Karnataka Rain: ರಾಜ್ಯದ ಗರಿಷ್ಠ ತಾಪಮಾನ 37 °C ಗೆ ಏರಿಕೆ, ಎಲ್ಲೆಲ್ಲಿ ಎಷ್ಟು ಬಿಸಿಲಿದೆ?
ಬೆಂಗಳೂರು, ಫೆಬ್ರವರಿ 17: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಭಾಗಗಳಲ್ಲಿ ಶುಷ್ಕ ವಾತಾವರಣ ಆವರಿಸಿದೆ. ಈ ಮಧ್ಯೆ ರಾಜ್ಯದ ಕೆಲವು ಕಡೆಗಳಲ್ಲಿ ಮಳೆ ಬರುವುದಾಗಿ ಹೇಳಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಇತ್ತೀಚೆಗೆ ಮಳೆ ಮುನ್ಸೂಚನೆ ನೀಡಿತ್ತು. ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆ ಮುನ್ಸೂಚನೆ ಇಲ್ಲ ಎನ್ನಲಾಗಿದೆ. ಗರಿಷ್ಠ ತಾಪಮಾನ, ಒಣ ಹವೆ ಎಚ್ಚರಿಕೆ ನೀಡಲಾಗಿದೆ. ರಾಜ್ಯ ಗರಿಷ್ಠ ತಾಪಮಾನ ಎಷ್ಟು? ನಿಮ್ಮ ಜಿಲ್ಲೆಗಳಲ್ಲಿ ತಾಪಮಾನ ಎಷ್ಟಿದೆ? ಮುನ್ಸೂಚನೆ ವರದಿ ಇಲ್ಲಿದೆ.
ರಾಜ್ಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಿಸಿಲಿನ ಝಳ ಶುರುವಾಗಿದೆ. ನಿರಂತರ ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ. ಫೆಬ್ರವರಿ ಆರಂಭದ ದಿನಗಳಿಂದಲೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ಕಂಡು ಬಂದಿತ್ತು. ಅದೀಗ ಮುಂದುವರಿದಿದೆ. ತಾಪಮಾನದಲ್ಲಿ ನಿರಂತರ ಏರಿಕೆ ಆಗುತ್ತಿದೆ.

ಬೆಂಗಳೂರಿನಲ್ಲಿ ವಾಡಿಕೆಗಿಂತ 2.7 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ದಾಖಲಾಗುತ್ತಿದೆ. ಇದೇ ರೀತಿ ಉತ್ತರ ಕರ್ನಾಟಕದಲ್ಲಿ ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ತೊಗರಿ ಕಣಜ ಕಲಬುರಗಿಯಲ್ಲಿ ಅತ್ಯಧಿಕ ಉಷ್ಣ ಅಲೆ ನಿರ್ಮಾಣವಾಗಿದೆ.
ಇನ್ನೂ ಬೇಸಿಗೆ ಆರಂಭದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಅನೇಕ ಕಡೆಗಳಲ್ಲಿ ಇದೇ ರೀತಿ ಗರಿಷ್ಠ ತಾಪಮಾನ ದಾಖಲಾಗುವ ಸಂಭವವಿದೆ. ಕಲಬುರಗಿ ಹೊರತಾಗಿ, ದಾವಣಗೆರೆಯಲ್ಲಿ 36.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅನೇಕ ಜಿಲ್ಲೆಗಳಲ್ಲಿ 33-34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಗದಗ 35, ಮೈಸೂರು 34, ಆಗುಂಬೆ 34, ಕಾರವಾರ 35, ವಿಜಯಪುರ, ಬಾಗಲಕೋಟೆ, ಹಾವೇರಿ, ಧಾರವಾಡದಲ್ಲಿ ತಲಾ 34, ರಾಯಚೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್, ಹಾಸನ 33, ಚಿತ್ರದುರ್ಗ 33, ಪೆಣಂಬೂರು, ಹೊನ್ನಾವರ, ಬೀದರ್ ಮತ್ತು ಬೆಳಗಾವಿ ಭಾಗಗಳಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.
ವಿಶೇಷವೇನೆಂದರೆ, ಬೆಳಗ್ಗೆ ಮತ್ತು ರಾತ್ರಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಚಳಿ ಮತ್ತು ತಂಪಿನ ಅನುಭವವಾಗುತ್ತಿದೆ. ಒಂದು ಕಡೆ ಬೇಸಿಗೆ ಆರಂಭವಾಗಿದೆ. ಮತ್ತೊಂದೆಡೆ ಚಳಿ ವಾತವರಣ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಬೆಳ್ಳಂಬೆಳಗ್ಗೆ, ರಾತ್ರಿ ತಂಪು ವಾತಾವರಣ ಕಂಡು ಬರುತ್ತಿದೆ. ಸದ್ಯಕ್ಕೆ ಸೆಕೆಯ ಅನುಭವವಾಗುತ್ತಿಲ್ಲ. ಹೀಗಾಗಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಾಣದೇ ಸಹಜವಾಗಿದೆ.












Click it and Unblock the Notifications