ್ಡಿಆರ್ಎಫ್ ತಂಡವು ಕರಾವಳಿ ಭಾಗದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.












Click it and Unblock the Notifications