Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ರೈಲು ಕ್ರಾಂತಿ: 1864ರ ಮೊದಲ ಹಳಿಯಿಂದ ಸಾಗಿ ಬಂದ ಪಯಣ, ರಾಜ್ಯದ ಸಂಪೂರ್ಣ ರೈಲು ಚಿತ್ರಣ ಇಲ್ಲಿದೆ

Karnataka Railway Network: ನೈಋತ್ಯ ರೈಲ್ವೆ ವ್ಯಾಪ್ತಿಗೆ ಒಳಪಡುವ (SWR) ಕರ್ನಾಟಕದಲ್ಲಿ ರೈಲು ಸಾರಿಗೆ ಅತ್ಯುತ್ತಮ ಹಾಗೂ ಅಗ್ಗದ ಸೇವೆಯಾಗಿದೆ. 1864ರಲ್ಲಿ ಆರಂಭವಾದ ರೈಲು ಜಾಲ ಇಂದು ರಾಜಧಾನಿ ಬೆಂಗಳೂರಿನಂತಹ ಮಹಾನಗರದಿಂದ ಹಿಡಿದು, ಗುಡ್ಡಗಾಡು, ಬೆಟ್ಟಗಳ ಮಧ್ಯ ಹಾದು ಗ್ರಾಮೀಣ ಭಾಗದವರೆಗೂ ಸುಲಲಿತ ಸಂಪರ್ಕ ಕಲ್ಪಿಸಿದೆ. ರಾಜ್ಯದಲ್ಲಿ ರೈಲು ಜಾಲ ವಿಸ್ತರಣೆ ಆಗುತ್ತಲೇ ಇದೆ. ನಿಲ್ದಾಣಗಳು ಪುನರಾಭಿವೃದ್ಧಿಗೊಳ್ಳುತ್ತಿವೆ. ರೈಲು ಸಾರಿಗೆ ಬಲಗೊಳ್ಳುತ್ತಿದ್ದು, ರಸ್ತೆ ಸಾರಿಗೆಗಿಂತ ಉತ್ತಮ ಮತ್ತು ಅನುಕೂಲಕರ ಸೇವೆಯಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರಿಗೆ ಮಾತ್ರವಲ್ಲದೇ ಸರಕು ಸಾಗಣೆಗೂ ಪ್ರಯೋಜನ ಒದಗಿಸಿದೆ. ಈ ರೈಲು ಹಳಿಗಳು ದ್ವಿಪಥಗೊಳ್ಳುವ ಜೊತೆಗೆ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ಒದಗಿಸುತ್ತವೆ. 2026ರ ಕರ್ನಾಟಕ ಬಜೆಟ್‌ನಲ್ಲೂ ರೈಲು ಯೋಜನೆಗಳಿಗೆ ಹೆಚ್ಚಿನ ಅನುದಾನ ನಿರೀಕ್ಷೆ ಇದೆ. ರಾಜ್ಯದ ರೈಲು ಜಾಲ, ಅಭಿವೃದ್ಧಿ, ಹೊಸ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ರೈಲು ಮಾರ್ಗದ ಆರಂಭ, ಇತಿಹಾಸ

ರಾಜ್ಯದಲ್ಲಿ ರೈಲು ಜಾಲವು 1864 ರಲ್ಲಿ ಶುರುವಾಯಿತು. ಆರಂಭದಲ್ಲಿ ಬೆಂಗಳೂರು ಕಂಟೋನ್ಮೆಂಟ್-ಜೋಲಾರಪೇಟೆ ಮಾರ್ಗದಲ್ಲಿ ಮೊದಲ ರೈಲು ಸಂಚಾರ ಮಾಡಿತು. ಅಂದಿನ ಮೈಸೂರು ರಾಜ್ಯ (ಈಗಿನ ಕರ್ನಾಟಕ) ರೈಲ್ವೆಯೊಂದಿಗೆ ಸೇರಿದ ಬಳಿಕ 1870ರ ಹೊತ್ತಿಗೆ ಜಾಲ ವೇಗವಾಗಿ ವಿಸ್ತರಣೆ ಆಗಲು ಶುರುವಾಯಿತು. ಸ್ವಾತಂತ್ರ್ಯ ಸಿಕ್ಕ ಬಳಿಕ 1951ರಲ್ಲಿ ದಕ್ಷಿಣ ರೈಲ್ವೆಯೊಂದಿಗೆ ಸಂಯೋಜನೆಗೊಂಡಿತಲ್ಲದೇ, 2003 ರಲ್ಲಿ ನೈಋತ್ಯ ರೈಲ್ವೆ ವಲಯವು (SWR) ಅಸ್ತಿತ್ವಕ್ಕೆ ಬಂತು. ಇವತ್ತಿನವರೆಗೂ ರೈಲು ಜಾಲ ಅಭಿವೃದ್ಧಿ ಕಾಣುತ್ತಲೇ ಬಂದಿದೆ. ವಿದ್ಯುದೀಕರಣ, ಹಳಿ ದ್ವಿಪಥ, ಹೊಸ ಮಾರ್ಗಗಳು, ರೈಲು ಜಾಲ ಅಭಿವೃದ್ಧಿ ಕೆಲಸ ಇಂದಿಗೂ ನಡೆಯುತ್ತಿವೆ.

ಒಟ್ಟಾರೆ ರೈಲು ಜಾಲ ಎಷ್ಟಿದೆ?

ಕರ್ನಾಟಕದ ಬೆಂಗಳೂರಿನಿಂದ ಬೆಳಗಾವಿ, ಕರಾವಳಿಯ ಮಂಗಳೂರಿನಿಂದ ಬೀದರ್, ಬಳ್ಳಾರಿವರೆಗೂ ಜಾಲ ಹೊಂದಿದೆ. ಅಂತಾರಾಜ್ಯಗಳಿಗೂ ಸಂಪರ್ಕ ಕಲ್ಪಿಸುತ್ತದೆ. 2025 ರವರೆಗಿನ ನಿಖರ ಮಾಹಿತಿ ಪ್ರಕಾರ ರಾಜ್ಯದಲ್ಲಿ 3,596 ಕಿಲೋ ಮೀಟರ್‌ನಷ್ಟು ರೈಲು ಜಾಲ ಇದೆ. ಹೊಸದಾಗಿ 25 ರೈಲು ಯೋಜನೆಗಳು ಈಗಾಗಲೇ ಘೋಷಣೆ ಆಗಿವೆ. ಅದರಲ್ಲಿ 15 ಹೊಸ ರೈಲು ಮಾರ್ಗಗಳಾದರೆ, 10 ರೈಲು ಹಳಿ ದ್ವಿಪಥಗೊಳಿಸುವ ಯೋಜನೆಗಳಾಗಿವೆ. ಪೂರ್ಣಗೊಂಡ ಹೊಸ ಮಾರ್ಗದ ಕೆಲವು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚಾರ ಸೇವೆ ಆರಂಭಿಸಲಾಗಿದೆ. ಸಾಕಷ್ಟು ಕಡೆ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿವೆ.

Karnataka Railways Evolution

ದಶಕದಲ್ಲಿ ಆದ ಬದಲಾವಣೆ

2014 ರಿಂದ ಇತ್ತೀಚಿನವರೆಗೆ ರಾಜ್ಯದಲ್ಲಿ ಸುಮಾರು 1,750 ಕಿಲೋ ಮೀಟರ್ ನಷ್ಟು ಹೊಸ ರೈಲು ಹಳಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಗ್ರಾಮೀಣ, ನಗರ, ತಾಲೂಕು ಭಾಗಗಳಿಗೂ ಸಂಪರ್ಕ ಸಾಧಿಸಲಾಗಿದೆ. ರೈಲು ದ್ವಿಪಥಗೋಳಿಸುವ ಯೋಜನೆ, ಇಂಧನ ಚಾಲಿತ ರೈಲುಗಳನ್ನು ಸೇವೆಯಿಂದ ಮುಕ್ತಗೊಳಿಸಿ ಪರಿಸರ ಸ್ನೇಹಿ ರೈಲು ಸಂಚಾರಕ್ಕೆ ಆದ್ಯತೆ ನೀಡಿದ ರೈಲ್ವೆ ಇಲಾಖೆಯ ವರಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಸದ್ಯದ ಪರಿಸ್ಥಿತಿ, ದ್ವಿಪಥ ಲೈನ್, ಹೊಸ ಯೋಜನೆಗೆ ಬೇಡಿಕೆ

ದಶಕದ ಹಿಂದೆ ಹೋಲಿಸಿದರೆ ರೈಲು ಸೇವೆ ಈಗ ಉತ್ತಮವಾಗಿದೆ. ರಾಜ್ಯದ ಪ್ರಮುಖ ಮಾರ್ಗಗಳನ್ನು ಒಳಗೊಂಡ 1713 ರೈಲು ಹಳಿ ದ್ವಿಪಥಗೊಳಿಸಲು ಕೇಂದ್ರ ವರ್ಷಗಳ ಹಿಂದೆ ಅನುಮೋದನೆ ನೀಡಿತ್ತು. ಅದರಲ್ಲಿ 1250 ಕಿಲೋ ಮೀಟರ್‌ನಷ್ಟು ಮಾರ್ಗವು ದ್ವಿಪಥಗೊಂಡಿದೆ. 2014ರಿಂದ ಈವರೆಗೆ ರಾಜ್ಯದಲ್ಲಿ 1,652 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ, ಇದು ಶ್ರೀಲಂಕಾದ ಒಟ್ಟು ರೈಲ್ವೆ ಜಾಲಕ್ಕಿಂತ ಅಧಿಕ ಎನ್ನಬಹುದು.

ಕರ್ನಾಟಕದ ಇಲ್ಲಿ ಹೊಸ ರೈಲು ಮಾರ್ಗಗಳಿಗೆ ಬೇಡಿಕೆ

ಉತ್ತರ ಕರ್ನಾಟಕ ಭಾಗದ ಗದಗ, ಅಂಕೋಲಾ, ಯಲವಿಗಿ, ಸವದತ್ತಿ ಹಾಗೂ ದಕ್ಷಿಣದ ಚಾಮರಾಜನಗರದಿಂದ ಬೀದರ್ ಮಾರ್ಗ ಸೇರಿದಂತೆ ವಿವಿಧೆಡೆ ಹೊಸ ರೈಲು ಮಾರ್ಗಕ್ಕೆ ಬೇಡಿಕೆ ಇದೆ. ಕೆಲವು ಪ್ರಸ್ತಾವನೆಗಳು ಕೇಂದ್ರಕ್ಕೆ ಸಲ್ಲಿಕೆ ಆಗಿವೆ. ಅಗತ್ಯವಿರುವ ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣ, ಸ್ಟೀಲ್ ಬ್ರಿಡ್ಜ್ ನಿರ್ಮಾಣ, ಹೊಸ ಮಾರ್ಗ ಯೋಜನೆ ಕೆಲಸಗಳು ಚಾಲ್ತಿಯಲ್ಲಿವೆ.

ಕೇಂದ್ರ-ರಾಜ್ಯ ಸರ್ಕಾರಗಳಿಂದ ಅನುದಾನ, ಬಜೆಟ್ ಮೇಲೆ ನಿರೀಕ್ಷೆ

ಕರ್ನಾಟಕ ರೈಲು ಯೋಜನೆಗಳಿಗೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವು ಅನುದಾನ ಹಂಚಿಕೆ ಮಾಡುತ್ತದೆ. 2026 ಫೆಬ್ರವರಿ 01 ರಂದು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರಾಜ್ಯದ ರೈಲು ಯೋಜನೆಗಳಿಗಾಗಿ 7,768 ಕೋಟಿ ರೂಪಾಯಿ ಘೋಷಿಸಿದೆ. ಇದರಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) 550 ಕೋಟಿ ರೂ. ಹಂಚಿಕೆಯಾಗಿದೆ. ಕಳೆದ ವರ್ಷದ (2025) ಬಜೆಟ್‌ನಲ್ಲಿ ಕೇಂದ್ರ BSRP ಯೋಜನೆಗೆ 350 ಕೋಟಿ ರೂಪಾಯಿ ಹಂಚಿಕೆ ಮಾಡಿತ್ತು.

2026 ಮಾರ್ಚ್ ಮೊದಲ ವಾರದ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಇದರಲ್ಲೂ ಸಹ ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ಕರ್ನಾಟಕದ ಇತರ ರೈಲು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನಿರೀಕ್ಷೆ ಇದೆ. ರಾಜ್ಯದಲ್ಲಿ ವೇಗವಾಗಿ ರೈಲು ಜಾಲ ವಿಸ್ತರಣೆ, ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವ ಅಗತ್ಯತೆ ಇದೆ.

61 ರೈಲು ನಿಲ್ದಾಣಗಳು ಮೇಲ್ದರ್ಜೆಗೆ, ಹೈಟೆಕ್ ಸ್ಪರ್ಶ

ಸುಮಾರು ಎರಡು ವರ್ಷಗಳ ಹಿಂದೆ ಅಗತ್ಯ ಇರುವ ಕಡೆಗೆ ರೈಲ್ವೆ ಇಲಾಖೆಗೆ 2000 ಕೋಟಿ ವೆಚ್ಚದಲ್ಲಿ ಹೊಸ ರೈಲು ನಿಲ್ದಾಣಗಳ ಸ್ಪಾಪನೆಗೆ ಘೋಷಿಸಿತು. ಇರುವ ನಿಲ್ದಾಣಗಳಿಗೆ 12,000 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಲು ನಿರ್ಧರಿಸಿತು. ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ಮೇಲ್ದರ್ಜೆಗೆ ಏರಿಸಲು ಕರ್ನಾಟಕದ 61 ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. 2027ರ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈಗಾಗಲೇ ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿ, ಗೋಗಾಕ್, ಮುನಿರಾಬಾದ್ ನಿಲ್ದಾಣಗಳಲ್ಲಿ ಆಧುನೀಕರಣ ಪೂರ್ಣಗೊಂಡಿದೆ. ಬೆಂಗಳೂರು ಕಂಟೋನ್ಮೆಂಟ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR ಬೆಂಗಳೂರು), ಮಲ್ಲೇಶ್ವರಂ, ವೈಟ್‌ಫೀಲ್ಡ್, ಕೃಷ್ಣರಾಜಪುರಂ, ಕೆಂಗೇರಿ, ಚನ್ನಸಂದ್ರ, ದೊಡ್ಡಬಳ್ಳಾಪುರ, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ಹೊಸೂರು, ಕುಪ್ಪಂ, ಮಲೂರ್, ಮಂಡ್ಯ, ರಾಮನಗರ, ಗದಗ, ಬಾದಾಮಿ, ಅಳ್ನಾವರ, ಕೊಪ್ಪಳ, ಬಂಟ್ವಾಳ, ಕಡೂರು, ಬೀರೂರು, ತರೀಕೆರೆ, ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಜಾಜೂರು ಸೇರಿದಂತೆ ಇತರ ರೈಲು ನಿಲ್ದಾಣಗಳು ಶೀಘ್ರವೇ ಪುನರ್ ಅಭಿವೃದ್ಧಿ ಕಾಣಲಿವೆ.

ಶೇ.98ರಷ್ಟು ರೈಲು ಜಾಲ ವಿದ್ಯುದೀಕರಣ, ಸವಾಲುಗಳು

ಕರ್ನಾಟಕದಲ್ಲಿ 2025ರ ಅಂತ್ಯಕ್ಕೆ ಶೇ.98ರಷ್ಟು (3370km) ಎಲ್ಲ ರೈಲು ಮಾರ್ಗಗಳು ವಿದ್ಯುದೀಕರಣಗೊಂಡಿವೆ. ಬಹುತೇಕ ಈ ಮಾರ್ಗಗಳಲ್ಲಿ ವಿದ್ಯುತ್ ಚಾಲಿತ ರೈಲುಗಳು ಸಂಚರಿಸುತ್ತಿವೆ. ದುರ್ಗಮ ಪ್ರದೇಶ, ಘಾಟಿ ಸ್ಥಳಗಳಲ್ಲಿ ರೈಲು ವಿದ್ಯುದೀಕರಣ ಕೊಂಚ ಬಾಕಿ ಇದೆ ಎನ್ನಲಾಗಿದೆ. ದೇಶದ ಇತರ ರಾಜ್ಯಗಳ ಪೈಕಿ ರೈಲು ಯೋಜನೆಗಳ ಅಭಿವೃದ್ಧಿಯಲ್ಲಿ ಕರ್ನಾಟಕವು ಉತ್ತಮ ಸ್ಥಾನದಲ್ಲಿದೆ.

ಸವಾಲುಗಳನ್ನು ನೋಡುವುದಾದರೆ ಹೊಸ ಮಾರ್ಗಗಳು, ಅಭಿವೃದ್ಧಿ ಯೋಜನೆಗಳಿಗೆ ಕೆಲವೆಡೆ ಭೂಮಿ ಸಮಸ್ಯೆ ಆಗುತ್ತಿದೆ. ನದಿಗಳು, ಘಾಟಿ ಪ್ರದೇಶಗಳಲ್ಲಿ ಕಾಮಗಾರಿ ಕಷ್ಟವಾಗಿದೆ. ಹೆಚ್ಚಿನ ಹಣ ವಿನಿಯೋಗಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯಗಳಿಂದ ಅನುದಾನ ಕೊರತೆ ಉಂಟಾಗಿ ನಿಗದಿತ ಕಾಲ ಮಿತಿಯಲ್ಲಿ ಯೋಜನೆ ಪೂರ್ಣಗೊಳ್ಳದೇ, ಕಾಮಗಾರಿ ನಿಧಾನವಾದ ಉದಾಹರಣೆಗಳು ಸಾಕಷ್ಟಿವೆ. ಈ ಸವಾಲು ನಿವಾರಿಸುತ್ತಲೇ ಅಭಿವೃದ್ಧಿಯತ್ತ ಹೆಜ್ಜೆ ಇಡಲಾಗಿದೆ.

ಕರ್ನಾಟಕ ರೈಲು ಅಭಿವೃದ್ಧಿ ಯೋಜನೆಗಳು

ಕರ್ನಾಟಕ ರೈಲು ಯೋಜನೆಗಳಿಗೆ 2026ರ ಬಜೆಟ್ ನಲ್ಲಿ ಒಟ್ಟು 7768 ಕೋಟಿ ಅನುದಾನ ನೀಡಲಾಗಿದೆ. 2025ರಲ್ಲಿ ರೈಲು ಯೋಜನೆವಾರು ಅನುದಾನವನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿತ್ತು. ಯೋಜನೆಗಳು (ಹೊಸ ಮಾರ್ಗ, ವಿದ್ಯುದೀಕರಣ, ಹಳಿ ದ್ವಿಪಥ ಯೋಜನೆ ಸೇರಿವೆ) ಯಾವುವು, ಅನುದಾನ ಎಷ್ಟು? ಪಟ್ಟಿ ಇಲ್ಲಿದೆ.

1. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗ: ₹64.05 ಕೋಟಿ

2. ಗದಗ-ವಾಡಿ ಮಾರ್ಗದ ಯೋಜನೆ: ₹549.45 ಕೋಟಿ

3. ಯಶವಂತಪುರದಿಂದ ಚನ್ನಸಂದ್ರ ಮಾರ್ಗ ಯೋಜನೆ: ₹178.8 ಕೋಟಿ

4. ಕಲಬುರಗಿ-ಬೀದರ್ ಮಾರ್ಗದ ಯೋಜನೆ: ₹38.43 ಕೋಟಿ

5. ಹುಬ್ಬಳ್ಳಿ-ಚಿಕ್ಕಜಾಜೂರು ಮಾರ್ಗ ಯೋಜನೆ: ₹27.714 ಕೋಟಿ

6. ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗ: ₹78.4 ಕೋಟಿ

7. ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆ: ₹549.45 ಕೋಟಿ

8. ಬಾಗಲಕೋಟ-ಕುಡಚಿ ಮಾರ್ಗದ ಯೋಜನೆ: ₹428.1 ಕೋಟಿ

9. ಬೈಯಪನಹಳ್ಳಿಯಿಂದ ಹೊಸೂರು ಮಾರ್ಗ: ₹223.5 ಕೋಟಿ

10. ಹೊಟಗಿ-ಕುಡಗಿ-ಗದಗ ಮಾರ್ಗದ ಯೋಜನೆ: ₹401.15 ಕೋಟಿ

11. ತೋರಣಗಲ್ಲು-ರಂಜಿತ್‌ಪುರ ಮಾರ್ಗದ ಯೋಜನೆ: ₹104.47 ಕೋಟಿ

12. ಮುನಿರಾಬಾದ್-ಮಹಬೂಬ್ನರ ಮಾರ್ಗದ ಯೋಜನೆ: ₹214.05 ಕೋಟಿ

13. ಮಾರಿಕುಪ್ಪಂ-ಕುಪ್ಪಂ ಯೋಜನೆ: ₹25.62 ಕೋಟಿ

14. ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ಯೋಜನೆ: ₹8.54 ಕೋಟಿ

15. ಯಲಹಂಕ-ಪೆನುಕೊಂಡ ರೈಲ್ವೆ ಮಾರ್ಗದ ಯೋಜನೆ: ₹4.47 ಕೋಟಿ

16. ಅರಸೀಕೆರೆ-ತುಮಕೂರು ರೈಲ್ವೆ ಮಾರ್ಗದ ಯೋಜನೆ: ₹13.41 ಕೋಟಿ‌

17. ರೇಣಿಗುಂಟಾ, ಗೂಟಿ, ವಾಡಿಯಲ್ಲಿ ಬೈಪಾಸ್‌ಗೆ: ₹15.198 ಕೋಟಿ‌

18. ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಯೋಜನೆ: ₹15.54 ಕೋಟಿ

19. ಕೆಂಗೇರಿ-ರಾಮನಗರ-ಮೈಸೂರು ಮಾರ್ಗದ ಯೋಜನೆ: ₹10.728 ಕೋಟಿ

20. ಕಂಕನಾಡಿ-ಪಣಂಬೂರು ರೈಲ್ವೆ ಮಾರ್ಗದ ಯೋಜನೆ: ₹8.94 ಕೋಟಿ‌

21. ಬೆಂಗಳೂರು-ವೈಟ್‌ಫೀಲ್ಡ್-ಕೃಷ್ಣರಾಜಪುರಂ ಚತುಷ್ಪಥ ಪುಣೆ, ಮೀರಜ್-ಲೋಂಡಾ ಮಾರ್ಗದ ರೈಲ್ವೆ ಯೋಜನೆ: ₹357.6 ಕೋಟಿ

22. ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ ಡಿ ಗಾಮಾ (352.28 ಕಿ.ಮೀ) ರೈಲ್ವೆ ಮಾರ್ಗದ ಯೋಜನೆ: ₹413.73 ಕೋಟಿ

23. ದೌಂಡ್-ಕಲಬುರಗಿ ಡಬ್ಲಿಂಗ್ ಮತ್ತು ಪುಣೆ-ಗುಂತಕಲ್ ವಿದ್ಯುತೀಕರಣಕ್ಕೆ ಒಟ್ಟು 641.37 ಕಿ.ಮೀ. ಮಾರ್ಗದ ಯೋಜನೆ: ₹84.39 ಕೋಟಿ

ಕರ್ನಾಟಕದ ರೈಲು ಜಾಲದ ವಿಶೇಷತೆಗಳು

* ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು (SSS Railway Station) ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ.

* SSS ನಿಲ್ದಾಣ 1,507 ಮೀಟರ್ ಉದ್ದದೊಂದಿಗೆ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಪಟ್ಟಿಗೆ ಸೇರಿದೆ. * ಬೆಂಗಳೂರು ಭಾಗದ ಯಲಹಂಕದಲ್ಲಿ 16 ಪ್ಲಾಟ್‌ಫಾರ್ಮ್‌ಗಳೊಂದಿಗೆ ದೇಶದ ಅತಿದೊಡ್ಡ ವರ್ಟಿಕಲ್ ಸ್ಟಾಕ್ಡ್ ರೈಲ್ವೆ ಟರ್ಮಿನಲ್ ನಿರ್ಮಾಣವಾಗಲಿದೆ.

* ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯದಂತಹ ಕಾಡು ರಸ್ತೆಯಲ್ಲಿ ಯಶಸ್ವಿಯಾಗಿ ವಿದ್ಯುದೀಕರಣ ಕೆಲಸಗಳು ನಡೆದಿವೆ.

* ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ವಂದೇ ಭಾರತ್ ಸ್ಲೀಪರ್ ರೈಲುಗಳು ಸಂಚರಿಸಬಲ್ಲ ರೈಲು ಮೂಲ ಸೌಕರ್ಯವನ್ನು ಕರ್ನಾಟಕ ಹೊಂದಿದೆ.

* ವಿದ್ಯುದೀಕರಣದಲ್ಲಿ ರೈಲು ಜಾಲ ಬಹುತೇಕ ಪೂರ್ಣಗೊಂಡಿದೆ.

* 61 ರೈಲು ನಿಲ್ದಾಣಗಳು ಹಾಗೂ ಇತರ ರೈಲು ನಿಲ್ದಾಣಗಳು ಹೈಟೆಕ್ ಸ್ಪರ್ಶ ಪಡೆಯಲಿವೆ.

* ಜಿಲ್ಲೆ, ತಾಲೂಕು, ಮಹಾನಗರಳಿಗೆ ಮಾತ್ರವಲ್ಲದೇ ಹಳ್ಳಿ ಭಾಗಗಳಲ್ಲೂ ರೈಲು ಸೇವೆ ಲಭ್ಯವಿದೆ. ರೈಲು ಸಾರಿಗೆ ಇಲ್ಲದ ಕಡೆಗಳಲ್ಲಿ ಮಾರ್ಗ ಅಭಿವೃದ್ಧಿ ಆಗುತ್ತಿದೆ.

* ರೈಲು ನಿಲ್ದಾಣಗಳು ಹೈಟೆಕ್ ಆಗುವ ಜೊತೆಗೆ ಸ್ವಯಂ ಪ್ರೇರಿತ ಟಿಕೆಟ್ ನೀಡುವ ವ್ಯವಸ್ಥೆ ಇದೆ.

* ಭಾರತೀಯ ರೈಲ್ವೆ ಇಲಾಖೆಯ ನಿರ್ವಹಣೆ, ಜಾರಿಗೆ ತರುವ ಯಾವುದೇ ವಿಧದ ಯೋಜನೆ, ಉಪಕ್ರಮಗಳಿಗೆ ಕರ್ನಾಟಕ ರೈಲು ಸಹ ಒಳಪಡುತ್ತದೆ.

ಕರುನಾಡಿನ ಜನರು ದೀರ್ಘ ಪ್ರಯಾಣಕ್ಕೆ ರೈಲು ಪ್ರಥಮ ಆದ್ಯತೆ ಆಗಿದೆ. ಇಂದಿನ ಡಿಜಟಲ್ ಯುಗದಲ್ಲಿ ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಸೇವೆ, ನಿಲ್ದಾಣಗಳ ಸೌಕರ್ಯ ಲಭ್ಯವಾಗುತ್ತಿವೆ. ಉದ್ದೇಶಿತ ಯೋಜನೆಗಳು ಮುಂದಿನ ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಆಗ ಪ್ರತಿ ಭಾಗಕ್ಕೂ ರೈಲು ಸೇವೆ ದೊರೆತು ಸಾರಿಗೆಯಲ್ಲಿ ಇನ್ನಷ್ಟು ಸುಧಾರಣೆ ನಿರೀಕ್ಷಿಸಬಹುದು.

ಕರ್ನಾಟಕ ರೈಲು ಕುರಿತು ಪ್ರಮುಖ ಪ್ರಶ್ನೋತ್ತರಗಳು

1. ಕರ್ನಾಟಕದಲ್ಲಿನ ಪ್ರಮುಖ ರೈಲು ವಲಯ ಯಾವುದು?

ಕರ್ನಾಟಕದ ಪ್ರಮುಖ ರೈಲು ವಲಯವೆಂದರೆ ನೈಋತ್ಯ ರೈಲ್ವೆ (SWR). ಇದರ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿದೆ. ಈ ವಲಯವು ರಾಜ್ಯದ ಬಹುತೇಕ ಪ್ರಮುಖ ನಗರಗಳನ್ನು ರೈಲು ಮಾರ್ಗದ ಮೂಲಕ ಸಂಪರ್ಕಿಸುತ್ತದೆ.

2. ಕರ್ನಾಟಕದಿಂದ ಇತರ ರಾಜ್ಯಗಳಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್ ರೈಲುಗಳು ಯಾವುವು?

ಕರ್ನಾಟಕದಿಂದ ಬೆಂಗಳೂರು ಮೂಲಕ ಮುಂಬೈ, ಚೆನ್ನೈ, ಹೈದರಾಬಾದ್, ನವದೆಹಲಿ ಸೇರಿದಂತೆ ಹಲವು ಮಹಾನಗರಗಳಿಗೆ ನೇರ ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳ ಲಭ್ಯತೆ ಇದೆ.

3. ಕೇಂದ್ರ ಬಜೆಟ್ 2026ರಲ್ಲಿ ಕರ್ನಾಟಕದ ರೈಲ್ವೆಗೆ ಸಿಕ್ಕ ಅನುದಾನವೆಷ್ಟು?

ಕೇಂದ್ರ ಸರ್ಕಾರವು ಸದರಿ ಬಜೆಟ್‌ನಲ್ಲಿ ಕರ್ನಾಟಕದ ರೈಲು ಅಭಿವೃದ್ಧಿ ಯೋಜನೆಗಳಿಗೆ 7768 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಇದರಲ್ಲಿ ಹೊಸ ಮಾರ್ಗ, ಇನ್ನಿತರ ಯೋಜನೆಗಳು ಸೇರಿವೆ.

4. ಕರ್ನಾಟಕ ರೈಲು ಜಾಲ ಎಷ್ಟಿದೆ?

ಕರ್ನಾಟಕದ ರೈಲು ಜಾಲವು ಪ್ರಸ್ತುತ ಸುಮಾರು 3,590 ಕಿಮೀ.ಲೂ ಹೆಚ್ಚಾಗಿದೆ (2022ರ ಅಂತ್ಯಕ್ಕೆ). 2014ರಿಂದ ಈಚೆಗೆ ರಾಜ್ಯದಲ್ಲಿ 1,652 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+