Karnataka Rains: ರಾಜ್ಯದ ಈ ಭಾಗದಲ್ಲಿ ಮಳೆ ಮುನ್ಸೂಚನೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ
ಬೆಂಗಳೂರು, ಮಾರ್ಚ್ 03: ಕರ್ನಾಟಕ ರಾಜ್ಯದಲ್ಲಿ ಒಂದೆಡೆ ಬಿಸಿ ಗಾಳಿಯು ಏರುಗತಿಯಲ್ಲಿ ಸಾಗಿದೆ. ಮತ್ತೊಂದೆಡೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಮೂರು ನಾಲ್ಕು ಬಾರಿ ವಿವಿಧ ಜಿಲ್ಲೆಗಳ ಕೆಲವೆಡೆ ಮಳೆರಾಯ ತಂಪೆರೆದಿದ್ದಾನೆ. ನಾಳೆ ಮಂಗಳವಾರ ಮತ್ತು ಬುಧವಾರ (ಮಾರ್ಚ್ 04 ಮತ್ತು 05) ಮತ್ತೆ ಹಲವೆಡೆ ಹಗುರ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಉಷ್ಣ ಅಲೆ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಂದೂ ಮಹಾಸಾಗರದ ಪಶ್ಚಿಮ ಈಕ್ವಟೋರಿಯಲ್ ಹಾಗೂ ಪಕ್ಕದ ಮಾಲ್ಡೀವ್ಸ್ ಪ್ರದೇಶದ ಮೇಲಿನ ಚಂಡಮಾರುತದ ಪರಿಚಲನೆಯು ಮುಂದುವರಿಯಲಿದೆ. ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದಲ್ಲಿದೆ. ಇದು ನೈಋತ್ಯದತ್ತ ಬೀಸುವ ಸಾಧ್ಯತೆ ಇದೆ.

ಮತ್ತೊಂದು ಒಂದು ಚಂಡಮಾರುತದ ಪರಿಚಲನೆಯು ಮನ್ನಾರ್ ಗಲ್ಫ್ ಮತ್ತು ಅದರ ಪಕ್ಕದ ಪ್ರದೇಶದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿದೆ. ಈ ಕಾರಣದಿಂದ ರಾಜ್ಯದ ಒಂದೆರಡು ಜಿಲ್ಲೆಗಳ ವಿವಿಧೆಡೆ ತುಂತುರು ಇಲ್ಲವೇ ಹಗುರ ಮಳೆ ಆಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್ 04ರಂದು ಮೂರು ಜಿಲ್ಲೆಗಳಿಗೆ ಒಣಹವೆ ಹಿನ್ನೆಲೆಯಲ್ಲಿ ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ.
ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಉಷ್ಣ ಅಲೆಯ ಕಾವು ಮುಂದುವರಿದಿದೆ. ಕರಾವಳಿಯಲ್ಲೂ ಸಹ ಉಷ್ಣ ಅಲೆ ಇದೆ. ಈ ಮಧ್ಯೆ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನ ಜಿಲ್ಲೆಗಳ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಮಾನ್ಯ ಮಳೆ ಆಗುವ ಸಾಧ್ಯತೆ ಇದೆ. ಇದರ ಹೊರತು ಎಲ್ಲಿಯೂ ಭಾರೀ ಮಳೆ ಆಗುವ ಲಕ್ಷಣಗಳು ಇಲ್ಲ ಎಂದು ಮುನ್ಸೂಚನೆ ನೀಡಿದೆ.
ಒಳನಾಡು ಜಿಲ್ಲೆಗಳಲ್ಲಿ ಮುಂದುವರಿದ ಬಿಸಿ ಅಲೆ
ಮಳೆ ಉದ್ದೇಶದ ಕೆಲವು ಸ್ಥಳ ಬಿಟ್ಟು ಉಳಿದಂತೆ ರಾಜ್ಯಾದ್ಯಂತ ಒಣಹವೆ ಪ್ರಮಾಣ ಹೆಚ್ಚಾಗಿದ್ದು. ಎಲ್ಲೆಡೆ ಅಧಿಕ ತಾಪಮಾನ ದಾಖಲಾಗುತ್ತಿದೆ. ಇಂದು ಸೋಮವಾರ ಕನಿಷ್ಠ ತಾಪಮಾನ ಕರಾವಳಿಯಲ್ಲಿ 23-26 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇನ್ನೂ ಉತ್ತರ ಒಳನಾಡಿನ ಬೆಳಗಾವಿ ವಿಮಾನ ನಿಲ್ದಾಣ, ಬೀದರ್ ಮತ್ತು ಧಾರವಾಡ ತಲಾ 16-18 ಡಿ.ಸೆ, ಬೆಳಗಾವಿ ನಗರ, ವಿಜಯಪುರ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ಹಾವೇರಿ ಮತ್ತು ಬಾಗಲಕೋಟೆ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 19 ರಿಂದ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ 15 ರಿಂದ 18 ಡಿಗ್ರಿ ಸೆಲ್ಸಿಯಸ್ ದಕ್ಷಿಣ ಒಳನಾಡಿನ ಬೆಂಗಳೂರು, ಆಗುಂಬೆ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಚಿಂತಾಮಣಿ, ಮಂಡ್ಯ, ಮಡಿಕೇರಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಕನಿಷ್ಠ ತಾಪಮಾನ 19-22 ಡಿಗ್ರಿ ಸೆಲಿಯಸ್ ನಷ್ಟು ದಾಖಲಾಗಿದೆ.
ಕನಿಷ್ಠ ತಾಪಮಾನದಲ್ಲಿ ಹೆಚ್ಚಳ
ಕಳೆದ 24 ಗಂಟೆಗಳಲ್ಲಿ ಕರಾವಳಿಯ ಕಾರವಾರ +2.2 °C, ಉತ್ತರ ಒಳನಾಡಿನ ವಿಜಯಪುರದಲ್ಲಿ +2.3 °C ಮತ್ತು ದಕ್ಷಿಣ ಒಳನಾಡಿನ ಮಡಿಕೇರಿಯಲ್ಲಿ +2.5°C ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಏರಿಕೆ ಆಗಿದೆ. ಉತ್ತರ ಒಳನಾಡಿನ ರಾಯಚೂರಿನಲ್ಲಿ ಕನಿಷ್ಠ ತಾಪಮಾನದಲ್ಲಿ (-2.4 ° C) ಇಳಿಕೆ ಆಗಿದೆ. ಇವುಗಳ ಹೊರತು ರಾಜ್ಯದ ಉಳಿದ ಭಾಗದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಕನಿಷ್ಠ ತಾಪಮಾನದಲ್ಲೇ ಈ ಮಟ್ಟದಲ್ಲಿ ಏರಿಕೆ ಆಗಿದೆ.
ಕರಾವಳಿ ಜಿಲ್ಲೆಗೆ ಉಷ್ಣ ಅಲೆ: ಹಳದಿ ಎಚ್ಚರಿಕೆ
ಇನ್ನೂ ಕಾರವಾರ ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚಾಗಿದೆ. ಉಳಿದೆಡೆ 32ರಿಂದ 36 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಕಂಡು ಬಂದಿದೆ. ನಾಳೆ ಮಂಗಳವಾರ ಮಾರ್ಚ್ 4 ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳಿಗೆ ಶುಷ್ಕ ವಾತಾವರಣ ಹಿನ್ನೆಲೆಯಲ್ಲೆ ಆರೆಂಜ್ ಅಲರ್ಟ್ ನೀಡಲಾಗಿದೆ.












Click it and Unblock the Notifications