Karnataka Rain Alert: ರಾಜ್ಯಾದ್ಯಂತ ಮತ್ತೆ ವರುಣಾರ್ಭಟ ಮುನ್ಸೂಚನೆ, ಭಾರೀ ಮಳೆ! ಯೆಲ್ಲೋ ಅಲರ್ಟ್
ಬೆಂಗಳೂರು, ಸೆಪ್ಟಂಬರ್ 23: ಕರ್ನಾಟಕ ರಾಜ್ಯದಾದ್ಯಂತ ಮುಂಗಾರು ಮಳೆ ಮತ್ತೆ ಅಬ್ಬರಿಸುವ ಎಲ್ಲ ಲಕ್ಷಣಗಳು ಕಾಣಿಸಿವೆ. ತಾತ್ಕಾಲಿಕವಾಗಿ ವಿರಾಮ ನೀಡಿದ್ದ ಮಳೆ ಕರಾವಳಿ, ಮಲೆನಾಡು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವೆಲ್ಲ ಜಿಲ್ಲೆಗಳಿಗೆ ಯಾವತ್ತಿನಿಂದ ಮಳೆ ಸಂಭವವಿದೆ?
ಕಳೆದ ಎರಡು ವಾರಗಳಿಂದ ಕರಾವಳಿ ಹಾಗೂ ಮಲೆನಾಡನ್ನು ಹೊರತುಪಡಿಸಿ ಕೇವಲ ಒಳನಾಡು ಜಿಲ್ಲೆಗಳಲ್ಲಿ ಆಗಾಗ ಮಳೆ ಆಗುತ್ತಿತ್ತು. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಈಗಾಗಲೇ ಸಕ್ರಿಯವಾಗಿದೆ. ಇಂದಿನಿಂದ ವಿವಿಧ ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಸೆಪ್ಟಂಬರ್ 27ರಿಂದ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನ ಜಿಲ್ಲೆಗಳಿಗೂ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ. ಸೆಪ್ಟಂಬರ್ 27ರಿಂದ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟಿಸಲಿದೆ. ಮೂರು ದಿನ ಗರಿಷ್ಠ 115 ಮಿಲಿ ಮೀಟರ್ ವರೆಗೆ ಮಳೆ ಆಗಲಿದ್ದು, ಎಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದಾಗಿ ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಅಂದರೆ ಒಡಿಶಾ ಹಾಗೂ ಆಂಧ್ರ ಪ್ರದೇಶ ಕರಾವಳಿ ಭಾಗದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಚಂಡಮಾರುತ ಪ್ರಸರಣದ ತೀವ್ರತೆಯಿಂದ ಮುಂಗಾರು ಮಳೆ ಋತುವಿನ ಅಂತ್ಯಕ್ಕೆ ಮತ್ತೆ ಸಕ್ರಿಯವಾಗಿದೆ. ಇದಲ್ಲದೇ ಕಡಿಮೆ ಒತ್ತಡದ ಪ್ರದೇಶ ಸಹ ನಿರ್ಮಾಣವಾಗುವ ಸಂಭವವಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಬಿರುಗಾಳಿ ವೇಗ ಹೆಚ್ಚಾಗಿದೆ. ಇದೆಲ್ಲ ಕಾರಣದಿಂದ ಕರ್ನಾಟಕದಾದ್ಯಂತ ಮತ್ತೆ ಮಳೆ ಅಬ್ಬರಿಸಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸೆಪ್ಟಂಬರ್ 26ರವರೆಗೆ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಸಾಮಾನ್ಯವಾಗಿ ಮೋಡ ಕವಿದ ವಾತಾವರಣ, ಕೊಂಚ ಚಳಿ ಇರಲಿದೆ. ಕೆಲವು ಬಡಾವಣೆಗಳಲ್ಲಿ ಅಲ್ಲಲ್ಲಿ ಸೋನೆಯಿಂದ ತುಂತುರು ಮಳೆ ಆಗುವ ಸಾಧ್ಯತೆ ಇದೆ. ನಗರದ ತಾಪಮಾನ ಗರಿಷ್ಠ 28 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಕಂಡು ದಾಖಲಾಗಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications