Karnataka Rains : ವಾಯುಭಾರ ಕುಸಿತ ತೀವ್ರವಾದರೆ ರಾಜ್ಯಕ್ಕೆ ಭಾರಿ ಮಳೆ ಸಾಧ್ಯತೆ, ಅಲ್ಲಿವರೆಗೆ ಒಣಹವೆ: IMD
ಬೆಂಗಳೂರು, ಡಿಸೆಂಬರ್ 14: ಮಾಂಡೌಸ್ ಚಂಡಮಾರುತದ ಅಬ್ಬರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ಸಾಧಾರಣ ಮತ್ತು ತುಂತುರು ಮಳೆ ಆಗಿತ್ತು. ಇದೀಗ ಡಿಸೆಂಬರ್ 15ರಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಒಂದು ವಾರದಿಂದ ಚಂಡಮಾರುತದ ಪ್ರಭಾವದಿಂದ ರಾಜ್ಯದೆಲ್ಲಡೆ ಮಳೆ ಹೆಚ್ಚಾಗಿತ್ತು. ಅದರಿಂದ ನಿರಂತರವಾಗಿ ಮಳೆ, ಚಳಿ ವಾತವರಣ ನಿರ್ಮಾಣವಾಗಿತ್ತು. ಇದರಿಂದ ಜನ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಚಳಿ, ಮೋಡ ಕವಿದ ವಾತಾವರಣ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಡಾ.ಪ್ರಸಾದ್ ತಿಳಿಸಿದ್ದಾರೆ.
Bengaluru Rains : ಮಾಂಡೌಸ್ ಪರಿಣಾಮ: ಬೆಂಗಳೂರು ಸೇರಿ ಹಲವೆಡೆ ಮಳೆ
ಮುನ್ಸೂಚನೆ ಪ್ರಕಾರ, ನಾಳೆ ಡಿಸೆಂಬರ್ 15ರಂದು ದಕ್ಷಿಣ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಲಿದೆ. ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ 5.8ಕಿಲೋ ಮೀಟರ್ ಎತ್ತರದ ಸುಳಿಗಾಳಿ ಕರ್ನಾಟಕ ಕರಾವಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದರಿಂದ ಅದರ ಪ್ರಭಾವ ಉಂಟಾಗುವುದಿಲ್ಲ. ಈ ಕಾರಣಕ್ಕೆ ಗುರುವಾರ ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಬೀಳಲಿದೆ. ಉತ್ತರ ಒಳನಾಡಿನಲ್ಲಿ ಒಂದೆರಡು ಕಡೆಗಳ ಮಳೆ ಆಗಲಿದೆ. ಶುಕ್ರವಾರದಿಂದ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಅಂಡಮಾನ್ ಸಮುದ್ರದಲ್ಲಿನ ವಾಯುಭಾರ ಗುರುವಾರ ಬೆಳಗ್ಗೆ ಹೊತ್ತಿಗೆ ತೀವ್ರಗೊಂಡಿದ್ದೇ ಆದರೆ ರಾಜ್ಯದ ಎಲ್ಲ ಭಾಗಗಳಿಗೂ ಮುಂದಿನ ಐದು ದಿನ ವ್ಯಾಪಕ ಮಳೆ ನಿರೀಕ್ಷಿಸಬಹುದಾಗಿದೆ. ಕಳೆದ 24ಗಂಟೆಯಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ 1ಸೆಂ.ಮೀ. ನಷ್ಟು ಮಳೆ ದಾಖಲಾಗಿದೆ. ಜೊತೆಗೆ ಉಡುಪಿ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ ಸೇರಿದಂತೆ ಕೆಲವೆಡೆ ಜೋರು ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಬುಧವಾರ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ಬೆಳಗ್ಗೆ ಮತ್ತು ರಾತ್ರಿ ವಿಪರೀತ ಚಳಿ ಕಂಡು ಬರುತ್ತಿದೆ. ಮುಂದಿನ ಎರಡು ದಿನ ಒಂದೆರಡು ಪ್ರದೇಶಗಳಲ್ಲಿ ಜೋರು ಮತ್ತು ಕೆಲವೆಡೆ ತುಂತುರು ಮಳೆ ಆಗುವ ಸಂಭವವಿದೆ. ಇದರ ಹೊರತು ಯಾವುದೇ ಗಂಭೀರ ಬದಲಾವಣೆಗಳು ಸದ್ಯಕ್ಕೆ ಇಲ್ಲ ಎಂದು ಡಾ.ಪ್ರಸಾದ್ ತಿಳಿಸಿದ್ದಾರೆ.