ನನ್ನನ್ನು ಸೋಲಿಸಲು ಇದು ಗುಜರಾತ್ ಅಲ್ಲ, ಇಲ್ಲಿನ ರಾಜಕಾರಣ ಗೊತ್ತಿದೆ: ಶಾ ವಿರುದ್ಧ ನೇರ ಸಂಘರ್ಷಕ್ಕಿಳಿದ ಜಗದೀಶ್ ಶೆಟ್ಟರ್
ಕೊಪ್ಪಳ, ಮೇ 1: ನನ್ನನ್ನು ಸೋಲಿಸಲು ಇದು ಗುಜರಾತ್ ಅಲ್ಲ. ಇಲ್ಲಿನ ರಾಜಕಾರಣ ಜನರ ಪ್ರೀತಿ ನನಗೆ ಗೊತ್ತಿದೆ ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ನೇರ ಸಂಘರ್ಷದ ಮುನ್ಸೂಚನೆ ನೀಡಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲೇಬೇಕೆಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಮಾತನಾಡಿರುವ ಜಗದೀಶ್ ಶೆಟ್ಟರ್ ರಾಜಕಾರಣದಲ್ಲಿ ಒಳ ಹೊಡೆತ ಹಾಗೂ ಹೊರಹೊಡೆತಗಳಿರುತ್ತವೆ. ಇವೆರಡೂ ಆಘಾತಗಳನ್ನು ಉಂಟುಮಾಡುತ್ತವೆ. ಈಗ ನನ್ನನ್ನು ಸೋಲಿಸಲು ಬಿಜೆಪಿಯವರು ಕಾರ್ಯಕರ್ತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ನನ್ನ ತಾಳ್ಮೆಯ ಕಟ್ಟೆ ಹೊಡೆದು ಹೋಗುತ್ತಿದ್ದು ಇದು ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ನೀವು ಕಾದು ನೋಡಿ ಎಂದು ಹೇಳಿದ್ದಾರೆ.
ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಯಿಂದ ನನ್ನನ್ನು ಹೊರಗೆ ಹಾಕಿದರು ಎಂಬ ಕಾರಣಕ್ಕೆ ಜನರಲ್ಲಿ ಅನುಕಂಪವಿದೆ. ಈಗ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ಶೆಟ್ಟರ್ ಹೇಳಿದ್ದಾರೆ.

ಇಷ್ಟು ವರ್ಷಗಳ ಕಾಲ ಪ್ರಹ್ಲಾದ್ ಜೋಶಿ ಅವರು ಇಷ್ಟು ಮಟ್ಟದ ಪ್ರಚಾರ ಮಾಡಿರಲಿಲ್ಲ. ಅವರ ಮೇಲೆ ಕೇಂದ್ರ ನಾಯಕರ ಒತ್ತಡವಿದೆ. ಅವರು ಅದನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಸೋಲುವ ಭಯದಲ್ಲಿ ಈಗೆಲ್ಲಾ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.
'1994 ರಲ್ಲಿ ನನ್ನ ಮೊದಲ ಚುನಾವಣೆಗೆ ಮೊದಲು, ನಾನು ಮೂರು ವರ್ಷಗಳ ಕಾಲ ಪಕ್ಷದ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡಿದೆ. ನನಗೆ ಪಕ್ಷಕ್ಕೆ ಕಾರ್ಯಕರ್ತರು ಸಿಕ್ಕಿದ್ದಾರೆ. ಅದಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದರು. ಇದು ಬಿಜೆಪಿಯ ಭದ್ರಕೋಟೆಯಾಗಿರಲಿಲ್ಲ. ಶೆಟ್ಟರ್-ಬಿಜೆಪಿ ಕಾಂಬಿನೇಷನ್ನಿಂದಾಗಿ ಒಂದಾಯಿತು. ನಾನು ಜನರಲ್ಲಿ ಮನಸ್ಸಿನ ಆರೋಗ್ಯಕರ ವಾತಾವರಣ ಮತ್ತು ಉತ್ತಮ ಮನಸ್ಥಿತಿಯನ್ನು ಸೃಷ್ಟಿಸಿದೆ' ಎಂದು ಅವರು ಹೇಳಿದ್ದಾರೆ.

'ನಾನು ಸ್ಪರ್ಧಿಸಿದ ಆರು ಬಾರಿಯೂ ಭಾರಿ ಅಂತರದಿಂದ ಗೆದ್ದಿದ್ದೇನೆ. ನಾನು ಇಲ್ಲಿನ ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಅನ್ಯಾಯ ಮತ್ತು ನನ್ನ ಆತ್ಮಗೌರವಕ್ಕೆ ಧಕ್ಕೆಯುಂಟಾಗಿರುವುದು ಜನರ ಆಶಯಗಳಿಗೆ ಅಗೌರವ ತೋರುತ್ತಿದೆ. ಹಾಗಾಗಿ ಒಂದು ಟ್ರೆಂಡ್ ಶುರುವಾಗಿದೆ. ನನ್ನ ವ್ಯಕ್ತಿತ್ವ ಮತ್ತು ಕೆಲಸ ನೋಡಿ ನನಗೆ ಮತ ಹಾಕುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ನಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದು ಮುಖ್ಯವಲ್ಲ' ಎಂದು ಶೆಟ್ಟರ್ ತಿಳಿಸಿದ್ದಾರೆ.
'ನಾನು ಹಿರಿಯ. ನನ್ನ ಮೈನಸ್ ಪಾಯಿಂಟ್ ಏನೆಂದು ಪಕ್ಷ ಹೇಳಲೇ ಇಲ್ಲ. 70 ವರ್ಷ ಮೇಲ್ಪಟ್ಟವರೂ ಸ್ಪರ್ಧಿಸುತ್ತಿದ್ದಾರೆ. ನನಗೆ ಸಂಬಂಧಿಸಿದ ಎಲ್ಲಾ ಸಮೀಕ್ಷೆಗಳು ಸಕಾರಾತ್ಮಕವಾಗಿವೆ. ನನ್ನ ವಿರುದ್ಧ ಯಾವುದೇ ಆರೋಪ ಅಥವಾ ಕುಟುಕು ಕಾರ್ಯಾಚರಣೆಯ ಸಿಡಿ ಇಲ್ಲ. ನಿರಾಕರಣೆಗೆ ಕಾರಣ ನೀಡುವಂತೆ ಪಕ್ಷವನ್ನು ಕೇಳಿದ್ದೆ. ಏಕೆ ಎಂದು ಹೇಳಲು ಯಾವ ಪಕ್ಷದ ನಾಯಕರಿಗೂ ಸಾಧ್ಯವಾಗಿಲ್ಲ' ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.












Click it and Unblock the Notifications