ಬಿಜೆಪಿಯವರ ಬೆದರಿಕೆಗೆ ಕನ್ನಡಿಗರು ಹೆದರುವುದಿಲ್ಲ: ಜೆ ಪಿ ನಡ್ಡಾ ಗೆ ತಿರುಗೇಟು ಕೊಟ್ಟ ಡಿ.ಕೆ. ಶಿವಕುಮಾರ್
ಬೆಂಗಳೂರು,ಮೇ 08: ಬಿಜೆಪಿಗೆ ಮತ ಹಾಕದಿದ್ದರೆ ರಾಜ್ಯಕ್ಕೆ ಕೇಂದ್ರದ ಯೋಜನೆ ನೀಡುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಜನರಿಗೆ ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಕೆಗಳಿಗೆ ಕನ್ನಡಿಗರು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ರಾಜ್ಯದ ಜನರಿಗೆ ಬೆದರಿಕೆ ಹಾಕಿ ಮತ ಪಡೆಯಲು ಮುಂದಾಗಿದ್ದಾರೆ. ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ದೇಶ ಒಕ್ಕೂಟ ವ್ಯವಸ್ಥೆಯಿಂದ ರೂಪುಗೊಂಡಿದೆ. ಕೇಂದ್ರ ಸರ್ಕಾರದ ಆದಾಯದಲ್ಲಿ ಶೇ.41ರಷ್ಟು ಕರ್ನಾಟಕ ರಾಜ್ಯದಿಂದ ಹೋಗುತ್ತಿದೆ. ಇದರಲ್ಲಿ ನಮಗೆ ಮರಳಿ ಬರುತ್ತಿರುವುದು ಬಿಡಿಗಾಸಿನಷ್ಟು ಮಾತ್ರ ಎಂದು ಕಿಡಿಕಾರಿದರು.

ನಡ್ಡಾ ಅವರ ಬೆದರಿಕೆಗೆ ನಾವು ಕನ್ನಡಿಗರು ಹೆದರುವುದಿಲ್ಲ. ಯಾವುದ್ಯಾವುದಕ್ಕೋ ನಾವು ಹೆದರಲಿಲ್ಲ, ಇನ್ನು ಇದಕ್ಕೆ ಹೆದರುತ್ತೇವಾ? ಇನ್ನು ಗೃಹಮಂತ್ರಿಗಳು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದು ಬೆದರಿಕೆ ಹಾಕಿದ್ದರು. ಈ ರೀತಿ ರಾಜ್ಯದ ಜನರನ್ನು ಹೆದರಿಸುತ್ತಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ನಾಯಕರ ವಿರುದ್ದ ಕಿಡಿಕಾರಿದರು.
ಇನ್ನೂ ನಿಮ್ಮ ಗುರಿ 113 ಮುಟ್ಟುತ್ತದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, 113 ನಿಮ್ಮ ಲೆಕ್ಕ. ನಮ್ಮ ಗುರಿ 141. 13ರಂದು ನೋಡಿ, 15ರಂದು ನಾವು ಸರ್ಕಾರ ರಚನೆ ಮಾಡುತ್ತೇವೆ. ಮೊದಲ ಸಂಪುಟದಲ್ಲೇ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ಇದು ಕರ್ನಾಟಕದ ಸ್ವಾಭಿಮಾನದ ಚುನಾವಣೆ. ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ಬಿಜೆಪಿ ಸರ್ಕಾರ ಈ ಯೋಜನೆಗೆ 1 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದರು. ಈ ಡಬಲ್ ಇಂಜಿನ್ ಸರ್ಕಾರ ಇದ್ದಾಗ ನಡ್ಡಾ ಅವರು ಶಿಫಾರಸ್ಸು ಮಾಡಿ ಎಲ್ಲಾ ಇಲಾಖೆ ಅನುಮತಿ ಕೊಡಿಸಿ ಕೆಲಸ ಆರಂಭಿಸಲು ಅವರಿಂದ ಸಾಧ್ಯವಾಗಲಿಲ್ಲ. ಈ ಯೋಜನೆಯಲ್ಲಿ ಆಣೆಕಟ್ಟು ನಿರ್ಮಾಣದ ಕಾಮಗಾರಿಗೆ ಬೇಕಾದ ಭೂಮಿ ವಶಕ್ಕೆ ಪಡೆಯಲು ಸರ್ಕಾರ ಯಾಕೆ ಮುಂದಾಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮಹದಾಯಿ ವಿಚಾರವಾಗಿ ಪ್ರಹ್ಲಾದ್ ಜೋಷಿ ಅವರು ಸಂಭ್ರಮಾಚರಣೆ ಮಾಡಿದರಲ್ಲಾ ಇನ್ನು ಯಾಕೆ ಕೆಲಸ ಆರಂಭಿಸಿಲ್ಲ? ಇವರು ಕೇವಲ ಈ ರೀತಿ ಸುಳ್ಳು ಹಾಗೂ ಬೆದರಿಕೆ ಒಡ್ಡುತ್ತಿದ್ದಾರೆ. ಕರ್ನಾಟಕವೇ ಕೇಂದ್ರಕ್ಕೆ ಆದಾಯ ನೀಡಿ ಸಹಾಯ ಮಾಡುತ್ತಿದೆ. ಇಲ್ಲಿರುವ ವಿದ್ಯಾವಂತರು, ಪ್ರಜ್ಞಾವಂತರು ದೇಶಕ್ಕೆ ಆದಾಯ ನೀಡುತ್ತಿದ್ದಾರೆ. ವಿಶ್ವವೇ ಕರ್ನಾಟಕ ಹಾಗೂ ಬೆಂಗಳೂರು ಮೂಲಕ ಇಡೀ ದೇಶವವನ್ನು ನೋಡುತ್ತಿದೆ ಎಂದು ವಾಜಪೇಯಿ ಅವರೇ ಹೇಳಿದ್ದಾರೆ. ಇದು ಈ ರಾಜ್ಯದ ಶಕ್ತಿ ಎಂದರು.
ಪಕ್ಷದ ಜಾಹೀರಾತಿನ ವಿಚಾರವಾಗಿ 24 ತಾಸಿನಲ್ಲಿ ಉತ್ತರ ನೀಡುವಂತೆ ಚುನಾವಣಾ ಆಯೋಗ ನೋಟೀಸ್ ನೀಡಿದ್ದು, ನಾವು ಉತ್ತರ ನೀಡಿದ್ದೇವೆ. ಈ ವಿಚಾರವಾಗಿ ಆಧಾರ ಏನು ಎಂದು ಕೇಳಿದ್ದು, ಅವರ ರೇಟ್ ಪಟ್ಟಿಯಲ್ಲಿ ಮುಖ್ಯಮಂತ್ರಿ ಹುದ್ದೆ ಹಾಗೂ ಮಂತ್ರಿಗಿರಿ ಹುದ್ದೆಯ ರೇಟ್ ಅನ್ನು ಯತ್ನಾಳ್ ಅವರು ಹೇಳಿದ್ದಾರೆ. ಉಳಿದಂತೆ ಮಾಧ್ಯಮ ವರದಿಗಳು, ಬಿಜೆಪಿ ನಾಯಕರಾದ ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಅವರ ಹೇಳಿಕೆಗಳೇ ಸಾಕ್ಷಿ. ನೀವು ಕೊಟ್ಟಿರುವ ಸಾಕ್ಷಿ ಆಧಾರದ ಮೇಲೆ ನಾವು ಜಾಹೀರಾತು ನೀಡಿದ್ದೇವೆ. ಆಯೋಗದ ನೋಟೀಸ್ ಗೆ ಉತ್ತರ ನೀಡಿದ್ದೇವೆ.
ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಲಭೆ ನಡೆಯಲಿದೆ ಎಂಬ ಬೆದರಿಕೆಗೆ ನೋಟೀಸ್ ನೀಡುವುದಿಲ್ಲವೇ? ನಿಮ್ಮಿಂದ ಸರಿಯಾಗಿ ಅಧಿಕಾರ ಮಾಡಲಾಗದೇ, ಪಾಪ ಪ್ರಧಾನಿಗಳನ್ನು ಬೀದಿ ಬೀದಿ ತಿರುಗಿಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications