Karnataka Rain Alert: ಮಾರ್ಚ್ 25ರವರೆಗೆ ಈ ಜಿಲ್ಲೆಗಳಿಗೆ ವ್ಯಾಪಕ ಮಳೆ, ತಾಪಮಾನ ಇಳಿಕೆ ಮುನ್ಸೂಚನೆ, ಅಪ್ಡೇಟ್
ಬೆಂಗಳೂರು, ಮಾರ್ಚ್ 19: ಬಿರು ಬೇಸಿಗೆ ಮಧ್ಯೆ ಕರ್ನಾಟಕದ ಕೆಲವೆಡೆ ಈಗಾಗಲೇ ಮಳೆ ತಂಪೆರೆದಿದೆ. ಮಾರ್ಚ್ 25ರ ವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಲಿದೆ ಎಂದು ಭಾರತಿಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಮುನ್ಸೂಚನೆಯಲ್ಲಿ ತಿಳಿಸಿದೆ.
ಹವಾಮಾನ ಇಲಾಖೆಯ ಪ್ರಕಾರ, ಇಂದಿನಿಂದ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ಮಳೆ ಬರಲಿದೆ ಎಂದು ತಿಳಿಸಲಾಗಿದೆ. ಗುಡುಗು ಸಹಿತ ಒಂದೆರಡು ಕಡೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದೆ.

ಹವಾಮಾನದಲ್ಲಿ ತೀವ್ರ ತರಹದ ಬದಲಾವಣೆಗಳು ಆಗಿವೆ. ಸಮುದ್ರ ಮೇಲ್ಮೈ ಸುಳಿಗಾಳಿಯ ತೀವ್ರತೆ ಹೆಚ್ಚಾದ ಪರಿಣಾಮ ಮಳೆಯಾಗುತ್ತಿದೆ. ಇಂದಿನಿಂದ (ಮಾರ್ಚ್ 19-21) ಮೂರು ದಿನ ಒಳನಾಡು ಜಿಲ್ಲೆಗಳಾದ ಬೀದರ್, ರಾಯಚೂರು ಮತ್ತು ಕೊಪ್ಪಳದ ಕೆಲವೆಡೆ ಮಳೆ ಸುರಿಯಲಿದೆ.
ಮಾರ್ಚ್ 22ರಂದು ಇಲ್ಲೆಲ್ಲಾ ವ್ಯಾಪಕ ಮಳೆ
ಮಾರ್ಚ್ 22ರಂದು ಕೊಪ್ಪಳ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಚಿತ್ರದುರ್ಗದಲ್ಲಿ ಮಳೆ ಆರ್ಭಟಿಸಲಿದೆ. ಉತ್ತಮ ಮಳೆಯಾಗಲಿದ್ದು, ಇಲ್ಲೆಲ್ಲಾ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬರಲಿದೆ.

ಈ ಮೇಲಿನ ಜಿಲ್ಲೆಗಳ ಉಳಿದ ಪ್ರದೇಶಗಳಲ್ಲಿ ವಾತಾವರಣ ಸಾಮಾನ್ಯವಾಗಿರಲಿದೆ. ಆದರೆ ಮಳೆಯ ಆಗಮನದಿಂದಾಗಿ ಉದ್ದೇಶಿತ ಸ್ಥಳಗಳಲ್ಲಿನ ತಾಪಮಾನ ಇಳಿಕೆ ಆಗುವ ಸಂಭವವಿದೆ.
ಮಾರ್ಚ್ 25 ತನಕ ಈ ಜಿಲ್ಲೆಗಳಿಗೆ ಮಳೆ, ತಾಪಮಾನ ಇಳಿಕೆ?
ನಂತರ ಮಾರ್ಚ್ 23ರಿಂದ ಮಾರ್ಚ್ 25ರವರೆಗೆ ಮೂರು ದಿನ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಜಿಲ್ಲೆಗಳು ಒಳಗೊಂಡಂತೆ ಒಂದು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ವಿವಿಧೆಡೆ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿ ಸೇರಿದಂತೆ ಒಳನಾಡು ಭಾಗದಲ್ಲಿ ಉಂಟಾಗಿದ್ದ ಶಾಖ ಅಲೆಯ ವಾತಾವರಣ ತುಸು ಇಳಿಕೆ ಆಗಲಿದೆ. ಆಗಾಗ ಬಿಸಿಲು ಕಂಡರೂ ಸಹಿತ ಅಷ್ಟಾಗಿ ಗರಿಷ್ಠ ತಾಪಮಾನ ಇರಲಾರದು ಎನ್ನಲಾಗಿದೆ. ಮಳೆಯ ಆಗಮಿಸುವಿಕೆ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಇಳಿಕೆ ಆಗಲಿದೆ.
ಬೀದರ್, ಕಲಬುರಗಿಯಲ್ಲಿ ಜೋರು ಮಳೆ
ರಾಜ್ಯದಲ್ಲಿ ಒಂದೆರಡು ದಿನಗಳಿಂದ ಬೀದರ್, ಕಲಬುರಗಿ, ಕೊಡಗು ಜಿಲ್ಲೆಗಳ ಹಲವೆಡೆ ಜೋರು ಮಳೆ ದಾಖಲಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನ, ಜಾನುವಾರುಗಳಿಗೆ ಈ ತಾತ್ಕಾಲಿಕ ಮಳೆಯಿಂದ ತುಸು ನೆಮ್ಮದಿ ಸಿಕ್ಕಂತಾಗಿದೆ. ಹಲವು ನಿಮಿಷಗಳ ಕಾಲ ಬಂದ ಮಳೆಗೆ ವಾತಾವರಣ ತಂಪಾಗಿದೆ. ಹಲವರು ಈ ಕುರಿತ ವಿಡಿಯೋ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಕಾಲಿಕ ಮಳೆ ತಂಪು ತಂದಿದೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯದ ವಿವಿಧೆಡೆ ತಾಪಮಾನ ಇಳಿಕೆ ಆಗಿದ್ದು, ತಂಪು ವಾತಾವರಣದ ಅನುಭವವಾಗುತ್ತಿದೆ. ಕೊಡುಗು, ಬೀದರ್, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇರೆಡೆಗಿಂತ ಅಧಿಕ ಮಳೆ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಹ ಮಳೆ ವಾತಾವರಣ ನಿರ್ಮಾಣ ಆಗುತ್ತಿದೆ. ಗರಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದೆ. ನಗರದ ಒಂದೆರಡು ಕಡೆಗಳಲ್ಲಿ ಎರಡು ಮೂರು ದಿನ ಮಳೆ ಬರುವ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.












Click it and Unblock the Notifications