Transport Staff Strike : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಸಾರಿಗೆ ನೌಕರರ ಧರಣಿ ಸತ್ಯಾಗ್ರಹ!
ಬೆಂಗಳೂರು ಜನವರಿ 24: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ರಾಜ್ಯಾದಂತ್ಯ ಎಲ್ಲ ನಿಗಮಗಳ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ. ಆದರೆ ಈ ಧರಣಿ ಸತ್ಯಗ್ರಹದಿಂದಾಗಿ ಯಾವುದೇ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇಂದು ಬೆಳಿಗ್ಗೆ 11ರಿಂದ ಸಂಜೆ 5.30ರವರೆಗೆ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಕರೆ ನೀಡಲಾಗಿದೆ.
ಬಸ್ಗಳು ಎಂದಿನಂತೆ ಸಂಚರಿಸಲಿದ್ದು ನೌಕರರ ಧರಣಿ ಸತ್ಯಾಗ್ರಹದಿಂದ ಯಾವುದೇ ಬಸ್ ಸಂಚಾರ ಸ್ಥಗಿತಗೊಳ್ಳುವುದಿಲ್ಲ ಎಂದು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ವೇತನ ಹೆಚ್ಚಳ, ಖಾಲಿ ಇರುವ ಉದ್ಯೋಗಗಳ ಭರ್ತಿ, ಮುಷ್ಕರದ ಸಂದರ್ಭದಲ್ಲಿ ವಜಾಗೊಳಿಸಲಾಗಿರುವ ಸಿಬ್ಬಂದಿಗಳನ್ನು ಮರು ನೇಮಕಾತಿ ಸೇರಿದಂತೆ 16 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಲ್ಲ ನಿಗಮಗಳ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ ಕೆಎಸ್ಆರ್ಟಿಸಿ ಅಂಡ್ ವರ್ಕರ್ಸ್ ಫೆಡರೇಷನ್ನ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಇಂದು ನಾಲ್ಕು ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆದರೆ ಬಸ್ ಸಂಚಾರ ಎಂದಿನಂತೆ ಇರಲಿದ್ದು ಬಸ್ ಚಾಲಕರು, ನಿರ್ವಹಕರು ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ರಜೆ ಇರುವ ಸಿಬ್ಬಂದಿಗಳು ಸಂಘದ ಪ್ರಮುಖರು ಮಾತ್ರ ಪ್ತಿಭಟನೆಯಲ್ಲಿ ಆಭಗವಹಿಸಲಿದ್ದಾರೆ ಎಂದು ನೌಕರರ ಯುನೀಯನ್ಗಳು ಮತ್ತು ಸಾರಿಗೆ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಜಿಲ್ಲಾ ಬಸ್ ಘಟಕಗಳ (ಡಿಪೋ) ಮುಂಭಾಗ, ಹುಬ್ಬಳ್ಳಿ, ಕಲಬುರಗಿ, ಬೆಂಗಳೂರು ಸಾರಿಗೆ ನಿಗಮಗಳ ವಿಭಾಗೀಯ ಕಚೇರಿ ಮುಂಭಾಗ ಮತ್ತು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ (ವಾಯವ್ಯ), ಕೆಕೆಆರ್ಟಿಸಿ (ಕಲ್ಯಾಣ) ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.